ನಾಗಮಂಗಲ: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪ್ತಣಾಳಿಕೆಯಲ್ಲಿ ಪಂಚ ಗ್ಯಾರಂಟಿಗಳನ್ನು ಒಳಗೊಂಡ 25 ಭರವಸೆಗಳನ್ನು ಘೋಷಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು ಎಲ್ಲಾ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.
ನಾಗಮಂಗಲ ತಾಲೂಕು ತುಪ್ಪದಮಡ ಗ್ರಾಮದಲ್ಲಿ ಎಐಸಿಸಿ ಘೋಷಣೆ ಮಾಡಿರುವ ಗ್ಯಾರಂಟಿ ಕಾರ್ಡ್ ಗಳನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರೊಂದಿಗೆ ವಿತರಣೆ ಮಾಡಿ ಮಾತನಾಡಿದರು.
ಪಂಚಗ್ಯಾರಂಟಿಗಳು ಜನತೆಯ ಕೈ ಹಿಡಿದಿವೆ. ಮಹಿಳೆಯರ ಸಬಲೀಕರಣ, ಯುವಕರಿಗೆ ಉದ್ಯೋಗ, ಮೀಸಲಾತಿ, ಸಾಮಾಜಿಕ ನ್ಯಾಯವನ್ನು ನ್ಯಾಯ ಪತ್ರ ಒಳಗೊಂಡಿದೆ. ಕೆಲವು ಮಹಿಳೆಯರಿಗೆ ಸಾಂಕೇತಿಕವಾಗಿ ಗ್ಯಾರಂಟಿ ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ. ನಮ್ಮ ಕಾರ್ಯಕರ್ತರು ಮನೆಮನೆಗೆ ಗ್ಯಾರಂಟಿ ಕಾರ್ಡ್ ಗಳನ್ನು ತಲುಪಿಸಲಿದ್ದು ಜನ ನಮ್ಮ ಕೈ ಹಿಡಿಯಲಿದ್ದಾರೆ ಎಂದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷದಿಂದ ಗ್ಯಾರಂಟಿ ಘೋಷಿಸಲಾಯಿತು. ಆದರೆ ಜನ ನಮ್ಮ ಕೈ ಹಿಡಿದರು. ಕಾರಣ ನಮ್ಮ ಮೇಲಿನ ನಂಬಿಕೆ. ಬರಗಾಲದಲ್ಲಿ ಗ್ಯಾರಂಟಿಗಳು ಜನರಿಗೆ ಸಹಕಾರಿಯಾಗಿದೆ ಎಂದರು.
ದಕ್ಷಿಣದಲ್ಲಿ 100 ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದ್ದು ಕೇಂದ್ರದಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅಲ್ಲೂ ಕೂಡ ಗ್ಯಾರಂಟಿ ಜಾರಿ ಮಾಡುತ್ತೇವೆ. ಜನರು ಗ್ಯಾರಂಟಿಗಳನ್ನು ಜಾರಿಗೆ ತಂದವರ ಪರವಾಗಿ ನಿಲ್ಲಬೇಕು ಎಂದರು.
ಬಿಜೆಪಿ, ಜೆಡಿಎಸ್ ನವರು ಗ್ಯಾರಂಟಿಗಳನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಹಾಕಿದ್ದಾರೆ. ಇನ್ನು ಸರ್ಕಾರ ಬಂದರೆ ಗ್ಯಾರಂಟಿ ನಿಲ್ಲಸದೆ ಇರುತ್ತಾರಾ? ನಿಮಗೆ ಗ್ಯಾರಂಟಿ ಕೊಟ್ಟವರು ಬೇಕಾ ಅಥವಾ ಅದನ್ನು ನಿಲ್ಲಿಸುವವರು ಬೇಕಾ? ಎಂದು ಮತದಾರರನ್ನು ಕೇಳಿದರು.