ಚೆನ್ನೈ: ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಅವರ ನಿರ್ದೇಶನದಲ್ಲಿ ತಮಿಳು ನಟ ಧನುಷ್ ಹಾಗೂ ಮಲಯಾಳಂ ಸೂಪರ್ಸ್ಟಾರ್ ಮಮ್ಮೂಟ್ಟಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆಯನ್ನು ‘ಓಂ’ ಎಂದು ಘೋಷಿಸಲಾಗಿದೆ.
ಚಿತ್ರವು ಇದೇ ವರ್ಷದ ಅಕ್ಟೋಬರ್ 16ರಂದು ಬಿಡುಗಡೆಯಾಗಲಿದ್ದು, ಶೀರ್ಷಿಕೆಯೊಂದಿಗೆ ‘Chapter 1’ ಎಂಬ ಟ್ಯಾಗ್ಲೈನ್ ನೀಡಿರುವುದು ಮುಂದಿನ ಭಾಗದ ಸುಳಿವನ್ನೂ ನೀಡಿದೆ.
ಬಿಡುಗಡೆಯಾದ ಟೀಸರ್ನಲ್ಲಿ ಕೆಂಪು ಚಂದನ ಕಡಿಯುವ ಕಾರ್ಮಿಕರ ಬದುಕನ್ನು ಚಿತ್ರಿಸಲಾಗಿದೆ. ಧನುಷ್ ಮರ ಕಡಿಯುವ ಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಕ್ರಮವಾಗಿ ಚಂದನ ಕಡಿಯುವವರನ್ನು ಪೊಲೀಸರು ಸುತ್ತುವರಿಯುವ ಸಂದರ್ಭ ಅವರನ್ನು ರಕ್ಷಿಸುವ ದೃಶ್ಯಗಳು ಟೀಸರ್ನಲ್ಲಿವೆ.

ಚಿತ್ರ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಶ್ರೇಯಸ್ ಮಾತನಾಡಿ, ಇದು ಧನುಷ್ ವೃತ್ತಿಜೀವನದ ಅತ್ಯಂತ ದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾಗಿದ್ದು, ಅಭಿಮಾನಿಗಳು ಬಯಸಿದ ‘ವಿಂಟೇಜ್ ಮಾಸ್ ಧನುಷ್’ ಅನ್ನು ಮತ್ತೆ ಕಾಣಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ನಾಯಕಿಯರಾಗಿ ನಟಿಸಿದ್ದಾರೆ. ಸಂಗೀತವನ್ನು ಸಾಯಿ ಅಭ್ಯಾಂಕರ್ ನೀಡಿದ್ದು, ಛಾಯಾಗ್ರಹಣವನ್ನು ಎಳಿಲ್ ಅರುಸು ನಿರ್ವಹಿಸಿದ್ದಾರೆ.
ಮಮ್ಮೂಟ್ಟಿ ಚಿತ್ರತಂಡಕ್ಕೆ ಸೇರ್ಪಡೆಯಾದಾಗ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಅವರು ವಿಶೇಷ ಸ್ವಾಗತ ಕೋರಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಮಮ್ಮೂಟ್ಟಿ, “ಧನುಷ್ ಮತ್ತು ರಾಜ್ಕುಮಾರ್ ಪೆರಿಯಸಾಮಿ ಅವರೊಂದಿಗೆ ಈ ಪಯಣದ ಭಾಗವಾಗಿರುವುದಕ್ಕೆ ಸಂತೋಷ ಹಾಗೂ ಉತ್ಸಾಹವಾಗಿದೆ” ಎಂದು ಹೇಳಿದ್ದರು.
ಈ ಚಿತ್ರವನ್ನು ವಂಡರ್ಬಾರ್ ಫಿಲ್ಮ್ಸ್ ಹಾಗೂ ಆರ್ ಟೇಕ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿವೆ.






































































