ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಟಿ.ಸೋಮಶೇಖರ್ ಅವರು ಸಹಸ್ರಾರು ಬೆಂಬಲಿಗರೊಂದಿಗೆ ತೆರಳಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಮಾಗಡಿ ಮುಖ್ಯರಸ್ತೆ ಅಂಜನಾನಗರದಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಹೇರೋಹಳ್ಳಿ ಬಿಬಿಎಂಪಿ ಕಚೇರಿಯ ಚುನಾವಣಾಧಿಕಾರಿ ಕಚೇರಿಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಕಾರ್ಯಕರ್ತರ ಜಯಘೋಷ ಮುಗಿಲು ಮುಟ್ಟಿತ್ತು. ರಸ್ತೆಯುದ್ಧಕ್ಕೂ ಜನ ಕಿಕ್ಕಿರಿದು ಸೇರಿದ್ದರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಸರ್ಕಾರಿ ಜಮೀನನ್ನು ಕೊಳ್ಳೆ ಹೊಡೆದ ರಿಯಲ್ ಎಸ್ಟೇಟ್ ಮಂದಿ ನನ್ನನ್ನು ಹಣಿಯಲು ಸಂಚು ರೂಪಿಸಿದ್ದಾರೆ. ಜನತೆಯ ಬೆಂಬಲ ನನಗಿದೆ. ಮೇ.13ರಂದು ನನ್ನ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರ ದೊರಕಲಿದೆ. 50 ಸಾವಿರಕ್ಕೂ ಹೆಚ್ಚು ಲೀಡ್ ನೊಂದಿಗೆ ವಿಧಾನಸೌಧ ಪ್ರವೇಶಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
205 ಕೋಟಿ ಒಡೆಯರಾದ ವ್ಯಕ್ತಿ ಕಣ್ಣೀರು ಹಾಕುವ ಬದಲು ಕೊಂಚವಾದರೂ ಖರ್ಚು ಮಾಡಿ ಜನರ ಕಣ್ಣೀರನ್ನು ಒರೆಸುವ ಕೆಲಸ ಮಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ನಾನು ಕಣ್ಣೀರು ಹಾಕುವವನಲ್ಲ. ಕಣ್ಣೀರು ಒರೆಸುವವನು ಎಂದು ಜೆಡಿಎಸ್ ಅಭ್ಯರ್ಥಿಗೆ ಸೋಮಶೇಖರ್ ಟಾಂಗ್ ನೀಡಿದರು.
ಅಧಿಕಾರ ಇರದ ವೇಳೆಯಲ್ಲೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಬೇಲಿ ಹಾಕಿದ ಆರೋಪಗಳಿಲ್ಲ. ಸರ್ಕಾರಿ ಜಮೀನು ಕಬಳಿಕೆ ಮಾಡಿಲ್ಲ. ಹತಾಶೆಯಿಂದ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಕಾರಣವಿಲ್ಲದೆ ಎಫ್ ಐ ಆರ್ ದಾಖಲು ಮಾಡಿಸಿದ್ದಾರೆ ಎಂದ ಅವರು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನನ್ನ ಬೆನ್ನಿಗಿದೆ. ರಾಜ್ಯ ಸರ್ಕಾರದ ಸಾಧನೆ ಹಾಗೂ ಮೋದಿ ನಾಯಕತ್ವದ ಬೆಂಬಲದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಯಾರೊ ಮೂರು ಮಂದಿ ಕ್ಷೇತ್ರಕ್ಕೆ ಭೇಟಿ ನೀಡಿ ಅಬ್ಬರಿಸಿದರೆ ಜನರ ಬೆಂಬಲ ದೊರಕುವುದಿಲ್ಲ. ಫಲಿತಾಂಶ ಬದಲಾಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಉಸಿರುಗಟ್ಟುವ ವಾತಾವರಣದಿಂದಾಗಿ ಪಕ್ಷ ಬಿಡಬೇಕಾಯಿತು. ವೈಯಕ್ತಿಕ ಲಾಲಸೆಯಿಂದಲ್ಲ ಎಂದು ಎಸ್.ಟಿ.ಸೋಮಶೇಖರ್ ಪುನರುಚ್ಚರಿಸಿದರು.