ಹಾವೇರಿ: ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2(ಎ) ಮೀಸಲಾತಿ ಕಲ್ಪಿಸಬೇಕೆಂಬ ಹೋರಾಟ ಬಿರುಸುಗೊಂಡಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಜಿಲ್ಲೆಯಲ್ಲೇ ಇಂದು ಸಮುದಾಯದ ಮುಖಂಡರು ಶಕ್ತಿ ಪ್ರದರ್ಶನ ನಡೆಸಿದರು. ಮುಖ್ಯಮಂತ್ರಿಯವರ ತವರಲ್ಲಿ ವಿವಿಧ ಸಂಘಟನೆಗಳು ಈ ಹೋರಾಟಕ್ಕೆ ಕಿಚ್ಚು ಹಚ್ಚಿದ ಬೆಳವಣಿಗೆಯು ರಾಜಕೀಯ ವಲಯದಲ್ಲೂ ಸಂಚಲನ ಉಂಟು ಮಾಡಿತು.
ಆಗಸ್ 26ರಂದು ಚಾಮರಾಜನಗರದಲ್ಲಿ ಆರಂಭವಾದ ಈ ಹೋರಾಟ ಇದೀಗ 9 ಜಿಲ್ಲೆಗಳನ್ನು ಕ್ರಮಿಸಿದೆ. ಜಗದ್ಗುರು ಜಯಮೃತ್ಯುಂಜಯ ಮಹಾಸ್ವಾಮೀಜಿಯವರೇ ಈ ಹೋರಾಟದ ನೇತೃತ್ವವಹಿಸಿದ್ದಾರೆ. ‘ಪ್ರತಿಜ್ಞೆ ಪಂಚಾಯಿತಿ ಬೃಹತ್ ರಾಜ್ಯ ಅಭಿಯಾನ’ ಹೆಸರಲ್ಲಿ ಮೀಸಲಾತಿ ಹೋರಾಟ ನಡೆಯುತ್ತಿದ್ದು, ಪ್ರಸ್ತುತ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಸವಾಲೆಂಬಂತಾಗಿದೆ.
‘ನುಡಿದಂತೆ ನಡೆಯಿರಿ’;
ಸರ್ಕಾರಕ್ಕೆ ಖಾವಿ ಚಾಟಿ ಏಟು..
ಹಾವೇರಿಯಲ್ಲಿ ನಡೆದ ಈ ಹೋರಾಟದಲ್ಲಿಂದು ಪಂಚಮಸಾಲಿ ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರಿಂದ ಭಾರೀ ಮಹತ್ವ ಬಂತು. ಹಾವೇರಿಯ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆದ ಸಮಾವೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗಿಯಾಗಿ ಹೋರಾಟಕ್ಕೆ ಚೈತನ್ಯ ತುಂಬಿದರು.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ತಮ್ಮ ಸಮುದಾಯದ ಬೇಡಿಕೆ ಈಡೇರಿಕೆ ಸಂಬಂಧ ರಾಜ್ಯಸರ್ಕಾರ ನೀಡಿದ್ದ ಭರವಸೆಯ ಗಡುವು ಮುಗಿಯುತ್ತಾ ಬಂದಿದೆ ಎಂದು ನೆನಪಿಸಿದರು.
ಕೆಳವು ತಿಂಗಳ ಹಿಂದೆ ಬಿಎಸ್ವೈ ಅವರು ಸಿಎಂ ಆಗಿದ್ದಾಗ ಕಾನೂನು ಹಾಗೂ ಗೃಹ ಸಚಿವರಾಗಿದ್ದ ತಾವು ಮೀಸಲಾತಿ ಕುರಿತ ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಿರಿ. ಆಗ ನಿಮ್ಮ ಭರವಸೆಯನ್ನು ನಂಬಿ ನಾವು ಬೃಹತ್ ಹೋರಾಟವನ್ನೇ ತಾತ್ಕಾಲಿಕವಾಗಿ ಕೈಬಿಟ್ಟೆವು. ಅಂದು ನೀವು ನೀಡಿದ್ದ ಭರವಸೆಯ ಗಡುವು ಈ ತಿಂಗಳ 15ರಂದು ಮುಗಿಯಲಿದ್ದು, ಅದರೊಳಗೆ ಮೀಸಲಾತಿ ಘೋಷಣೆ ಮಾಡದಿದದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.
ಕಳೆದ ಬಾರಿ ನಮಗೆ ನೀವೇ ಭರವಸೆ ನೀಡಿದ್ದೀರಿ. ಇದೀಗ ನೀವೇ ಮುಖ್ಯಮಂತ್ರಿಯಾಗಿದ್ದೀರಿ ಹಾಗಾಗಿ ಸೂಕ್ತ ನಿರ್ಧಾರ ಕೈಗೊಳ್ಳುವ ಅವಕಾಶವೂ ನಿಮಗೆ ಸಿಕ್ಕಿದೆ ಎಂದು ಶ್ರೀಗಳು ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿದರು.
ನಾವು ನಮ್ಮ ಮುಂದಿನ ಪೀಳಿಗೆಯ ಮಕ್ಕಳ ಶೈಕ್ಷಣಿಕ ಅನುಕೂಲತೆಗಾಗಿ ಮೀಸಲಾತಿ ಬಯಸಿದ್ದೇವೆ. ಇಡೀ ಸಮಾಜ ಆಶಯವನ್ನು ಈ ಮೀಸಲಾತಿಯಿಂದ ನಿರೀಕ್ಷಿಸುತ್ತಿದ್ದೇವೆ. ರೈತಾಪಿ ಜನರ ಹಿತಕ್ಕಾಗಿ ಮೀಸಲಾತಿಯ ಹಕ್ಕೊತ್ತಾಯ ಮಂಡಿಸಿದ್ದೇವೆ ಎಂದ ಜಯಮೃತ್ಯುಂಜಯ ಶ್ರೀಗಳು, ಒಂದು ವೇಳೆ ಸರ್ಕಾರ ನುಡಿದಂತೆ ನಡೆಯದಿದ್ದಲ್ಲಿ ಜೆ.ಹೆಚ್.ಪಾಟೇಲ್ ಜನ್ಮದಿನ, ಅಕ್ಟೋಬರ್ 1ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂದೇಶವನ್ನೂ ರವಾನಿಸಿದರು.
ಇದೇ ವೇಳೆ, ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಎಲ್ಲಾ ಹೋರಾಟವನ್ನು ಬೆಂಬಲಿಸುವುದಾಗಿ ಹತ್ತಾರು ಸಂಘಟನೆಗಳ ಮುಖಂಡರು ಘೋಷಣೆ ಮಾಡಿದ ವೈಖರಿಯೂ ಗಮನಸೆಳೆಯಿತು.
ಸಮಾವೇಶದಲ್ಲಿ ಭಾಗಿಯಾದ ಸಂಘಟನೆಗಳ ಮುಖಂಡರ ಪಟ್ಟಿ ಹೀಗಿದೆ:
- ಲಿಂಗಾಯತ ಗೌಡ ಮಹಾಸಭ ಅಧ್ಯಕ್ಷ ಹಾಲನಹಳ್ಳಿ ಪುಟ್ಟಸ್ವಾಮಿ,
- ಚಂಚ ಸೇನೆ ಅಧ್ಯಕ್ಷ ಬಿ.ಎಸ್ .ಪಾಟೀಲ್
- ಲಿಂಗಾಯತ ಗೌಡ ಮಹಾಸಭ ಯುವ ಘಟಕ ಅಧ್ಯಕ್ಷ ಶಭುಪಟೇಲ್ ಆರ್ ವರುಣಾ,
- ಶ್ರೀ ರೋಹಿಣಿ ಪಾಟೀಲ್, ನಾಗೇಂದ್ರ ಕಟಕೋಳ, ವೀರೇಶ ಮತ್ತಿಹಳ್ಳಿ ಶಿವಕುಮಾರ ಸಂಗೂರ, ಭಾರತಿಿ
- ಜಂಬಗಿ R. ಶಂಕರ, ರಮೇಶ ಬಳ್ಳಾರಿ, ಲಲಿತಾ ಗುಂಡೇನಹಳ್ಳಿ ದಾನೇಶ್ವರ ಕೆಂಗೊಂಡ ಮಂಜುನಾಥ ಹಾಲಪ್ಪನವರ, ಶಿವಲಿಂಗಪ್ಪ ಸಾತೇನೇಹಳ್ಳಿ ಬಸವರಾಜ ಹಾಲಪ್ಪನವರ, ಮಲ್ಲಿಕಾರ್ಜುನ ಬೇವಿನಮರದ, ಶಿವಾನಂದ ಬಾಗೂರ, ಮಲ್ಲಿಕಾರ್ಜುನ ಅಗಡಿ, ನಾಗರಾಜ ಕ್ಯಾಬಳ್ಳಿ ‘ಶಿವಯೋಗಿ ಗಡಾದ,
- ಮಂಜುನಾಥ ಕುನ್ನೂರ, ರಾಜು ಪಟ್ಟನಶೆಟ್ಟಿ ಬಸಲಿಂಗಪ್ಪಾ ನರಗುಂದ, ಮಾರುತಿ ಶಿಡ್ಲಾಪುರ, S.V. ಪಾಟಲ, ಡಾII ಬಸವರಾಜ ವಿರಾಪುರ ಸೊಮೆಶ್ವರ ಕೊತಂಬ್ರಿ
ಶಶಿಧರ ಯಲಿಗಾರ - ಹಾವೇರಿ ಸುತ್ತಮುತ್ತಲ ಜಿಲ್ಲೆಗಳ ವಿವಿಧ ಸಂಘಟನಗಳ ಪ್ರಮುಖರು ಭಾಗವಹಿಸಿದ್ದರು.