ಬೆಂಗಳೂರು: ಬಿಜೆಪಿ ಅಭಿವೃದ್ಧಿಯ ಆಧಾರದಲ್ಲಿ ಧನಾತ್ಮಕ ಕಾರ್ಯಸೂಚಿÀದೊಂದಿಗೆ ಚುನಾವಣೆಗೆ ಹೋಗಬೇಕು ಎನ್ನುವ ಆಶಯ ಇದೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರೂ ಆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ಮೂಲಸೌಕರ್ಯದ ಅಭಿವೃದ್ಧಿ, ಸಂಪರ್ಕ ಕ್ಷೇತ್ರದ ಗಮನಾರ್ಹ ಅಭಿವೃದ್ಧಿ ಬಿಜೆಪಿ ಗೆಲುವಿಗೆ ಪೂರಕ ಎಂದು ನುಡಿದರು.
ಬಡವರಿಗೆ ಅಗತ್ಯವಿರುವ ಸೌಕರ್ಯಗಳಿಗಾಗಿ ಸ್ವಾತಂತ್ರ್ಯ ಬಂದ ಏಳು ದಶಕಗಳ ನಂತರವು ಜನರು ತೊಳಲಾಡುತ್ತದ್ದ ಪರಿಸ್ಥಿತಿ ಇತ್ತು. ಜನರ ಕಷ್ಟಗಳನ್ನು ಬಗೆಹರಿಸುವಲ್ಲಿ ನರೇಂದ್ರ ಮೋದಿಜಿ ದೊಡ್ಡ ಹೆಜ್ಜೆ ಇಟ್ಟರು. ಗಾಂಧೀಜಿ ಹೇಳಿದಂತೆ ಸ್ವಚ್ಛತೆಗೆ ಆದ್ಯತೆ ಕೊಡಲಾಯಿತು ಎಂದವರು ವಿವರಿಸಿದರು.
ಮನೆಯಿಂದ ಸ್ವಚ್ಛತೆ ಆರಂಭವಾಗಬೇಕು. ಉತ್ತರ ಕರ್ನಾಟಕ ಪ್ರವಾಸ ಸಂದರ್ಭದಲ್ಲಿ ಮಹಿಳೆಯರು ಶೌಚಕ್ಕೆ ಹೋಗಲು ಸಂಜೆವರೆಗೂ ಕಾಯಬೇಕಿತ್ತು. ಇದನ್ನು ನಾವು ಸ್ವತಃ ಗಮನಿಸಿದ್ದೇನೆ. ಇಂಥ ಸಮಸ್ಯೆ ಗಮನಿಸಿದ ಮೋದಿಜಿ ಅವರು ಶೌಚಾಲಯಗಳನ್ನು ನಿರ್ಮಿಸಿ ಇದನ್ನು ಬಗೆಹರಿಸಲು ಮುಂದಾದರು. ಈ ವಿಚಾರದಲ್ಲಿ ಶೌಚಾಲಯ ನಿರ್ಮಾಣದ ಕ್ರಾಂತಿ ಮಾಡಿದರು ಎಂದು ಮೆಚ್ಚುಗೆ ಸೂಚಿಸಿದರು.
ಮೋದಿಜಿ ವಾರಣಾಸಿಯಲ್ಲಿ ಪೊರಕೆ ಹಿಡಿದರೆ ದೇಶ ಸ್ವಚ್ಛ ಅಗುತ್ತಾ ಎಂದು ಕಾಂಗ್ರೆಸ್ನವರು ವ್ಯಂಗ್ಯವಾಗಿ ನಕ್ಕು ಟೀಕಿಸಿದ್ದರು. ಆದರೆ, ಶೌಚಾಲಯ ನಿರ್ಮಾಣಕ್ಕೆ ಎಸ್.ಸಿ/ಎಸ್.ಟಿ ಸಮುದಾಯಗಳಿಗೆ 15 ಸಾವಿರ, ಹಿಂದುಳಿದ ವರ್ಗಗಳ ಮನೆಗಳಿಗೆ 12 ಸಾವಿರ ಕೊಡಲಾಯಿತು. 11 ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣ ಮತ್ತು ಹೊಸದಾಗಿ ಯಾವುದೇ ಮನೆ ನಿರ್ಮಾಣ ಮಾಡಿದರು ಶೌಚಾಲಯ ಕಡ್ಡಾಯ ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು.
ಗ್ಯಾಸ್ ಕನೆಕ್ಷನ್ಗೆ ಎಂ.ಪಿ ಗಳ ಶಿಫಾರಸು ಪತ್ರ ಬೇಕಾಗಿತ್ತು. ಅದರೆ, ಈಗ ಗ್ಯಾಸ್ ಇಲ್ಲದ ಮನೆಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ. ಯುಪಿಎ ಸರ್ಕಾರದ ಆರೋಗ್ಯ ಇಲಾಖೆಯ ವರದಿ ಪ್ರಕಾರ ಮಹಿಳೆಯರ ಮೇಲೆ ಹೊಗೆಯಿಂದ ಆಗುವ ತೊಂದರೆ ಬಗ್ಗೆ ಉಲ್ಲೇಖ ಇದ್ದ ವರದಿ ವರದಿಯಾಗಿಯೇ ಉಳಿದಿತ್ತು. ಆದರೆ ಮೋದಿಜಿ ಸರ್ಕಾರದಲ್ಲಿ ಉಚಿತ ಗ್ಯಾಸ್ ನೀಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಮಹಿಳೆಯರು ಖುಷಿಯಲ್ಲಿ ಇದ್ದಾಳೆ. ಶೌಚಾಲಯ ವ್ಯವಸ್ಥೆ ಮತ್ತು ಉಜ್ವಲ ಯೋಜನೆಯನ್ನು ಮನೆ ಮನೆಗೆ ನೀಡಲಾಗಿದೆ. ವಿಧವಾ ವೇತನವನ್ನು ಬಿಎಸ್ ಯಡಿಯೂರಪ್ಪ ಅವರು ಸಂಪುಟ ಸಭೆಯಲ್ಲಿ 200 ರಿಂದ 500 ರೂ ಹೆಚ್ಚಳ ಮಾಡಿದ್ದರು. ಈಗ 1000 ರೂ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆ ಜಾರಿ ಮಾಡಿದ್ದೇವೆ. ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ಪಿಂಚಣಿ ಕೊಡುತ್ತಿದ್ದಾರೆ. ಮನೆಯ ವೃದ್ಧ ವೃದ್ಧೆಗೆ ಸೇರಿ 2400 ರೂ ಕೊಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಇವತ್ತು ಗ್ಯಾರಂಟಿ ಕುರಿತು ಮಾತನಾಡುತ್ತಿದೆ. ತಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮುಖಂಡರು ಏನನ್ನೂ ಮಾಡಲಿಲ್ಲ. ಬಡವರ ಕುರಿತು ಕಳಕಳಿ ಅವರಲ್ಲಿ ಇರಲಿಲ್ಲ. ಕುರ್ಚಿ ರಾಜಕೀಯವಷ್ಟೇ ಅವರ ಎದುರಿಗೆ ಇತ್ತು ಎಂದು ಟೀಕಿಸಿದರು.
ಭರವಸೆ ಈಡೇರಿಸದ ಕಾಂಗ್ರೆಸ್ ಮುಖಂಡರು
ಕಾಂಗ್ರೆಸ್ಸಿಗರಿಗೆ ಬಡವರ ಕಷ್ಟ, ಬಡತನದ ಅರಿವೇ ಇಲ್ಲ ಎಂದು ಆರೋಪಿಸಿದ ಅವರು, ಜನರ ಮಧ್ಯೆಯಿಂದ ಬಂದ ನಾಯಕರು ಯಡಿಯೂರಪ್ಪ ಮತ್ತು ಮೋದಿಜಿ. ಅವರು, ಭರವಸೆ ಕೊಡದೆ ಜನರ ಕಷ್ಟ ಅರ್ಥ ಮಾಡಿಕೊಂಡು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಭರವಸೆ ಕೇವಲ ಆಶ್ವಾಸನೆಯಾಗಿ ಉಳಿಯಲಿದೆ. ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ ಮತ್ತು ಛತ್ತಿಸ್ಘಡದಲ್ಲಿ ಕಾಂಗ್ರೆಸ್ ಮುಖಂಡರೇ ಸಿಡಿದೆದ್ದಿದ್ದಾರೆ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸದೆ ಇರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ಬೇರೆ ರಾಜ್ಯಗಳಲ್ಲಿ ಭರವಸೆ ಹಾಗೇ ಉಳಿದುದು ಯಾಕೆ? ಅದನ್ನು ಅನುಷ್ಠಾನಕ್ಕೆ ತರಲಿಲ್ಲವೇಕೆ? 2001ರಲ್ಲಿ ಇದೇ ರಾಜ್ಯದಲ್ಲಿ ಕೊಟ್ಟ ನಿರುದ್ಯೋಗಿ ಯುವಕರಿಗೆ 5 ಸಾವಿರ ಕೊಡುವ ಭರವಸೆ ಯಾಕೆ ಈಡೇರಿಸಲಿಲ್ಲ? ಎಂದು ಸವಾಲು ಹಾಕಿದರು. ಇದು ಕಾಂಗ್ರೆಸ್- ಬಿಜೆಪಿ ನಡುವಿನ ವ್ಯತ್ಯಾಸ ಎಂದು ತಿಳಿಸಿದರಲ್ಲದೆ, ಬಿಜೆಪಿ ನುಡಿದಂತೆ ನಡೆಯುವ ಪಕ್ಷ. 2023ರ ಚುನಾವಣೆಯಲ್ಲೂ ನಮ್ಮ ವಿಶ್ವಾಸ ಬಹುಮತದ ಅಧಿಕಾರವಾಗಿ ಪರಿವರ್ತನೆ ಆಗಲಿದೆ ಎಂದು ತಿಳಿಸಿದರು.
ಯಾವುದೇ ಯೋಜನೆ ಜಾರಿಗೆ ತರುವಾಗ ಕೆಲವೊಮ್ಮೆ ವ್ಯತ್ಯಾಸಗಳು ಆಗುತ್ತವೆ. 99.9% ಜನರಿಗೆ ಉಜ್ವಲ ಯೋಜನೆಯಿಂದ ಪ್ರಯೋಜನ ಸಿಕ್ಕಿದೆ. ಗ್ಯಾಸ್ ಇದ್ದವರಿಗೆ ಮತ್ತೆ ಗ್ಯಾಸ್ ನೀಡಿದ್ದ ಖಾಸಗಿ ಕಂಪನಿಗಳ ತಪ್ಪನ್ನು ಸರಿಪಡಿಸಲಾಗಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ಬಜೆಟ್ನಲ್ಲಿ ಹಣ ನೀಡಿ ಇಂತಹ ಕೆಲಸ ಮಾಡಿ ಎಂದು ಹೇಳಿರುವ ವ್ಯಕ್ತಿ ನಮ್ಮ ಮೋದಿಜಿ. ಜಲಜೀವನ್ ಮಿಷನ್ ಯೋಜನೆಯಡಿ ನದಿ ಮೂಲದ ಮೇಲ್ಮೈ (ಸರ್ಫೇಸ್) ನೀರು ನೀಡುವ ಯೋಜನೆಯನ್ನು ಮೋದಿಜಿ ಸರ್ಕಾರ ಮಾಡುತ್ತಿದೆ. ಶಾಲೆ ಮತ್ತು ಅಂಗನವಾಡಿ ಶೌಚಾಲಯಗಳಿಗೆ ಈ ಯೋಜನೆ ಮುಖ್ಯವಾಗಿ ರೂಪಿಸಲಾಗಿದೆ. ನಾವು 99% ಪ್ರಣಾಳಿಕೆಯ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಕೋವಿಡ್ ಸಾಂಕ್ರಾಮಿಕದ ಕಾರಣ ಭರವಸೆ ಈಡೇರಿಸಲು ಸ್ವಲ್ಪ ತೊಡಕಾಗಿದೆ ಎಂದು ವಿವರಿಸಿದರು.
ಕಾಂಗ್ರೆಸ್ನಲ್ಲಿ 4 ಸಿಎಂ ಅಭ್ಯರ್ಥಿಗಳು ಎಂಬ ಬಗ್ಗೆ
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ 4 ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಅವರಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರೂ ಸಿಎಂ ಅಭ್ಯರ್ಥಿ ಆಗಿದ್ದಾರೆ. ಇದರ ಬಗ್ಗೆಯೇ ಜಗಳವಾಗುತ್ತಿದೆ ಎಂದು ತಿಳಿಸಿದರು.
ರಸಗೊಬ್ಬರ, ಅಡುಗೆ ಎಣ್ಣೆ, ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಅತ್ಮನಿರ್ಭರತೆ ಸಾಧನೆ ಕಡೆಗೆ ನಾವು ಕೆಲಸ ಮಾಡುತ್ತಿದ್ದೇವೆ. ನಂದಿನಿ ಬಹಳ ಲಾಭದಲ್ಲಿರುವುದಕ್ಕೆ ಕಾರಣ ಭಾಜಪಾ ಮತ್ತು ನಂದಿನಿಗೆ ಹಣ ನೀಡುತ್ತಿರುವುದು ಕಾರಣ. ಬಿಜೆಪಿ ಸರಕಾರ 5 ರೂ ಪ್ರೋತ್ಸಾಹಧನ ನೀಡುತ್ತಿದೆ ಎಂದು ಅವರು ನುಡಿದರು.
ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.