ಪಣಜಿ: 2029ರ ಜುಲೈ ವೇಳೆಗೆ ಭಾರತವನ್ನು ‘ಮಾದಕವಸ್ತು ಮುಕ್ತ’ ದೇಶವನ್ನಾಗಿ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಭಾನುವಾರ ಪಣಜಿಯಲ್ಲಿ ಮಾತನಾಡಿದ ಅವರು, ಮಾದಕವಸ್ತುಗಳ ವಿರುದ್ಧದ ಹೋರಾಟವು ಮೋದಿ ಸರ್ಕಾರದ ಪ್ರಮುಖ ರಾಷ್ಟ್ರೀಯ ಭದ್ರತಾ ಆದ್ಯತೆಯಾಗಿದೆ ಎಂದು ಹೇಳಿದರು. ಮಾದಕವಸ್ತು ಜಾಲಗಳನ್ನು ಸಂಪೂರ್ಣವಾಗಿ ಕಿತ್ತೊಗೆಯುವುದು, ಅವುಗಳ ಹಣಕಾಸಿನ ಮೂಲಗಳನ್ನು ಕಡಿತಗೊಳಿಸುವುದು ಹಾಗೂ ಯುವಜನರನ್ನು ವ್ಯಸನದಿಂದ ರಕ್ಷಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು.
ನಾಲ್ಕು ಪ್ರಮುಖ ಸ್ತಂಭಗಳ ಕಾರ್ಯತಂತ್ರ
2026ರ ಜುಲೈನಿಂದ 2029ರ ಜುಲೈವರೆಗೆ ಜಾರಿಯಾಗಲಿರುವ ಮೂರು ವರ್ಷಗಳ ಮಾರ್ಗಸೂಚಿಯಲ್ಲಿ ನಾಲ್ಕು ಪ್ರಮುಖ ಅಂಶಗಳಿಗೆ ಒತ್ತು ನೀಡಲಾಗಿದೆ. ಗುಪ್ತಚರ ಆಧಾರಿತ ಕಾರ್ಯಾಚರಣೆ, ಮಾದಕವಸ್ತು ತಯಾರಿಕೆಗೆ ಬಳಸುವ ಪೂರ್ವಗಾಮಿ ರಾಸಾಯನಿಕಗಳ ನಿಯಂತ್ರಣ, ಬೇಡಿಕೆ ಮತ್ತು ಹಾನಿ ಕಡಿತ ಹಾಗೂ ಸಾಮರ್ಥ್ಯ ನಿರ್ಮಾಣ ಮತ್ತು ಸಮನ್ವಯಕ್ಕೆ ಆದ್ಯತೆ ನೀಡಲಾಗುತ್ತದೆ.
ಬೀದಿ ಮಟ್ಟದ ಮಾದಕವಸ್ತು ವಶಪಡಿಸಿಕೊಳ್ಳುವಿಕೆಯಿಂದ ಹಿಡಿದು ಜಾಲಗಳ ಮೂಲ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಪತ್ತೆಹಚ್ಚುವವರೆಗೆ ತನಿಖೆ ನಡೆಸಲಾಗುವುದು ಎಂದು ಶಾ ಹೇಳಿದರು. ಹಣಕಾಸು ವಹಿವಾಟು, ಡಾರ್ಕ್ವೆಬ್, ಕ್ರಿಪ್ಟೋ ಪಾವತಿ ಹಾಗೂ ಎನ್ಕ್ರಿಪ್ಟ್ಡ್ ಸಂವಹನಗಳ ಮೇಲೂ ನಿಗಾ ವಹಿಸಲಾಗುವುದು ಎಂದರು.

2004ರಿಂದ 2014ರವರೆಗೆ ಸುಮಾರು 26 ಲಕ್ಷ ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ₹40,000 ಕೋಟಿ ಎಂದು ಶಾ ತಿಳಿಸಿದರು. 2014ರಿಂದ 2026ರವರೆಗೆ 1.19 ಕೋಟಿ ಕೆಜಿಗೂ ಹೆಚ್ಚು ಮಾದಕವಸ್ತು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು ₹1.89 ಲಕ್ಷ ಕೋಟಿ ಎಂದರು.
‘ನಶಾ ಮುಕ್ತ ಭಾರತ ಅಭಿಯಾನ’ದಡಿ ಸುಮಾರು 25 ಕೋಟಿ ಜನರನ್ನು ತಲುಪಲಾಗಿದ್ದು, 5.7 ಲಕ್ಷ ಜನರಿಗೆ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲಾಗಿದೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಗಳು, ಎನ್ಸಿಸಿ, ಎನ್ಎಸ್ಎಸ್ ಮತ್ತು ಯುವಜನರನ್ನು ಒಳಗೊಂಡು ಜಾಗೃತಿ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು. ದೇಶದಲ್ಲಿನ ವ್ಯಸನಮುಕ್ತ ಕೇಂದ್ರಗಳ ಸಂಖ್ಯೆಯನ್ನು 1,751ಕ್ಕೆ ಹೆಚ್ಚಿಸುವ ಗುರಿಯೂ ಇದೆ ಎಂದು ಶಾ ಹೇಳಿದರು.
ನಕ್ಸಲಿಸಂ ನಿರ್ಮೂಲನೆಗೆ ಕೈಗೊಂಡ ರೀತಿಯಲ್ಲೇ ಮಾದಕವಸ್ತು ಸಮಸ್ಯೆಯನ್ನೂ ದೇಶದಿಂದ ತೊಡೆದುಹಾಕುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.







































































