ಬೆಂಗಳೂರು: ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕದ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ ಹಾಗೂ ಅವರಲ್ಲಿನ ದೃಢತೆಯನ್ನು ಹೆಚ್ಚಿಸಲಿದೆ ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕøತಿ ಸಚಿವ ವಿ.ಸುನೀಲ್ಕುಮಾರ್ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗುಜರಾತ್ನಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಜನತೆ ಅಭಿವೃದ್ಧಿ ಪರವಾಗಿ ಮತ ನೀಡಿದ್ದಾರೆ. ಗುಜರಾತ್ನಲ್ಲಿ ಏಳನೇ ಬಾರಿಗೆ ಬಿಜೆಪಿ ಅಧಿಕಾರ ಗಳಿಸಿದೆ. ಚುನಾವಣೆಯಲ್ಲಿ ಗೆಲ್ಲಲು ನಾವು ಬೇರೆ ಏನೇನೋ ತಂತ್ರಗಾರಿಕೆ ಮಾಡಿಲ್ಲ. ಕೇವಲ ಅಭಿವೃದ್ಧಿಯನ್ನು ಕಣ್ಮುಂದೆ ಇಟ್ಟುಕೊಂಡು, ಮುಂದಿನ 5 ವರ್ಷಗಳ ಅಭಿವೃದ್ಧಿಯ ಪರಿಕಲ್ಪನೆಯನ್ನು ಜನರ ಮುಂದೆ ಇಟ್ಟಿದ್ದರಿಂದ ಈ ಅತ್ಯುತ್ತಮ ಫಲಿತಾಂಶ ಲಭಿಸಿದೆ. ಸಹಜವಾಗಿ ಕರ್ನಾಟಕದ ಮುಂದಿನ ಚುನಾವಣೆಗೆ ಇದು ಸ್ಪೂರ್ತಿಯನ್ನು ಕೊಟ್ಟಿದೆ ಎಂದು ತಿಳಿಸಿದರು.
ಕರ್ನಾಟಕದ ಚುನಾವಣೆಯೂ ಅಭಿವೃದ್ಧಿ, ಹಿಂದುತ್ವ, ಬೂತ್ ಕಾರ್ಯದ ಆಧಾರದಲ್ಲಿ ನಡೆಯಲಿದೆ. ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕರ್ನಾಟಕದಲ್ಲಿ ‘ನವ ಕರ್ನಾಟಕ ನಿರ್ಮಾಣ’ದ ಸಂಕಲ್ಪದೊಂದಿಗೆ ನಾವು ಮಾಡಿದ್ದೇವೆ. ಹಿಂದುತ್ವದ ಚಟುವಟಿಕೆಗಳಿಗೆ ಕಾನೂನು ಸ್ವರೂಪ ಕೊಡುವಂಥ ಕಾರ್ಯ ನಡೆದಿದೆ. ನಮ್ಮ ಭಾವನೆಗಳನ್ನು ಗೌರವಿಸುವ ಬೇರೆಬೇರೆ ಯೋಜನೆಗಳನ್ನು ನಾವು ಅನುಷ್ಠಾನಕ್ಕೆ ತಂದಿದ್ದೇವೆ ಎಂದು ವಿವರಿಸಿದರು.
ಅಭಿವೃದ್ಧಿ, ಹಿಂದುತ್ವ, ಪಕ್ಷದ ಬೂತ್ ಕಾರ್ಯವು ಪಕ್ಷದ ಗೆಲುವಿಗೆ ಪೂರಕವಾಗಲಿದೆ. ಇವತ್ತಿನಿಂದಲೇ ಕರ್ನಾಟಕದ ಚುನಾವಣೆ ಆರಂಭವಾಗಿದೆ. ಗುಜರಾತ್ ಗೆಲುವು ಕರ್ನಾಟಕದ ವಿಜಯದಲ್ಲೂ ಮುಂದುವರಿಯಲಿದೆ. ನಾವು ಡಬಲ್ ಎಂಜಿನ್ ಸರಕಾರದ ಮೂಲಕ ಜನರಿಗೆ ಇನ್ನಷ್ಟು ಯೋಜನೆಗಳನ್ನು ಕೊಡಲು ಮುಂದಿನ 5 ವರ್ಷಕ್ಕಾಗಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಹಿಮಾಚಲ ಪ್ರದೇಶದಲ್ಲಿ ಮತದಾರರ ತೀರ್ಪನ್ನು ನಾವು ಗೌರವಿಸುತ್ತೇವೆ. ಅಲ್ಲಿ ನಮಗೆ ಹಿನ್ನಡೆ ಆಗಿದೆ. ಅಲ್ಲಿನ ರಾಜ್ಯ ಘಟಕ ಮತ್ತು ರಾಷ್ಟ್ರೀಯ ತಂಡವು ಈ ಹಿನ್ನಡೆಯ ಕುರಿತ ಅವಲೋಕನ ಮಾಡಲಿದೆ. ನಾವು ಯಾವತ್ತೂ ಸೋಲಿನ ಹೊಣೆಯನ್ನು ಬೇರೆಯವರ ಮೇಲೆ ಹೊರಿಸುವುದಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದ ಚುನಾವಣಾ ಗೆಲುವಿಗೆ ಅಗತ್ಯವಾದ ಎಲ್ಲ ತಂತ್ರಗಾರಿಕೆಯನ್ನು ಪಕ್ಷ ಅನುಸರಿಸಲಿದೆ. ಹಿರಿಯರಿಗೆ ಮನ್ನಣೆ, ಹೊಸಬರಿಗೆ ಅವಕಾಶವನ್ನು ಗಮನದಲ್ಲಿ ಇಟ್ಟುಕೊಂಡು ಚುನಾವಣಾ ತಂತ್ರಗಾರಿಕೆ ರೂಪಿಸುತ್ತೇವೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.



























































