ಬೆಂಗಳೂರು: ಸಿದ್ದರಾಮಯ್ಯರದು ಕಾಂಗ್ರೆಸ್ ಪಕ್ಷದ ಮತಬ್ಯಾಂಕ್ ಭದ್ರಪಡಿಸುವ ಸ್ವಾರ್ಥ ರಾಜಕೀಯ ಎಂದು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಎಂ.ಜಿ. ಮಹೇಶ್ ಅವರು ಟೀಕಿಸಿದ್ದಾರೆ
ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 70 ವರ್ಷಗಳ ಕಾಲ ಈ ದೇಶದಲ್ಲಿ ಶಿಕ್ಷಣ ಪದ್ಧತಿಯನ್ನು ಮಾಡಿದರು. ಯಾರೂ ಅದನ್ನು ಪ್ರಶ್ನಿಸಲು ಹೋಗಲಿಲ್ಲ. ಆದರೆ, ಪರಾಮರ್ಶೆ ಹೆಸರಿನಲ್ಲಿ ಮೂಲ ಸಂಗತಿಯನ್ನೇ ಅವಹೇಳನ ಮಾಡಲಾಗುತ್ತಿದೆ. ಪಾಕಿಸ್ತಾನ ತನ್ನ 5 ಸಾವಿರ ವರ್ಷಗಳ ಭವ್ಯ ಇತಿಹಾಸದಲ್ಲಿ ಪಾಣಿನಿಯ ವ್ಯಾಕರಣವನ್ನು ನೆನಪಿಸಿಕೊಳ್ಳುತ್ತದೆ. ಆದರೆ ಈ ಸಿದ್ದರಾಮಯ್ಯರಿಗೆ ಏನಾಗಿದೆ? ಈ ದೇಶದ ಮೌಲ್ಯಗಳ ಬಗ್ಗೆ ಅಪಮೌಲ್ಯದ ಮಾತನಾಡುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ವೋಟ್ಬ್ಯಾಂಕ್ ರಾಜಕೀಯ ಛಿದ್ರವಾಗುತ್ತಿರುವುದಕ್ಕೋಸ್ಕರ, ಅದನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಈ ಥರದ ಹೊಸ ಪ್ರಯತ್ನದಲ್ಲಿದ್ದಾರೆ ಎಂದು ಆಕ್ಷೇಪಿಸಿದರು.
ಹಿಂದೆ ಪಠ್ಯಪುಸ್ತಕದ ಪರಿಷ್ಕರಣೆ ಮಾಡುವಾಗ ಪೆರಿಯಾರ್ ಅವರ ಪಾಠವನ್ನು ಹಾಕಿದರು. ಪೆರಿಯಾರ್ ಮೂರ್ತಿಪೂಜೆ ಬಗ್ಗೆ ನಂಬಿಕೆ ಇರದ, ಗಣಪತಿ, ರಾಮನ ಫೋಟೋಗೆ ಚಪ್ಪಲಿ ಹಾರ ಹಾಕಿದ, ವಿಗ್ರಹಗಳನ್ನು ಪುಡಿ ಮಾಡಿದ ವ್ಯಕ್ತಿ. ಪೆರಿಯಾರ್ ಮಾಡಿದ್ದಕ್ಕೋಸ್ಕರ ಅಲ್ಲಿನ ಹಿಂದುಳಿದ ಜನ ಕಾವಡಿ ಆಂದೋಲನ ಆರಂಭಿಸಿದರು. ಪೆರಿಯಾರ್ ತಮಿಳುನಾಡಿನಲ್ಲಿ ಆರಂಭಿಸಿದ ದ್ರಾವಿಡ ಚಳವಳಿಗೆ ವಿರುದ್ಧವಾಗಿ ಅಲ್ಲಿನ ಜನರು ಆರ್ಯನ್ ಎಂಬ ಹೋಟೆಲ್ಗಳು, ಬೇಕರಿಗಳನ್ನು ತೆರೆದರು. ಇದರಲ್ಲಿ ಬಿಜೆಪಿ ಪಾತ್ರವೇನೂ ಇರಲಿಲ್ಲ ಎಂದು ಗಮನ ಸೆಳೆದರು. ಅಂಥ ಪೆರಿಯಾರನ್ನು ಇಷ್ಟು ವರ್ಷ ಬೋಧಿಸಬಹುದು; ಆದರೆ, ಬಹುತ್ವದ ವಿಚಾರ ಬೋಧಿಸುವಂತಿಲ್ಲ. ಇದ್ಯಾವ ಮಾನದಂಡ ಎಂದು ಪ್ರಶ್ನಿಸಿದರು.
ಮಾತೆತ್ತಿದರೆ ಮನುವಾದ ಎನ್ನುತ್ತಾರೆ. ದೇವರಿಲ್ಲ ಎಂದ ಚಾರ್ವಾಕನಿಗೆ ಈ ದೇಶದಲ್ಲಿ ಸಪ್ತಋಷಿಗಳಲ್ಲಿ ಸ್ಥಾನ ಕೊಟ್ಟಿದ್ದಾರೆ. ಹಿಂದೆ ವಿಚಾರವಾದಿಗಳು ತಮ್ಮ ಮನೆ ಮುಂದೆ ಚಾರ್ವಾಕ ಎಂದು ಹೆಸರು ಹಾಕಿಕೊಳ್ಳುತ್ತಿದ್ದರು. ನಾಲ್ಕಾರು ದಶಕಗಳ ಕಾಲ ಸಾರ್ವಜನಿಕ ಜೀವನ ಮಾಡಿದ, ವಿಧಾನಸೌಧದ ಒಳಗೆ ಕನ್ನಡದ ವ್ಯಾಕರಣ ತಿದ್ದುವ ಪ್ರಯತ್ನ ಮಾಡಿದವರು ಈ ದೇಶದ ಬಹುತ್ವ ಮತ್ತು ಮೂಲ ನಿವಾಸಿಗಳ ಬಗ್ಗೆ ಪ್ರಶ್ನಿಸುತ್ತೀರಲ್ಲವೇ? ಮೂಲ ನಿವಾಸಿಗಳ ಬಗ್ಗೆ ಪ್ರಶ್ನಿಸಲು ನಿಮಗೆ ಯಾವ ನೈತಿಕತೆ ಇದೆ? ಯಾರನ್ನು ಓಲೈಸಲು ನೀವು ಈ ಕೆಲಸ ಮಾಡುತ್ತೀರಿ? ಸಿದ್ದರಾಮಯ್ಯನವರ ನಿನ್ನೆಯ ಹೇಳಿಕೆ ಯಾರನ್ನು ಉದ್ದೇಶಿಸಿದ್ದು ಎಂದು ಪ್ರಶ್ನಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಅಸಹಿಷ್ಣುತೆ ಪದ ಬಳಕೆ ಬಗ್ಗೆ ಪ್ರಸ್ತಾಪಿಸಿದ ಅವರು, ದೇಶದ ಉದ್ದಗಲಕ್ಕೂ ಅಸಹಿಷ್ಣುತೆ ನಡೆದಿಲ್ಲವೇ? ನಿನ್ನೆ ಕಲಬುರ್ಗಿಯಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸಿದ ದಲಿತ ಯುವಕನನ್ನು ಕೊಲೆ ಮಾಡಿದರಲ್ಲವೇ? ಎಲ್ಲಿ ಹೋದಿರಿ ನೀವು? ಉಡುಪಿಯ ಕುಂದಾಪುರದಲ್ಲಿ ಜಿಹಾದಿಗಳು ಮೋಸ ಮಾಡಿದರೆಂಬ ಕಾರಣಕ್ಕೆ ಹೆಣ್ಮಗಳು ಆತ್ಮಹತ್ಯೆ ಮಾಡಿಕೊಂಡರಲ್ಲವೇ? ಎಲ್ಲಿ ಹೋದಿರಿ ನೀವು? ಎಂದು ಕೇಳಿದರು.
ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಸುಟ್ಟು ಹಾಕಿದರು; ಸುಟ್ಟು ಹಾಕಿದ ವ್ಯಕ್ತಿ ಜೈಲಿನಿಂದ ಬಿಡುಗಡೆಯಾಗಿ ಬಂದಾಗ ನಿಮ್ಮ ಶಿಷ್ಯ ಜಮೀರ್ ಅವರನ್ನು ಮೆರವಣಿಗೆ ಮಾಡಿ ಕರೆತಂದರಲ್ಲವೇ? ಇದ್ಯಾವ ನಿಲುವು ಸಿದ್ದರಾಮಯ್ಯನವರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸ್ವಾರ್ಥ ರಾಜಕಾರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತೀರಿ ಎಂದು ಕೇಳಿದರು.
ಸಿದ್ದರಾಮಯ್ಯನವರ ಡೋಂಗಿ – ಹುಸಿ ರಾಜಕೀಯ ಪ್ರವೃತ್ತಿ ಬಹಿರಂಗವಾಗಿದೆ. ಸಿದ್ದರಾಮಯ್ಯ ಅರೆಬೆಂದ ಮಡಿಕೆಯ ಥರ ಪರಿಕಲ್ಪನೆಯೇ ಇಲ್ಲದ ರಾಜಕಾರಣಿ ಆಗಿದ್ದಾರೆ. ದೇವರು ಸಿದ್ದರಾಮಯ್ಯಂಗೆ ಅಷ್ಟೇ ಬುದ್ಧಿ ಕೊಟ್ಟಿದ್ದರೆ ನಾನೇನೂ ಮಾಡಲಾಗದು. ಆ ಭಗವಂತ ಇನ್ನಷ್ಟು ಪ್ರಬುದ್ಧತೆ, ಜಾಣ್ಮೆಯನ್ನು ಸಿದ್ದರಾಮಯ್ಯನಂಥವರಿಗೆ ಕೊಡಬೇಕು ಅನಿಸುತ್ತಿದೆ ಎಂದು ನುಡಿದರು.
ಭಾರತದ ಸೋಲು, ವಿಫಲತೆಯನ್ನೇ ಹಿಂದೆ ಪಠ್ಯದಲ್ಲಿ ತರಲಾಯಿತು. ಭಾರತ ವಿಜೃಂಭಿಸಿದ್ದು ಎಲ್ಲೂ ಇಲ್ಲ. ಆದರೆ, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಅಪಪ್ರಚಾರ ಮಾಡಲಾಯಿತು. ನಾರಾಯಣ ಗುರು, ಭಗತ್ ಸಿಂಗ್ ಅವರನ್ನು ಬಿಟ್ಟರೆಂದು ಸುದ್ದಿ ಹಬ್ಬಿಸುವ ಪ್ರಯತ್ನ ಮಾಡಿದರು. ಇದೆಲ್ಲ ಫಲ ಕೊಡದಿದ್ದಾಗ ಮೂಲನಿವಾಸಿಗಳ ವಿಚಾರ ಎತ್ತಿದ್ದಾರೆ. ಇದೊಂದು ವ್ಯವಸ್ಥಿತ ರೀತಿಯ ಪಿತೂರಿ ಎಂದು ಆಕ್ಷೇಪಿಸಿದರು.
ಪಠ್ಯ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಕಾರ್ಯವನ್ನು ಯಾವುದೇ ಬಣ್ಣದಿಂದ ನೋಡಬಾರದು. ಕೇಸರೀಕರಣ, ಎಡ, ಬಲದಿಂದ ಮೊದಲು ಹೊರಗೆ ಬರಬೇಕಿದೆ. ಸಿದ್ದರಾಮಯ್ಯನವರು ಮಾತನಾಡಿದರೆ ಅದು ಜಾತ್ಯತೀತವಾದ. ನಾವೇನಾದರೂ ಮಾತನಾಡಿದರೆ ಅದು ಕೋಮುವಾದ. ಇದು ಈ ದೇಶದಲ್ಲಿ 70 ವರ್ಷಗಳಿಂದ ನಡೆದುಬಂದಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.






































































