ಬೆಂಗಳೂರು:ಕಬ್ಬು ಬೆಳೆಗಾರರ 18ನೇ ದಿನದ ಆಹೋ ರಾತ್ರಿ ಧರಣಿ ನಿರತ ರೈತರು ಇಂದು ಬತ್ತ ಖರೀದಿ ಕನಿಷ್ಠ ಬೆಂಬಲ ಬೆಲೆಗೆ ಪ್ರೋತ್ಸಾಹ ಧನ 500 ರೂಪಾಯಿ ನೀಡುವಂತೆ ಹಾಗೂ ಕಬ್ಬಿಗೆ ಬೆಳೆ ವಿಮೆ ಜಾರಿಗೆ ತರಲು ಕೃಷಿ ಆಯುಕ್ತರ ಕಚೇರಿ ಎದುರು ಬತ್ತ ಸುರಿದು ಪ್ರತಿಭಟನೆ ನಡೆಸಿದರು.
ರಾಜ್ಯದ್ಯಂತ ನಿರಂತರ ಮಳೆ ಅತಿವೃಷ್ಟಿಯಿಂದ ಬತ್ತದ ಬೆಳೆಯಲ್ಲಿ ಇಳುವರಿ ಕುಂಠಿತವಾಗಿದ್ದು, ಭತ್ತ ಬೆಳೆದ ರೈತನ ಉತ್ಪಾದನೆ ವೆಚ್ಚ ಏರಿಕೆಯಾಗಿರುವ ಕಾರಣ ನಷ್ಟ ಅನುಭವಿಸುವಂತಾಗಿದೆ, ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಂಡಿದೆ, ಕೇಂದ್ರ ಸರ್ಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲ ಬೆಲೆಗೆ ಭತ್ತ ಖರೀದಿ ಮಾಡಿದರೆ ರೈತನಿಗೆ ಯಾವುದೇ ಲಾಭ ಸಿಗುವುದಿಲ್ಲ ಆದಕಾರಣ ಪ್ರತಿ ಕಿಂಟಾಲ್ ಭತ್ತಕ್ಕೆ ಎಂಎಸ್ಪಿ ಗೆ ಹೆಚ್ಚುವರಿ ಪ್ರೋತ್ಸಾಹ ಧನವಾಗಿ 500 ರೂಪಾಯಿ ನೀಡುವ ಮೂಲಕ ರೈತರನ್ನು ರಕ್ಷಣೆ ಮಾಡಬೇಕು. ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಾಕಬಾರದು, ಇದು ರೈತರನ್ನು ಒಡೆದಾಳುವ ನೀತಿಯಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಭತ್ತ ಖರೀದಿ ಕೇಂದ್ರಗಳ ಮೂಲಕ ಗರಿಷ್ಠ 40 ಕ್ಕಿಂಟಲ್ ಖರೀದಿಸಲು ಆದೇಶ ಹೊರಡಿಸಿದ್ದೀರಿ. ಈ ಆದೇಶವನ್ನು ಮರುಪರಿಶೀಲನೆ ಮಾಡಿ ಪ್ರತಿ ರೈತರಿಂದ ಖರೀದಿ ಗರಿಷ್ಠ 100 ಕ್ವಿಂಟಲ್ ಗೆ ಹೆಚ್ಚಿಸಬೇಕು ಎಂದು ಹೋರಾಟದ ನೇತೃತ್ವ ವಹಿಸಿರುವ ಕಬ್ಬು ಬೆಳೆಗಾರರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಭತ್ತ ಖರೀದಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಬೇಕು ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ಕಬ್ಬು ಉತ್ಪಾದನೆಗೆ ಎಕರೆಗೆ ಕನಿಷ್ಠ ಲಕ್ಷ ರೂ ಖರ್ಚಾಗುತ್ತದೆ ಅದರೆ ಕಬ್ಬಿನ ಬೆಳೆಗೆ ಬೆಂಕಿ ಬಿದ್ದಾಗ ಸರ್ಕಾರ ನೀಡುವ ನಷ್ಟ ಪರಿಹಾರ 4 ಸಾವಿರ ರೂಪಾಯಿ ಇರುತ್ತದೆ, ನಷ್ಟ ಪರಿಹಾರ ನೀಡುವ ಮಾನದಂಡ ಏರಿಕೆ ಮಾಡಬೇಕು. ಮಳೆ ಹಾನಿಯಿಂದ ಬೆಳೆ, ಬೆಂಕಿ ಆಕಸ್ಮಿಕದಿಂದ ಕಬ್ಬು ಬೆಳೆ ನಾಶವಾದರೆ ಪರಿಹಾರ ಸಿಗುವುದಿಲ್ಲ, ಅಂತಹ ಸಂದರ್ಭದಲ್ಲಿ ರೈತ ಸಾಲ ತೀರಿಸಲು ಕಷ್ಟವಾಗುತ್ತಿದೆ ಆದಕಾರಣ ಕಬ್ಬು ಬೆಳೆ ವಿಮೆ ಜಾರಿಗೆ ತಂದು ನಷ್ಟ ತುಂಬಿ ಕೊಡುವಂತಹ ಯೋಜನೆ ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರಸಕ್ತ ಸಾಲಿನ ಕಬ್ಬು ಬೆಳೆ ಉತ್ಪಾದನಾ ವೆಚ್ಚ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿ ಮಾಡಲು ವರದಿ ನೀಡಬೇಕು. ಈ ಒತ್ತಾಯಗಳ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.ಎಂದು ಒತ್ತಾಯಿಸಿ ಕಚೇರಿಯ ಮುಂದೆ ಬತ್ತ ಸುರಿದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸುರೇಶ್ ಮಾ ಪಾಟೀಲ್, ಬಸವರಾಜ ಪಾಟೀಲ್, ಹತ್ತಳ್ಳಿ ದೇವರಾಜ್, ರಮೇಶ್ ಉಗಾರ್, ಜಗದೀಶ್, ಬರಡನಪುರ ನಾಗರಾಜ್, ಚೆನ್ನಪ್ಪ, ಮುಂತಾದವರು ಹೋರಾಟದಲ್ಲಿ ಭಾಗಿಯಾದರು.
























































