ಮದ್ದೂರು: ಹಿಂದುತ್ವ ದುರ್ಬಲವಾದರೆ ರಾಷ್ಟ್ರವೂ ದುರ್ಬಲವಾಗುತ್ತದೆ. ಗಣೇಶೋತ್ಸವ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಹಿಂದೂ ಸಮಾಜದಲ್ಲಿ ಒಗ್ಗಟ್ಟು, ಸಾಮರಸ್ಯ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ವೇದಿಕೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಮದ್ದೂರಿನಲ್ಲಿ ನಡೆದ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತೀಯತೆ ಮತ್ತು ಅಸ್ಪೃಶ್ಯತೆಗೆ ಗಣೇಶೋತ್ಸವದಲ್ಲಿ ಯಾವುದೇ ಅವಕಾಶ ಇರಬಾರದು. ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂಬ ಭಾವನೆ ಸಮಾಜದಲ್ಲಿ ಬಲಗೊಳ್ಳಬೇಕು ಎಂದು ಹೇಳಿದರು.
ಜಾತೀಯತೆ ಮತ್ತು ಅಸ್ಪೃಶ್ಯತೆ ಹಿಂದೂ ಸಮಾಜವನ್ನು ದುರ್ಬಲಗೊಳಿಸಿವೆ. ಈ ದುರ್ಬಲತೆಯನ್ನು ನಿವಾರಿಸಿ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ನಡೆಯಬೇಕು ಎಂದರು.

ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ ಉದ್ದೇಶ ಸಾಮಾಜಿಕ ಜಾಗೃತಿ ಮೂಡಿಸುವುದಾಗಿತ್ತು. ಮತಾಂತರ, ಅಸ್ಪೃಶ್ಯತೆ ಹಾಗೂ ಜಾತೀಯತೆ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ಸಮಾಜವನ್ನು ಸಂಘಟಿಸುವುದು ಗಣೇಶೋತ್ಸವದ ಆಶಯವಾಗಬೇಕು ಎಂದು ಪ್ರತಿಪಾದಿಸಿದರು.
‘ಗಣೇಶೋತ್ಸವ ಕೇವಲ ಪೂಜೆ, ಕಡುಬು ತಿನ್ನುವುದಕ್ಕಲ್ಲ’
ಗಣೇಶೋತ್ಸವ ಕೇವಲ ಪೂಜೆ ಮಾಡಿ ಕಡುಬು ತಿನ್ನುವುದಕ್ಕೆ ಸೀಮಿತವಾಗಬಾರದು. ಉತ್ಸವದ ಮೂಲಕ ಹಿಂದೂತ್ವದ ಜಾಗೃತಿ ಹಾಗೂ ಸಂಸ್ಕೃತಿಯ ಅನಾವರಣವಾಗಬೇಕು ಎಂದು ಸಿ.ಟಿ. ರವಿ ಹೇಳಿದರು.
ಹಿಂದೂ ಜನಸಂಖ್ಯೆಯಲ್ಲಿನ ಬದಲಾವಣೆಗಳ ಕುರಿತು ಮಾತನಾಡಿದ ಅವರು, ಗಾಂಧಾರ, ಸಿಂಧ್, ಬಂಗಾಳ ಹಾಗೂ ಕಾಶ್ಮೀರದ ಬೆಳವಣಿಗೆಗಳನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಇತಿಹಾಸದ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ. ರವಿ, ಕಾಂಗ್ರೆಸ್ಗೆ ಓಲೈಕೆ ರಾಜಕಾರಣ ಬಿಟ್ಟು ಬೇರೆ ವಿಷಯ ಗೊತ್ತಿಲ್ಲ ಎಂದು ಆರೋಪಿಸಿದರು. ಮತಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂ ಸಮಾಜವನ್ನು ಜಾತಿವಾರು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಹಿಂದೂಗಳ ಹಬ್ಬಗಳಿಗೆ ಮಾತ್ರ ವಿವಿಧ ರೀತಿಯ ನಿರ್ಬಂಧಗಳು ಎದುರಾಗುತ್ತಿವೆ ಎಂಬ ಆರೋಪ ಮಾಡಿದ ಅವರು, ವಿವಿಧ ಸಮುದಾಯಗಳ ಕಾರ್ಯಕ್ರಮಗಳಿಗೆ ಅನ್ವಯಿಸುವ ನಿಯಮಗಳು ಎಲ್ಲರಿಗೂ ಸಮಾನವಾಗಿರಬೇಕು ಎಂದು ಹೇಳಿದರು.
ಮಸೀದಿ ಇದೆ ಎಂಬ ಕಾರಣಕ್ಕೆ ಗಣೇಶ ಮೆರವಣಿಗೆ ನಡೆಸಬಾರದು ಎಂದು ಹೇಳುವ ಪರಿಸ್ಥಿತಿ ಇರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಮೆರವಣಿಗೆಗಳಿಗೆ ಸಂಬಂಧಿಸಿದಂತೆ ಎಲ್ಲರಿಗೂ ಸಮಾನ ನಿಯಮಗಳು ಅನ್ವಯಿಸಬೇಕು ಎಂದರು.
ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಈ ಪ್ರಕರಣದ ಕುರಿತು ಕಾಂಗ್ರೆಸ್ ನಾಯಕರು ಸ್ಪಷ್ಟವಾಗಿ ಮಾತನಾಡಬೇಕು ಎಂದು ಸವಾಲು ಹಾಕಿದರು.
ಭಯೋತ್ಪಾದನೆಯ ಆರೋಪಗಳನ್ನು ಹಿಂದುತ್ವದೊಂದಿಗೆ ಜೋಡಿಸುವ ಪ್ರಯತ್ನವನ್ನೂ ಅವರು ಪ್ರಶ್ನಿಸಿದರು. ಗಣೇಶ ಅಥವಾ ಹಿಂದುತ್ವದ ಹೆಸರಿನಲ್ಲಿ ಭಯೋತ್ಪಾದನೆ ನಡೆದಿಲ್ಲ ಎಂದು ಸಿ.ಟಿ.ರವಿ ಪ್ರತಿಪಾದಿಸಿದರು.
ತಾವು ರಾಜಕಾರಣಕ್ಕಾಗಿ ಹಿಂದುತ್ವವನ್ನು ಬಳಸಿಕೊಂಡಿಲ್ಲ. ಹಿಂದುತ್ವದ ವಿಚಾರಕ್ಕಾಗಿ ರಾಜಕಾರಣಕ್ಕೆ ಬಂದಿದ್ದೇವೆ ಎಂದು ಸಿ.ಟಿ. ರವಿ ಹೇಳಿದರು. ಸಾರ್ವಜನಿಕ ಗಣೇಶೋತ್ಸವವನ್ನು ರಾಜಕೀಯ ಕಾರ್ಯಕ್ರಮವಾಗಿ ನೋಡದೆ, ಜನರಲ್ಲಿ ಜಾಗೃತಿ ಮೂಡಿಸುವ ವೇದಿಕೆಯಾಗಿ ರೂಪಿಸಬೇಕು ಎಂದರು.
‘ಶಾಂತಿಯುತ ಆಚರಣೆಗೆ ಅವಕಾಶ ನೀಡಿ’
ಗಣೇಶೋತ್ಸವದ ಹೆಸರಿನಲ್ಲಿ ಗಲಭೆ ನಡೆಯುವುದಿಲ್ಲ. ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ಅಥವಾ ಪೆಟ್ರೋಲ್ ಬಾಂಬ್ ದಾಳಿ ನಡೆದಾಗ ಗಲಭೆ ಉಂಟಾಗುತ್ತದೆ ಎಂದು ಸಿ.ಟಿ. ರವಿ ಹೇಳಿದರು. ಹಿಂದೂಗಳು ತಮ್ಮ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು ಎಂದರು.
ಸರ್ಕಾರದ ಅಧಿಕಾರದ ಅಹಂಕಾರ ಹಾಗೂ ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಹಿಂದೂಗಳ ವಿರುದ್ಧವಾಗಿ ನಡೆದುಕೊಂಡರೆ ಕರ್ನಾಟಕದಲ್ಲಿಯೂ ಜನರು ಅಂತಹವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದರು.






































































