ಬೆಂಗಳೂರು: ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಹಣದ ವಿಚಾರದಲ್ಲಿ ಸಿಎಜಿ, ನಕಲಿ ಖಾತೆಗಳಿಗೆ ಹಣ ಹೋಗಿದೆ. ಒಂದೇ ಖಾತೆಗೆ ಹಣ ಹಾಕಿದ್ದಾರೆ, ಸತ್ತವರ ಹೆಸರಿಗೆ ಹಣ ಹೋಗಿದೆ ಎಂದು ತಿಳಿಸಿದೆ. ಇದರ ಕುರಿತು ಯಾಕೆ ಇನ್ನೂ ಎಫ್ಐಆರ್ ದಾಖಲಿಸಿಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಕೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಡವರ ಹೆಸರಿನಲ್ಲಿ ಲೂಟಿಯನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುವುದೇ ಎಂದು ಪ್ರಶ್ನೆ ಹಾಕಿದರು. ಯಾಕೆ ಇವತ್ತಿನವರೆಗೂ ಎಸ್ಐಟಿ ರಚಿಸಿಲ್ಲ? ಎಂದರು.
ಗೃಹಲಕ್ಷ್ಮಿ ಯೋಜನೆಯ 2 ತಿಂಗಳಿನ 5 ಸಾವಿರ ಕೋಟಿ ಹಣ ಖಾತೆಗೇ ಜಮೆ ಆಗಿಲ್ಲವೆಂದು ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ಆಗಿದೆ. ಅವತ್ತಿನ ಸಚಿವೆ ಆರಂಭದಲ್ಲಿ ಉಡಾಫೆ ಮಾತನಾಡಿದ್ದರು. ಮಹೇಶ್ ಟೆಂಗಿನಕಾಯಿಯವರು ದಾಖಲೆ ತಂದಿಟ್ಟರು. ಹೈದರಾಲಿ ಸೈನಿಕರ ಸಂಬಳ ಮುಂದೂಡಿ ಸಂಬಳ ಎಗರಿಸುತ್ತಿದ್ದ ವಿಚಾರವನ್ನು ಸುರೇಶ್ ಕುಮಾರ್ ಸದನದ ಮುಂದಿಟ್ಟಿದ್ದರು ಎಂದು ಗಮನ ಸೆಳೆದರು.

ಆ ಹಣ ಎಲ್ಲಿ ಹೋಗಿದೆ? ಅದರ ತನಿಖೆಗೆ ಹಾಗೂ ಈಗಿನ ಸಿಎಜಿ ವರದಿ ಕುರಿತು ತನಿಖೆಗೆ ಯಾಕೆ ಆದೇಶ ಮಾಡಿಲ್ಲ? ಎಂದು ಕೇಳಿದರು. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರ ಇದ್ದಂತಿದೆ ಎಂದು ಆರೋಪಿಸಿದರು. ಇದರಲ್ಲೂ ಅಕ್ರಮದ ವಾಸನೆ ಬಡಿಯುತ್ತಿದೆ ಎಂದು ದೂರಿದರು. ಸರಕಾರ ತಕ್ಷಣ ಕೇಸು ದಾಖಲಿಸಿಕೊಳ್ಳಬೇಕು. ವಿಶೇಷ ತನಿಖೆಗೆ ತಂಡವನ್ನು ನಿಯುಕ್ತಿ ಮಾಡಬೇಕೆಂದು ಆಗ್ರಹಿಸಿದರು.
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಗೆ ಈಗ್ಯಾಕೆ ಕಂಡಿಷನ್ ಎಂದು ಪ್ರಶ್ನಿಸಿದರು. ಆಗ ಕಾಕಾಪಾಟೀಲ್ಗೂ ಫ್ರೀ, ಮಹದೇವಪ್ಪನಿಗೂ ಫ್ರೀ ಎಂದಿದ್ದರು. ಈಗ್ಯಾಕೆ ಪರಿಷ್ಕರಣೆ, ಉದ್ದೇಶ ಏನು ಎಂದು ಪ್ರಶ್ನಿಸಿದ ರವಿ, ನಮ್ಮ ಆರ್ಥಿಕ ಸ್ಥಿತಿ ಕಂಗೆಟ್ಟಿದೆ; ಕೊಡಲಾಗುತ್ತಿಲ್ಲ ಎಂದು ಹೇಳಿ ಎಂದು ಕುಟುಕಿದರು.
ಎಸ್ಐಆರ್ ವೇಳೆ ಅಲ್ಪಸಂಖ್ಯಾತರ ಮತ ಒಂದೂ ಬಿಟ್ಟು ಹೋಗಬಾರದೆಂದು ಮುಖ್ಯಮಂತ್ರಿಗಳಿದ್ದ ಅನಧಿಕೃತ ಸಭೆಯಲ್ಲಿ ತಾಕೀತು ಮಾಡಿದ ಮಾಹಿತಿ ಇದೆ. ಹಾಗಿದ್ದರೆ ಬಹುಸಂಖ್ಯಾತರ ಮತ ಬಿಟ್ಟು ಹೋಗಬಹುದೇ ಎಂದು ಪ್ರಶ್ನಿಸಿದರು. ಎಸ್ಐಆರ್ ದೋಷಪೂರಿತ ಆಗಬೇಕೆಂದು ಕಾಂಗ್ರೆಸ್ ಇಚ್ಛೆಯೇ ಎಂದು ಕೇಳಿದರು.
ಜಿಲ್ಲಾಧಿಕಾರಿಗಳಿದ್ದ ಸಭೆಯಲ್ಲಿ ನಕಲಿ ಮತ ಸೇರಬಾರದೆಂದು ಹೇಳಿದ್ದರೆ ಅದು ಪ್ರಾಮಾಣಿಕ ಸೂಚನೆ ಆಗುತ್ತಿತ್ತು ಎಂದು ನುಡಿದರು. ಡಬಲ್ ಮತ ಇರಬಾರದೆಂದು ಹೇಳಬೇಕಿತ್ತು. ಬಾಂಗ್ಲಾದೇಶಿಗಳಿಗೆ ಜಾಗ ಕೊಡಬಾರದೆಂದು ಹೇಳಬೇಕಿದ್ದರೂ ಅದನ್ನು ಹೇಳಿಲ್ಲ ಎಂದು ಟೀಕಿಸಿದರು. ಅಕ್ರಮ ಮಾಡಲು ಸಹಕರಿಸಬೇಕೆಂಬ ಒತ್ತಡವನ್ನು ಆರ್.ಒ.ಗಳು, ಜಿಲ್ಲಾಧಿಕಾರಿಗಳ ಮೇಲೆ ಹೇರುತ್ತಿರುವುದು ನಕಲಿ ಮಾಡುವ ಸಂಚನ್ನು ಕಾಂಗ್ರೆಸ್ ಮಾಡುತ್ತಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು. ಚಿಕ್ಕಮಗಳೂರಿನಲ್ಲಿ ಹೆಸರು ತೆಗೆದವರ ಎಲ್ಲ ವಿವರವನ್ನು ವೆಬ್ಸೈಟಿನಲ್ಲಿ ತೋರಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಎಲ್ಒಗಳಿಗೆ ಮೇಲಿಂದ ಒತ್ತಡ ಹೇರಿದ್ದರಿಂದ ಅದಕ್ಕೆ ಮಣಿದು ಅವರು ಮ್ಯಾಪಿಂಗ್ ಸರಿಯಾಗಿ ಮಾಡಿಲ್ಲ ಎಂಬ ದೂರಿದೆ ಎಂದು ವಿವರ ನೀಡಿದರು. ಪ್ರಾಮಾಣಿಕ- ಪಾರದರ್ಶಕವಾಗಿ ಎಸ್ಐಆರ್ ನಡೆಸುವಂತೆ ಅವರು ಒತ್ತಾಯಿಸಿದರು.
ಡಿ.ವಿ.ಸದಾನಂದ ಗೌಡರ ಆಡಿಯೊ ಎನ್ನಲಾಗುತ್ತಿರುವುದಕ್ಕೆ ಅವರೇ ನನ್ನದಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಅವರೇ ನಿರಾಕರಿಸಿದ ಮೇಲೆ ಏನೂ ಹೇಳುವುದು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಲ್ಲ ಕಾಲಕ್ಕೂ ನಮ್ಮಲ್ಲಿ ಒಗ್ಗಟ್ಟು ಇರುತ್ತದೆ. ವಿಷಯಾಧಾರಿತ ಹೋರಾಟ ಮತ್ತು ಒಗ್ಗಟ್ಟು ಮಾತ್ರ ನಮ್ಮನ್ನು ಬೆಳೆಸುತ್ತದೆ. ನಮ್ಮ ಪರವಾದ ವಾತಾವರಣ ನಿರ್ಮಾಣವಾಗುತ್ತದೆ ಎಂದರು.





































































