ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ನವರಂಗ್ ವೃತ್ತದಿಂದ ರಾಜಾಜಿನಗರ ಪ್ರವೇಶದ್ವಾರದವರೆಗೆ ನಿರ್ಮಿಸಿರುವ 1.8 ಕಿ.ಮೀ. ಉದ್ದದ ವೈಟ್ಟಾಪಿಂಗ್ ರಸ್ತೆಯನ್ನು ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಸಾರ್ವಜನಿಕ ಸಂಚಾರಕ್ಕೆ ಲೋಕಾರ್ಪಣೆಗೊಳಿಸಿದರು.
ಕುಣಿಗಲ್ ಡಿಪೋ ಬಸ್ ಚಾಲಕನೊಂದಿಗೆ ರಸ್ತೆ ಉದ್ಘಾಟಿಸಿದ ಅವರು, ಈ ರಸ್ತೆಯಿಂದ ಪ್ರತಿದಿನ ಸಾವಿರಾರು ವಾಹನಗಳು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4,500ಕ್ಕೂ ಹೆಚ್ಚು ಬಸ್ಗಳು ಸಂಚರಿಸಲಿವೆ. ರಸ್ತೆ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಹೇಳಿದರು.
ರಸ್ತೆ ನಿರ್ಮಾಣದಲ್ಲಿ ಮಳೆನೀರು ಸಂಗ್ರಹಕ್ಕೆ 10 ಕಡೆ ವ್ಯವಸ್ಥೆ ಕಲ್ಪಿಸಲಾಗಿದೆ. ನೀರು ಮತ್ತು ಒಳಚರಂಡಿ ವ್ಯವಸ್ಥೆ, ಒಎಫ್ಸಿ ಕೇಬಲ್ಗಳಿಗೆ ಡಕ್ಗಳು ಹಾಗೂ ಸಸಿ ನೆಡಲು ಸ್ಥಳಾವಕಾಶ ಕಲ್ಪಿಸುವ ಮೂಲಕ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ವೈಟ್ಟಾಪಿಂಗ್ ರಸ್ತೆಯನ್ನು ಓಷನ್ ಕನ್ಸ್ಟ್ರಕ್ಷನ್ ಸಂಸ್ಥೆ ನಿರ್ಮಿಸಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯಪಾಲಕ ಅಭಿಯಂತರ ಬಾಲಾಜಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್ ಹಾಗೂ ಶೈಲಾ, ಬಿ. ಸ್ಮೈಲ್ ಅಧಿಕಾರಿಗಳು, ಮಾಜಿ ಉಪಮಹಾಪೌರ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರಾದ ಎಚ್.ಆರ್. ಕೃಷ್ಣಪ್ಪ, ದೀಪಾ ನಾಗೇಶ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.







































































