ಚೆನ್ನೈ: ನಟ ಜೋಸೆಫ್ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಅವರನ್ನು ತಮಿಳುನಾಡು ಸರ್ಕಾರ ನವದೆಹಲಿಯ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ.
ಈ ಹುದ್ದೆಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ವಿಜಯ್ ಅವರ ಕೊನೆಯ ಚಿತ್ರ ಎನ್ನಲಾಗುತ್ತಿರುವ ‘ಜನ ನಾಯಗನ್’ ಇನ್ನೂ ಬಿಡುಗಡೆಯಾಗಿಲ್ಲ. ಚಿತ್ರಕ್ಕೆ ಬಂಡವಾಳ ಹೂಡಿರುವ ವೆಂಕಟ್ ನಾರಾಯಣ್ ಅವರಿಗೆ ನಷ್ಟದ ಪರಿಸ್ಥಿತಿ ಎದುರಾಗಿದೆ ಎಂಬ ಚರ್ಚೆಯ ನಡುವೆಯೇ ಈ ನೇಮಕ ನಡೆದಿದೆ.

ಈ ಬೆಳವಣಿಗೆಗೆ ಸಂಬಂಧಿಸಿ ತಮಿಳು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ನೇಮಕಕ್ಕೂ ಸಿನಿಮಾಗೂ ಸಂಬಂಧವಿಲ್ಲ ಎಂದು ತಮಿಳಗ ವೆಟ್ರಿ ಕಳಗಂ ನಾಯಕರು ಸ್ಪಷ್ಟನೆ ನೀಡಿದ್ದಾರೆ.
ವಿಜಯ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ತೆರಳಿದ್ದ ಸಂದರ್ಭದಲ್ಲೂ ವೆಂಕಟ್ ನಾರಾಯಣ್ ಜೊತೆಗಿದ್ದರು. ಅವರ ಆಡಳಿತಾತ್ಮಕ ಅನುಭವ ಮತ್ತು ನಂಬಿಕೆಯ ಆಧಾರದ ಮೇಲೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.






































































