ಮಂಗಳೂರು: ದಕ್ಷಿಣ ಕನ್ನಡದ ಬೆಳ್ತಂಗಡಿಯ ಉಜಿರೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮೇಲ್ಮನೆ ಸದಸ್ಯ ಮಂಜುನಾಥ ಭಂಡಾರಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಮೊದಲಾದ ಮುಖಂಡರು ಭಾಗವಹಿಸಿದ್ದರು.
ಸಾರ್ವಜನಿಕ ಸಭೆಯಲ್ಲಿ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ನನ್ನ ಯುವ ಮಿತ್ರ ರಕ್ಷಿತ್ ಗೆ ಯಶಸ್ಸು ಸಿಗಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿಸಿಕೊಂಡು ಬಂದಿದ್ದೇನೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳು ಅಧಿಕಾರಕ್ಕೆ ಬಂದಂತೆ. ಈ ಕ್ಷೇತ್ರವನ್ನು ಮಾಜಿ ಶಾಸಕ ಬಂಗೇರಾ ಅವರು ಹಲವು ಬಾರಿ ಸ್ಪರ್ಧಿಸಿ ಸೋತು, ಗೆದ್ದು, ನನ್ನೊಂದಿಗೆ ಶಾಸಕರಾಗಿ ಕೆಲಸ ಮಾಡಿದ್ದಾರೆ. ಇಂದು ಪಕ್ಷ ಇಷ್ಟು ಗಟ್ಟಿಯಾಗಿ ನಿಲ್ಲಲು ಅವರು ಹೊಸಬರಿಗೆ ಅವಕಾಶ ನೀಡಲು ದಾರಿ ಮಾಡಿಕೊಟ್ಟಿದ್ದಾರೆ ಎಂದರು.
ಈ ಜಿಲ್ಲೆಯಲ್ಲಿ ಮೂರೂವರೆ ಲಕ್ಷ ಒಕ್ಕಲಿಗ ಸಮುದಾಯದವರಿದ್ದಾರೆ. ಅವರಿಗೂ ನ್ಯಾಯ ನೀಡಬೇಕು ಎಂದು ಭಾವಿಸಿದ್ದೆವು. ಆದರೆ ಯುವಕರಿಗೆ ಅವಕಾಶ ನೀಡಲು ಜಿಲ್ಲೆಯಲ್ಲಿ ನಾಲ್ಕು ಜನ ಹೊಸಬರಿಗೆ ಅವಕಾಶ ನೀಡಲಾಗಿದೆ. ಈ ಜಿಲ್ಲೆಯ ಎಲ್ಲಕಡೆ ಯುವಕರು ಸ್ಪರ್ಧಿಸುತ್ತಿದ್ದಾರೆ. ಪಕ್ಷ ತನ್ನದೇ ಆದ ಲೆಕ್ಕಾಚಾರ ಮಾಡಿ ಈ ತೀರ್ಮಾನ ಮಾಡಿದೆ ಎಂದ ಡಿಕೆಶಿ, ರಾಜ್ಯದಲ್ಲಿ ಮೇ 10ರಂದು ಕೇವಲ ಮತದಾನ ದಿನ ಮಾತ್ರವಲ್ಲ, ನಿಮ್ಮ ಭವಿಷ್ಯ ನೀವೇ ಬರೆದುಕೊಳ್ಲುವ ದಿನ, ಭ್ರಷ್ಟಾಚಾರ ಬಡಿದೋಡಿಸುವ ದಿನ. ನಾನು ಇಲ್ಲಿಗೆ ಬರುವಾಗ ಒಬ್ಬ ಶ್ರೇಷ್ಠ ಹಿರಿಯರು ಅವರ ಹೆಸರು ಹೇಳುವುದಿಲ್ಲ, ಅವರು ಈ ಜಿಲ್ಲೆಯಲ್ಲಿ ಅನೇಕ ಮಂಡಳಿಗಳಿದ್ದವು. ಅನೇಕರು ಈ ಮಂಡಳಿಗೆ ಅನುದಾನ ತಂದಿರುವುದಾಗಿ ಬೋರ್ಡ್ ಹಾಕಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ 40% ಕಮಿಷನ್ ನಿಂದ ಆ ಬೋರ್ಡ್ ನೋಡಿದವರೆಲ್ಲಾ 40% ಕಮಿಷನ್ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಪೀಠದ ಮುಖ್ಯಸ್ಥರು ಹೇಳಿದ್ದಾರೆ ಎಂದರು.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶಧಿಂದ ನಾವು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ ಜೆಡಿಎಸ್ ಜತೆ ಸರ್ಕಾರ ಮಾಡಿದೆವು. ಆದರೆ ಅವರು ಅದನ್ನು ಉಲಿಸಿಕೊಳ್ಳಲಿಲ್ಲ. ನಂತರ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬಂದಿತು. ಈ ಸರ್ಕಾರ ಯುವಕರು, ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಯಾವುದಾದರೂ ಒಂದು ವರ್ಗದ ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದಾರಾ? ಇವರಿಂದ ಸಮಾಧಾನಕರ ಆಡಳಿತ ಬಂದಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡಿಕೆಶಿ ಹೇಳಿದರು.
ಇಲ್ಲಿ ಬಿಜೆಪಿಯ ಮೂವರು ನಾಯಕರು ತಮ್ಮ ವಿರುದ್ಧ ಯಾವುದೇ ಸಿಡಿ ಬರಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂಬ ವಿಚಾರ ನಮ್ಮ ಜಿಲ್ಲಾಧ್ಯಕ್ಷರು ತಿಳಿಸಿದರು. ಇಂತಹ ಪರಿಸ್ಥಿತಿ ಬಂದಿರುವುದೇಕೆ? ಬಿಜೆಪಿ ಇತಿಹಾಸ ಚರಿತ್ರೆ ದೊಡ್ಡದಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಮೂವರು ತಡೆಯಾಜ್ಞೆ ತಂದಿದ್ದಾರೆ. ಹಿಂದೆ ಬಾಂಬೆ ಬಾಯ್ಸ್ 6-7 ಮಂದಿ ತಡೆಯಾಜ್ಞೆ ತಂದಿದ್ದು ಕೇಳಿದ್ದೆ. ದಕ್ಷಿಣ ಕನ್ನಡ ಜಿಲ್ಲೆಯ ನಾಯಕರು ಇಂದು ಕೋರ್ಟ್ ಮೊರೆ ಹೋಗಿದ್ದರೆ, ಬಿಜೆಪಿಯಲ್ಲಿ ಎಂತಹ ಹುಳುಕಿದೆ ಎಂದು ನೀವೆಲ್ಲರೂ ಆಲೋಚಿಸಬೇಕು ಎಂದವರು ಹೇಳಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವ್ಯತ್ಯಾಸ ಎಂದರೆ, ಅವರು ಭಾವನೆ ಬಗ್ಗೆ ಆಲೋಚಿಸಿದರೆ, ನಾವು ಬದುಕಿನ ಬಗ್ಗೆ ಆಲೋಚಿಸುತ್ತೇವೆ. ಇಂದು ಮಧ್ಯಮ ಸಂದರ್ಶನದ ವೇಳೆ ಈ ಭಾಗದ ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರವಾಗಿ ಕೆಲವು ಪ್ರಶ್ನೆ ಕೇಳಿದರು. ಬಿಜೆಪಿ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಬಂದಿದೆ ಎಂದು ಹೇಳಿದ್ದಾರೆ. ಕರಾವಳಿ, ಮಲೆನಾಡು ಪ್ರದೇಶದಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ? ಕೇವಲ 5 ಸಾವಿರ ಕೋಟಿ ಬಂಡವಾಳವನ್ನು ಈ ಭಾಗದಲ್ಲಿ ಹೂಡಿಕೆ ಮಾಡಲು ಯಾರೊಬ್ಬರೂ ಮುಂದೆ ಬಂದಿಲ್ಲ ಯಾಕೆ? ಎಂದು ಸವಾಲು ಹಾಕಿದ್ದೇನೆ ಎಂದ ಅವರು, ಮೋದಿ ಅವರು ಕಳೆದ ಚುನಾವಣೆಯಲ್ಲಿ ನೀವು ಮತಹಾಕುವಾಗ ನಿಮ್ಮ ಮನೆ ಅಡುಗೆ ಅನಿಲ ಸಿಲಿಂಡರ್ ಗೆ ನಮಿಸಿ ಮತ ಹಾಕಿ ಎಂದು ಹೇಳಿದ್ದರು. ಈಗ ನಾವು ಏನು ಹೇಳಬೇಕು? ನಾನು ನಮ್ಮ ನಾಯಕರುಗಳಿಗೆ ಒಂದು ಸಲಹೆ ನೀಡುತ್ತೇನೆ. ನೀವು ಪ್ರತಿ ಬೂತ್ ಮುಂದೆ ಸಿಲಿಂಡರ್ ಇಟ್ಟು ಅದಕ್ಕೆ ಒಂದು ಹೂವಿನ ಹಾರ ಹಾಕಬೇಕು. ಜನರ ಆದಾಯ ಪಾತಾಳಕ್ಕೆ ಕುಸಿದಿದ್ದು, ಬೆಲೆಗಳು ಗಗನಕ್ಕೇರಿವೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ಸಹಾಯ ಮಾಡಲು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿವೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿವೆ. ಈ ಸರ್ಕಾರದ ಭ್ರಷ್ಟಾಚಾರಕ್ಕೆ ಅನೇಕರು ಆತ್ಮಹತ್ಯೆ ಮಾಡಿಕೊಂಡರು. ಬಿಜೆಪಿ ನಾಯಕರೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಕೆಲವರು ಲಂಚಕ್ಕೆ ಅಧಿಕಾರ ಕಳೆದುಕೊಂಡರೆ, ಮತ್ತೆ ಕೆಲವರು ಮಂಚಕ್ಕೆ ರಾಜೀನಾಮೆ ಕೊಟ್ಟರು. ಶಿವಮೊಗ್ಗದಲ್ಲಿ ದ್ವೇಷ ರಾಜಕೀಯವನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಅವರೇ ಟೀಕಿಸಿದ್ದರು ಎಂದು ಬೊಟ್ಟು ಮಾಡಿದ ಡಿಕೆಶಿ, ಬಿಜೆಪಿಯವರು ರಾಜ್ಯದ ನಂದಿನಿ ಹಾಲನ್ನು ಬಿಟ್ಟು ಗುಜರಾತಿನ ಹಾಲು ಖರೀದಿ ಮಾಡಿ ಎಂದು ಹೇಳುತ್ತಿದ್ದಾರೆ. ನಮ್ಮ ರೈತರು ಸರಿಯಾದ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಂದಿನಿ ಮೇಲೆ ಅಮೂಲ್ ಹೇರಿಕೆ ಮಾಡಲಾಗುತ್ತಿದೆ. ನಮ್ಮ ಹಾಲು ಉತ್ಪಾದಕರನ್ನು ಬೊಮ್ಮಾಯಿ ಅವರಿಂದ ಕಾಪಾಡಲು ಸಾಧ್ಯವಾಗಲಿಲ್ಲ. ಕೋವಿಡ್ ಸಮಯದಲ್ಲಿ ಭ್ರಷ್ಟಾಚಾರ ತಾಂಡವವಾಡಿತ್ತು. ಆಕ್ಸಿಜನ್ ಇಲ್ಲದೆ ಅನೇಕರು ಸತ್ತರು. ಸತ್ತವರಿಗೆ ಸರ್ಕಾರ ಪರಿಹಾರ ನೀಡಲಿಲ್ಲ. ನಷ್ಟ ಅನಭವಿಸಿದ ವ್ಯಾಪಾರಸ್ಥರಿಗೆ ತೆರಿಗೆ ವಿನಾಯ್ತಿ ನೀಡಲಿಲ್ಲ. ಜನರಿಗೆ ಸಹಾಯ ಮಾಡದ ಸರ್ಕಾರ ಯಾಕೆ ಬೇಕು? ಎಂದು ಪ್ರಶ್ನಿಸಿದರು.