ಬೆಂಗಳೂರು: 2019 ರ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಬಿಜೆಪಿ 71 ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದೆ. ಹೀಗಿದ್ದರೂ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ರೈತ ವಿರೋಧಿ ನೀತಿಯನ್ನು ಮುಂದುವರಿಸಿದ್ದೇ ಆದಲ್ಲಿ ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ರೈತರ ಕೋಪ ತೋರಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಸಂಯುಕ್ತ ಕಿಸಾನ್ ಬೇಡ ಮೋರ್ಚಾ ನಾಯಕ ಕುರುಬೂರ್ ಶಾಂತಕುಮಾರ್ ಸೇರಿದಂತೆ ರೈತ ನಾಯಕರ ಉಪಸ್ಥಿತಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ, ದೇಶದ ರೈತರ ಬೆಂಬಲ ನಮಗಿದೆ. ನಾವು ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಛಲ ನಮ್ಮಲ್ಲಿದೆ. ದಕ್ಷಿಣ ಭಾರತ ರಾಜ್ಯಗಳ ರೈತರು ಬೆಂಬಲಿಸಿ ಚಳುವಳಿಯನ್ನು ಪ್ರಬಲಗೊಳಿಸಿ, ರೈತಶಕ್ತಿಯನ್ನು ಹೆಚ್ಚಿಸಿ ಎಂದರು.
ಎಂಎಸ್ಪಿ ಖಾತರಿ ಕಾನೂನಿಗೆ ಫೆಬ್ರವರಿ 13 ರಿಂದ 4 ಸ್ಥಳಗಳಲ್ಲಿ ನಮ್ಮ ಪ್ರತಿಭಟನೆ ನಡೆಯುತ್ತಿದ್ದು, 125 ದಿನಗಳಿಗೂ ಹೆಚ್ಚು ಕಾಲ ಸಾವಿರಾರು ರೈತರು ರಸ್ತೆಗಿಳಿದಿದ್ದಾರೆ, ಕೇಂದ್ರ ಸರ್ಕಾರ ಈಡೇರಿಸುವವರೆಗೆ ಈ ಪ್ರತಿಭಟನೆ ಮುಂದುವರಿಯುತ್ತದೆ ಎಂದು ತಿಳಿಸಿದರು. ನಮ್ಮ ಭಾಗದ ರೈತ ಸಮುದಾಯದ ಆಕ್ರೋಶದಿಂದ ಗ್ರಾಮೀಣ ಪ್ರದೇಶದಲ್ಲಿ 2019 ರ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ 71 ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ಅವರು ವಿವರಿಸಿದರು. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ತಮ್ಮ ರೈತ ವಿರೋಧಿ ನೀತಿಯನ್ನು ಬದಲಾಯಿಸದಿದ್ದರೆ ಬಿಜೆಪಿ ರೈತರ ಬಾರಿ ಆಕ್ರೋಶ ಎದುರಿಸಲಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಮುಂಬರುವ ಎಲ್ಲಾ ವಿಧಾನಸಭಾ ಚುನಾವಣಾ ರಾಜ್ಯಗಳಲ್ಲಿ ರೈತರ ಕೋಪ ತೋರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜುಲೈ 8 ರಂದು ಎಸ್ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ವತಿಯಿಂದ ಬಿಜೆಪಿಯ 240 ಸಂಸದರನ್ನು ಹೊರತುಪಡಿಸಿ ಎಲ್ಲಾ ಸಂಸತ್ ಸದಸ್ಯರಿಗೆ ತಮ್ಮ 12 ಬೇಡಿಕೆಗಳ ಕುರಿತು ಜ್ಞಾಪಕ ಪತ್ರವನ್ನು ನೀಡಲಿದೆ ಎಂದ ಅವರು, ಜುಲೈ ತಿಂಗಳಲ್ಲಿ ಎರಡು ವೇದಿಕೆಗಳಲ್ಲಿ ದೆಹಲಿಯಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಲಿವೆ ಎಂದು ಹೇಳಿದರು. ರೈತರ ಪ್ರತಿಭಟನೆಯನ್ನು ಬಲಪಡಿಸಲು ದಕ್ಷಿಣ ಭಾರತದ ರೈತರು ಜೂನ್ 24 ರಂದು ಶಿವಮೊಗ್ಗದಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಿದ್ದರು ಎಂದು ಹೇಳಿದರು. ಎಸ್ಕೆಎಂ (ರಾಜಕೀಯೇತರ) ಸೆಪ್ಟೆಂಬರ್ನಲ್ಲಿ ಹರಿಯಾಣದಲ್ಲಿ ರೈತ ರ್ಯಾಲಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ಎಲ್ಲಾ ರಾಜ್ಯಗಳಿಂದ 1 ಲಕ್ಷಕ್ಕೂ ಹೆಚ್ಚು ರೈತರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕರೂ ಆದ, ರಾಜ್ಯ ರೈತ ಸಂಘಟನೆಗಳು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ ತಕ್ಷಣ ರೈತರಿಗೆ ಲಾಭವಿಲ್ಲ. ರೈತರ ಕಣ್ಣಿಗೆ ಮಣ್ಣಿರಚಬಾರದು. ರೈತರು ಕೇಳುತ್ತಿರುವುದು ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಅದಕ್ಕಾಗಿಯೇ ನಮ್ಮ ಹೋರಾಟ. ಒಡಿಸ್ಸಾ ಮತ್ತು ಛತ್ತೀಸ್ಗಡ ರಾಜ್ಯಗಳು ಭತ್ತಕ್ಕೆ 3100 ಪ್ರೋತ್ಸಾಹ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ 2300. ಬೆಂಬಲ ಬೆಲೆ ನಿಗದಿ ಮಾಡಿರುವುದು ಯಾವ ನ್ಯಾಯ ಎಂದರು.
ಕರ್ನಾಟಕದಲ್ಲಿ ಬರಗಾಲದಿಂದ ರೈತರು ತತ್ತರಿಸಿದ್ದರು ಸೂಕ್ತ ಪರಿಹಾರ ಸಿಕ್ಕಿಲ್ಲ. ಆದರೆ ತೆಲಂಗಾಣ ಸರ್ಕಾರ ರೈತರ 2 ಲಕ್ಷ ಸಾಲ ಮನ್ನಾ ಮಾಡಿದೆ. ಪ್ರತಿ ಎಕರೆಗೆ ವರ್ಷಕ್ಕೆ 15ಸಾವಿರ ಪ್ರೋತ್ಸಾಹಧನ ನೀಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ತೀವ್ರ ಬರಗಾಲವಾಗಿದ್ದರೂ ರೈತರಿಗೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಹಣ 4 ಸಾವಿರ ನಿಲ್ಲಿಸಿದ್ದಾರೆ. ಇದು ರಾಜ್ಯ ಸರ್ಕಾರ ರೈತರಿಗೆ ಬಗೆದ ದ್ರೋಹವಾಗಿದೆ ಎಂದು ಕುರುಬೂರ್ ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹೆಸರಿನಲ್ಲಿ ಹಾಲು ದರ ಹೆಚ್ಚಳ ಮಾಡುತ್ತಿದ್ದಾರೆ ಆದರೆ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ರೂ. 5 ಪ್ರೋತ್ಸಾಹ ಧನ ಸುಮಾರು 700 ಕೋಟಿ 8 ತಿಂಗಳಿಂದ ಬಿಡುಗಡೆ ಮಾಡಿಲ್ಲ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಲಿ ಎಂದ ಅವರು, ಸರ್ಕಾರಗಳ ಕೃತಕ ನೀತಿಯಿಂದ ಸ್ವಾಭಾವಿಕ ಪ್ರಕೃತಿ ನಾಶದ ಹಂಚಿನಲ್ಲಿದ್ದು ಹವಾಮಾನ ವೈಪರಿತ್ಯ ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಈ ದಿಕ್ಕಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಹರಿಯಾಣ ರಾಜ್ಯದ ರೈತ ಮುಖಂಡ ಅಭಿಮನ್ಯುಕೊಹರ್. ಮಾತನಾಡಿ ಚಳುವಳಿ ನಿರತ ರೈತರ ತಾಳ್ಮೆ ಪರೀಕ್ಷೆ ಮಾಡುವುದು ಬೇಡ ಎಂದು ಎಚ್ಚರಿಕೆ ನೀಡಿದರು. ಕೇರಳ ರಾಜ್ಯದ ಕೆ ವಿ ಬಿಜು ಮಾತನಾಡಿ ಕೇಂದ್ರ ಸರ್ಕಾರ ಅಡುಗೆಗೆ ಬಳಸುವ ಪಾಮ್ ಅಯಿಲ್ ಅಂಡ್ ಸೋಯಾಬಿನ್ ಆಯಿಲ್ ಎಣ್ಣೆಯ ಆಮದು ತೆರಿಗೆಯನ್ನು ಶೇಕಡ 5.5ಕ್ಕೆ ಇಳಿಕೆ ಮಾಡಿದ ಪರಿಣಾಮ ತೆಂಗು ಬೆಳೆಗಾರರು ಸಂಕಷ್ಟ ಪಡುವಂತಾಗಿದೆ. ಆದಾನಿ ಮಾಲಿಕತ್ವದ ಕಂಪನಿ ಈ ಎಣ್ಣೆಯನ್ನು ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಇದು ರೈತರ ಪಾಲಿಗೆ ದೊಡ್ಡ ಸಂಕಷ್ಟ ಸೃಷ್ಟಿ ಮಾಡಿದೆ ಎಂದರು. ತಮಿಳುನಾಡಿನ ರೈತ ಮುಖಂಡ ಪಿಆರ್ ಪಾಂಡ್ಯನ್ ಮಾತನಾಡಿ, ಕೇಂದ್ರ ಸರ್ಕಾರ ನಾಲ್ಕು ಸಭೆಗಳನ್ನು ನಡೆಸಿ ಯಾವುದೇ ತೀರ್ಮಾನ ಕೈಗೊಳ್ಳದೆ ನಾಟಕವಾಡಿದೆ ದಕ್ಷಿಣ ಭಾರತ ರಾಜ್ಯಗಳ ಕಬ್ಬು, ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ಯಾವುದೇ ಗಂಭೀರ ಚಿಂತನೆ ನಡೆಸಿಲ್ಲ ಎಂದು ದೂರಿದರು.
ಹರಿಯಾಣದ ಲಕ್ವಿಂದರ್ ಸಿಂಗ್, ನವದೆಹಲಿಯ ಜಾಫರ್ ಖಾನ್. ಸುಖಜಿತ್ ಸಿಂಗ್. ಮಾತನಾಡಿ ಸ್ವಾತಂತ್ರ ಹೋರಾಟದ ಮಾದರಿಯಲ್ಲಿ ಶಾಂತಿಯುತ ರೈತ ಹೋರಾಟ ನಡೆಯುತ್ತಿದೆ ಸರ್ಕಾರ ಯಾವುದೇ ಅಸ್ತ್ರಬಳಸಿದರು ನಾವು ಎದೆಗುಂದುವ ಪ್ರಶ್ನೆಯೇ ಇಲ್ಲ ರೈತ ಹೋರಾಟವನ್ನು ಲಘುವಾಗಿ ಕಾಣುವವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.






































































