ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ (RB Choudary) ಅವರ ನಿಧನಕ್ಕೆ ಚಿತ್ರರಂಗದ ಗಣ್ಯರಿಂದ ಸಂತಾಪದ ಸುರಿಮಳೆ ವ್ಯಕ್ತವಾಗುತ್ತಿದೆ. ರಾಜಸ್ಥಾನದ ಉದಯಪುರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚೌಧರಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂಬ ವರದಿ ಬಂದಿದೆ.
ಚೌಧರಿ ಅವರ ಹಠಾತ್ ನಿಧನಕ್ಕೆ ನಟ ಚಿರಂಜೀವಿ (Chiranjeevi) ತೀವ್ರ ಸಂತಾಪ ಸೂಚಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಅವರು, “ಪ್ರಸಿದ್ಧ ನಿರ್ಮಾಪಕ ಆರ್.ಬಿ. ಚೌಧರಿ ಅವರ ಹಠಾತ್ ಮತ್ತು ದುರಂತ ನಷ್ಟದ ಸುದ್ದಿ ಕೇಳಿ ತುಂಬಾ ದುಃಖವಾಯಿತು” ಎಂದು ಹೇಳಿದ್ದಾರೆ.
“ನಾನು ಅವರನ್ನು ಹಲವು ವರ್ಷಗಳಿಂದ ಪರಿಚಯ ಹೊಂದಿದ್ದೆ. ಇತ್ತೀಚೆಗೆ ಸೂಪರ್ ಗುಡ್ ಫಿಲ್ಮ್ಸ್ (Super Good Films) ಮೂಲಕ ನನ್ನ ‘ಗಾಡ್ ಫಾದರ್’ (God Father) ಸಿನಿಮಾದಲ್ಲಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರಕಿತ್ತು. ಅನೇಕ ಪ್ರತಿಭಾವಂತ ನಿರ್ದೇಶಕರು ಮತ್ತು ನಟರ ವೃತ್ತಿಜೀವನಕ್ಕೆ ಅವರು ದಿಕ್ಕು ತೋರಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಳಿಸಲಾಗದಂತಹದ್ದು,” ಎಂದು ಚಿರಂಜೀವಿ ಹೇಳಿದ್ದಾರೆ.




















































