ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ, ಪರಿಹಾರ ಕಾರ್ಯಗಳು ಹಾಗೂ ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಮುಖ್ಯಮಂತ್ರಿ ಸಮ್ರಾಟ್ ಚೌಧರಿ, ರಾಜ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಅವರು ವೈಶಾಲಿ, ಮುಂಗೇರ್ ಮತ್ತು ಭಾಗಲ್ಪುರ ಜಿಲ್ಲೆಗಳ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿದರು. ದೋಣಿ, ದೇಶಿ ದೋಣಿ ಹಾಗೂ ಟ್ರ್ಯಾಕ್ಟರ್ ಮೂಲಕ ಜಲಾವೃತ ಗ್ರಾಮಗಳು ಮತ್ತು ಕೃಷಿ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ವೈಮಾನಿಕ ಸಮೀಕ್ಷೆಯನ್ನೂ ನಡೆಸಿದರು.
10 ದಿನಕ್ಕೂ ಹೆಚ್ಚು ನೀರಿನಲ್ಲಿ ಮುಳುಗಿದ ಬೆಳೆ
ವೈಶಾಲಿಯ ತೆರಾಸಿಯಾ ಮತ್ತು ಸರಾಯಿಪುರ ಗ್ರಾಮಗಳಿಗೆ ಭೇಟಿ ನೀಡಿದ ಚೌಹಾಣ್, ಜಲಾವೃತ ಮನೆಗಳು ಹಾಗೂ ಕೃಷಿ ಭೂಮಿಯನ್ನು ಪರಿಶೀಲಿಸಿದರು. ಮುಂಗೇರ್ನ ನವಗರ್ಹಿ ಪರಿಹಾರ ಶಿಬಿರ ಮತ್ತು ಕೋಜಿಕರಯ್ಯಾ ಒಡ್ಡು ಪ್ರದೇಶಕ್ಕೆ ಭೇಟಿ ನೀಡಿದ ಅವರು, ಭಾಗಲ್ಪುರದ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಜನರೊಂದಿಗೆ ಮಾತುಕತೆ ನಡೆಸಿದರು.
ಬಾಳೆ ಹಾಗೂ ಮೆಕ್ಕೆಜೋಳ ಬೆಳೆಗಳು 10 ದಿನಕ್ಕೂ ಹೆಚ್ಚು ಕಾಲ ನೀರಿನಲ್ಲಿ ಮುಳುಗಿರುವುದರಿಂದ ವ್ಯಾಪಕ ಹಾನಿಯಾಗಿದೆ ಎಂದು ಚೌಹಾಣ್ ತಿಳಿಸಿದರು. ಕೆಲವು ಪ್ರದೇಶಗಳಲ್ಲಿ 2016ರ ಪ್ರವಾಹಕ್ಕಿಂತಲೂ ಸುಮಾರು ಒಂದು ಅಡಿ ಹೆಚ್ಚು ನೀರಿನ ಮಟ್ಟ ದಾಖಲಾಗಿದೆ ಎಂದು ಮುಖ್ಯಮಂತ್ರಿ ಹಾಗೂ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದರು.

ಸುಮಾರು 50 ಲಕ್ಷ ಜನರು ಪ್ರವಾಹದಿಂದ ನೇರವಾಗಿ ಬಾಧಿತರಾಗಿದ್ದು, ಹಲವು ಕುಟುಂಬಗಳು ಸ್ಥಳಾಂತರಗೊಂಡಿವೆ. ಮನೆಗಳು ಹಾನಿಗೊಳಗಾಗಿದ್ದು, ಜಾನುವಾರುಗಳ ನಷ್ಟವೂ ಸಂಭವಿಸಿರುವ ವರದಿಗಳಿವೆ ಎಂದು ಹೇಳಿದರು.
“ರೈತರು ಶ್ರಮಪಟ್ಟು ಬೆಳೆದ ಬೆಳೆಗಳು, ಅವರ ಬದುಕಿನ ಆಧಾರವಾಗಿರುವ ಕೃಷಿ ನೀರಿನಲ್ಲಿ ಮುಳುಗಿರುವುದನ್ನು ನೋಡುವುದು ನೋವುಂಟು ಮಾಡುತ್ತದೆ. ಆದರೆ ರೈತರು ಧೈರ್ಯ ಕಳೆದುಕೊಳ್ಳಬಾರದು. ಅವರ ಜೀವನೋಪಾಯ ರಕ್ಷಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ” ಎಂದು ಚೌಹಾಣ್ ಹೇಳಿದರು.
ಪರಿಹಾರ ಕಾರ್ಯಗಳ ಪರಿಶೀಲನೆ
ರಾಜ್ಯ ಸರ್ಕಾರ ಕೈಗೊಂಡಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಕುರಿತು ಚೌಹಾಣ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆಡಳಿತ ವ್ಯವಸ್ಥೆ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ ಎಂದರು.
ಪ್ರವಾಹದಿಂದ ಬಾಧಿತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮೂಲಕ ₹7,000 ನೆರವು ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ದೋಣಿಗಳ ಮೂಲಕ ವೈದ್ಯಕೀಯ ತಂಡಗಳನ್ನು ಕಳುಹಿಸಿ ಚಿಕಿತ್ಸೆ ಮತ್ತು ಔಷಧ ಒದಗಿಸಲಾಗುತ್ತಿದೆ. ಪರಿಹಾರ ಶಿಬಿರಗಳಲ್ಲಿ ವಸತಿ, ಕುಡಿಯುವ ನೀರು, ಒಣ ಪಡಿತರ ಹಾಗೂ ಬೇಯಿಸಿದ ಆಹಾರ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹಾನಿ ಅಂದಾಜಿಗೆ ಕೇಂದ್ರ ತಂಡ
ಬೆಳೆ, ಮನೆ, ರಸ್ತೆ, ಸೇತುವೆ ಹಾಗೂ ಜಾನುವಾರುಗಳಿಗೆ ಉಂಟಾಗಿರುವ ಹಾನಿ ಅಂದಾಜಿಸಲು ಅಂತರ್-ಸಚಿವಾಲಯದ ಕೇಂದ್ರ ತಂಡವನ್ನು ಬಿಹಾರಕ್ಕೆ ಕಳುಹಿಸಲಾಗುವುದು ಎಂದು ಚೌಹಾಣ್ ತಿಳಿಸಿದರು.
ರಾಜ್ಯ ಸರ್ಕಾರದ ಪ್ರಸ್ತಾವನೆ ಬಂದ ಬಳಿಕ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಅಡಿಯಲ್ಲಿ ಅಗತ್ಯ ಹಣಕಾಸು ಮತ್ತು ಸಾಮಗ್ರಿ ನೆರವು ನೀಡುವ ಕುರಿತು ಕೇಂದ್ರ ಸರ್ಕಾರ ಪರಿಶೀಲಿಸಲಿದೆ ಎಂದರು.
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಬಿಹಾರದ ಜನರಿಗೆ ಭರವಸೆ ನೀಡುತ್ತೇನೆ. ಬಿಕ್ಕಟ್ಟು ಗಂಭೀರವಾಗಿದ್ದರೂ ಜನರ ಸೇವೆ ಮಾಡುವ ಸರ್ಕಾರದ ಸಂಕಲ್ಪ ಇನ್ನಷ್ಟು ಬಲವಾಗಿದೆ. ಯಾವುದೇ ಬಾಧಿತ ಕುಟುಂಬ ಅಸಹಾಯಕವಾಗಿರಲು ಬಿಡುವುದಿಲ್ಲ ಎಂದು ಚೌಹಾಣ್ ಹೇಳಿದರು.
ಪಾಟ್ನಾದಲ್ಲಿ ಮುಖ್ಯಮಂತ್ರಿ ನಿವಾಸದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಲಿದ್ದು, ಪರಿಹಾರ ವಿತರಣೆ, ಆರೋಗ್ಯ ಸೇವೆ, ಬೆಳೆ ಪರಿಹಾರ ಹಾಗೂ ಹಾನಿಗೊಳಗಾದ ಮೂಲಸೌಕರ್ಯಗಳ ಪುನರ್ಸ್ಥಾಪನೆ ಕುರಿತು ಚರ್ಚೆ ನಡೆಯಲಿದೆ.






































































