ನವದೆಹಲಿ: ಹಬ್ಬ ಹಾಗೂ ಮದುವೆ ಋತುವಿನಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ದೇಶದಲ್ಲಿ ಸಮರ್ಪಕ ಪೂರೈಕೆ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಬಫರ್ ಸ್ಟಾಕ್ನಿಂದ ಈರುಳ್ಳಿ ಬಿಡುಗಡೆ ಆರಂಭಿಸಿದೆ.
2025-26ರಲ್ಲಿ ದೇಶದಲ್ಲಿ ಸುಮಾರು 307.37 ಲಕ್ಷ ಟನ್ ಈರುಳ್ಳಿ ಉತ್ಪಾದನೆಯಾಗಿದ್ದು, ಹಿಂದಿನ ವರ್ಷದ 307.67 ಲಕ್ಷ ಟನ್ಗೆ ಸಮೀಪದಲ್ಲಿದೆ. 2026-27ನೇ ಸಾಲಿನ 2 ಲಕ್ಷ ಟನ್ ಬಫರ್ ಗುರಿಗೆ ಪೈಕಿ ಈಗಾಗಲೇ ಸುಮಾರು 1.21 ಲಕ್ಷ ಟನ್ ಈರುಳ್ಳಿ ಖರೀದಿಸಲಾಗಿದೆ.
ನಾಸಿಕ್ನಿಂದ ನವದೆಹಲಿಗೆ ಈರುಳ್ಳಿ ಸಾಗಿಸುವ ಮೊದಲ ‘ಕಾಂದಾ ಎಕ್ಸ್ಪ್ರೆಸ್’ ಸೇವೆಯೂ ಆರಂಭವಾಗಿದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಪ್ರಮುಖ ನಗರಗಳಿಗೆ ರೈಲು ಹಾಗೂ ರಸ್ತೆ ಸಾರಿಗೆ ಮೂಲಕ ಬಫರ್ ಈರುಳ್ಳಿಯನ್ನು ಪೂರೈಸಲಾಗುತ್ತಿದೆ.
ಗ್ರಾಹಕರಿಗೆ ಕೆಜಿಗೆ ₹35ರ ದರದಲ್ಲಿ NCCF ಮತ್ತು NAFED ಮಳಿಗೆಗಳು ಹಾಗೂ ಮೊಬೈಲ್ ವ್ಯಾನ್ಗಳ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಸಫಲ್ ಮತ್ತು ಕೇಂದ್ರೀಯ ಭಂಡಾರ್ ಮಳಿಗೆಗಳಲ್ಲೂ ಈರುಳ್ಳಿ ಲಭ್ಯವಾಗಲಿದೆ.

ಪ್ರಸ್ತುತ NCCF 9 ಮಳಿಗೆ ಮತ್ತು 40 ಮೊಬೈಲ್ ವ್ಯಾನ್ಗಳ ಮೂಲಕ, NAFED 13 ಮಳಿಗೆ ಹಾಗೂ 50 ಮೊಬೈಲ್ ವ್ಯಾನ್ಗಳ ಮೂಲಕ ಮಾರಾಟ ನಡೆಸುತ್ತಿದೆ. ಕೇಂದ್ರೀಯ ಭಂಡಾರ್ ಸುಮಾರು 100 ಮಳಿಗೆಗಳಲ್ಲಿ ಈರುಳ್ಳಿ ಪೂರೈಸುತ್ತಿದೆ.
ದೆಹಲಿಯ ಹೊರತಾಗಿ ಚೆನ್ನೈ, ಕೋಲ್ಕತ್ತಾ, ಎರ್ನಾಕುಲಂ, ಗುವಾಹಟಿ, ವಾರಣಾಸಿ, ಲಖನೌ, ಪಾಟ್ನಾ, ಚಂಡೀಗಢ, ಜಮ್ಮು ಮತ್ತು ಅಮೃತಸರಕ್ಕೂ ಬಫರ್ ಈರುಳ್ಳಿ ಸಾಗಿಸಲಾಗುತ್ತಿದೆ.
ಓಣಂ, ಗಣೇಶ ಚತುರ್ಥಿ, ದುರ್ಗಾ ಪೂಜೆ, ದಸರಾ, ದೀಪಾವಳಿ ಹಾಗೂ ಮದುವೆ ಋತುವಿನಲ್ಲಿ ಈರುಳ್ಳಿ ಬೆಲೆಯಲ್ಲಿ ಸಾಮಾನ್ಯವಾಗಿ ಏರಿಳಿತ ಕಂಡುಬರುತ್ತದೆ. ಹೀಗಾಗಿ ಅಗತ್ಯವಿದ್ದರೆ ಮತ್ತಷ್ಟು ಬಫರ್ ಸ್ಟಾಕ್ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.







































































