ಬೆಂಗಳೂರು: ಮುಂಬರುವ ಚುನಾವಣೆಗೆ ಜಾತ್ಯತೀತ ಜನತಾದಳ ಭರ್ಜರಿ ತಯಾರಿಯಲ್ಲಿ ತೊಡಗಿದೆ. ಈ ಸಂಬಂಧ ಬೆಂಗಳೂರು ಹೊರವಲಯದ ಬಿಡದಿಯಲ್ಲಿರುವ ಹೆಚ್.ಡಿ.ಕುಮಾರಸ್ವಾಮಿ ಅವರ ಫಾರ್ಮ್ ಹೌಸ್ನಲ್ಲಿ ಆಯೋಜಿತವಾಗಿರುವ ‘ಜನತಾ ಪರ್ವ 1.O ಹಾಗೂ ಮಿಷನ್ 123’ ತರಬೇತಿ ಕಾರ್ಯಾಗಾರ ಗಮನಸೆಳೆದಿದೆ.
ನಾಲ್ಕು ದಿನಗಳ ಕಾರ್ಯಾಗಾರ ಇದಾಗಿದೆ. ಮೊದಲ ದಿನದ ಕಾರ್ಯಾಗಾರವನ್ನು ಉದ್ಘಾಟಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು.
ಹೈಟೆಕ್ ತರಬೇತಿ, ವಿನೂತನ ತರಬೇತಿ:
ನಾಲ್ಕು ದಿನಗಳ ಕಾರ್ಯಗಾರದಲ್ಲಿ ಪಕ್ಷದ ಸಂಘಟನೆ ಹಾಗೂ ಬೆಳವಣಿಗೆ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ. ಹಲವಾರು ಆಯಾಮಗಳಲ್ಲಿ ತರಬೇತಿ ಕೊಡುವ ಕಾರ್ಯಕ್ರಮ ಇದಾಗಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಸರ್ಕಾರ ತರಬೇಕಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಮಾಜಿ ಪ್ರಧಾನ ಮಂತ್ರಿ ದೇವೇಗೌಡರು ಮಾತನಾಡಿ, ತಮ್ಮ ಸುಧೀರ್ಘ ರಾಜಕೀಯದ ದಾರಿಯ ಬಗ್ಗೆಯೂ ಮಾತನಾಡಿದ್ದಾರೆ. ಇದು ಮುಂದಿನ ಚುನಾವಣೆ ಅಭ್ಯರ್ಥಿಗಳಿಗೆ ದಾರಿದೀಪವಾಗಲಿದೆ. ಅವರು ನಡೆದು ಬಂದ ದಾರಿ ಬಗ್ಗೆ ಹೇಳಿದ್ದಾರೆ ಅವರು ತಿಳಿಸಿದರು.
ದೇಶದಲ್ಲಿ ಇರುವ ಚುನಾವಣೆ ಪದ್ದತಿ ಬದಲಾಗಿದ್ದು, ಜಾತ್ಯಾತೀತ ಜನತಾದಳಕ್ಕೆ ಇರುವ ಅವಕಾಶಗಳನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳ ನಡವಳಿಕೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಅಭ್ಯರ್ಥಿಗಳಿಗೆ ಪ್ರಶ್ನಾವಳಿ:
ಮೊದಲ ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಲೆಲ್ಲರಿಗೂ ಪ್ರಶ್ನಾವಳಿಯ ಕಿರು ಹೊತ್ತಿಗೆ ನೀಡಲಾಗಿತ್ತು. ಪ್ರತಿಯೊಬ್ಬರು ಆಸಕ್ತಿಯಿಂದ ಬರೆದಿದ್ದಾರೆ. ಅವರವರ ಕ್ಷೇತ್ರಗಳಿಗೆ ಯಾವ ರೀತಿ ಹೊತ್ತು ಕೊಟ್ಟಿದ್ದಾರೆ. ಅವರಿಗಿರುವ ಅಡೆತಡೆಗಳು ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಉತ್ತರ ನೀಡಿದ್ದಾರೆ. ಒಟ್ಟು 61 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಅಭ್ಯರ್ಥಿಗಳಾಗಿ ಏನು ಸಿದ್ದತೆ ಮಾಡಿಕೊಂಡಿದ್ದಾರೆ ಅನ್ನೋದನ್ನು ಅವರು ಬರೆದಿದ್ದಾರೆ ಎಂದು ಕುಮಾರಸ್ವಾಮಿ ಅವರು ವಿವರಿಸಿದರು.
ಮಂಗಳವಾರದ ಕಾರ್ಯಗಾರದಲ್ಲಿ ಪಂಚರತ್ನ ಕಾರ್ಯಕ್ರಮದ ಬಗ್ಗೆ ಜನತೆ ಮುಂದೆ ತೆಗೆದುಕೊಂಡು ಹೋಗುವುದು ಹೇಗೆ? ಮಿಷನ್ 123 ಪ್ಲಸ್ ಗೆ ಏನು ಮಾಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಯಲಿದೆ. ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಕಾರ್ಯಕ್ರಮ ಇರಲಿದೆ ಎಂದು ಅವರು ಹೇಳಿದರು.
ಚುನಾವಣೆಗೆ 18 ತಿಂಗಳು ಬಾಕಿ ಇದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆಗೆ ಕ್ರಮ ವಹಿಸಲಾಗಿದೆ. ಈ ಸಮಯದಲ್ಲಿ ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡುವೆ ಎಂದು ಹೆಚ್ಡಿಕೆ ತಿಳಿಸಿದರು.