ಮಂಗಳೂರು: ಕರಾವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಯಾರ ಹೆಸರು? ರಾಜ್ಯ ಬಿಜೆಪಿ ನಾಯಕರಿಗೆ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳ ಬಗ್ಗೆ ತಲೆನೋವು ಸೃಷ್ಟಿಯಾಗಿದೆ.
ದ.ಕ-ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾಗಿದ್ದಾರೆ. ಅವರಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಪರ್ಯಾಯ ಅಭ್ಯರ್ಥಿಯ ಹುಡುಕಾಟ ಬಿಜೆಪಿಯಿಂದ ಸಾಗಿದೆ.
ಈ ಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ, ಸತ್ಯಜಿತ್ ಸುರತ್ಕಲ್ ಸಹಿತ ಹಿಂದೂ ಸಂಘಟನೆಗಾಗಿ ದುಡಿದಿರುವ ಹಲವರ ಹೆಸರುಗಳು ಕೇಳಿಬರುತ್ತಿವೆ. ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದತ್ತ ಆಸಕ್ತಿ ವ್ಯಕ್ತಪಡಿಸಿರುವ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡಾ ಕಣ್ಣಿಟ್ಟಿದ್ದಾರೆ.
ಕರಾವಳಿ ಜಿಲ್ಲೆಗಳ ಬಹುತೇಕ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಒಲವು ಅರುಣ್ ಪುತ್ತಿಲ ಹಾಗೂ ಸತ್ಯಜಿತ್ ಸುರತ್ಕಲ್ ಪರವಾಗಿ ಇದೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭಿನ್ನಮತ ಶಮನದ ಉದ್ದೇಶದಿಂದ ರಾಜ್ಯ ನಾಯಕರು ಈ ಮುಖಂಡರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿಸುವ ಭರವಸೆ ನೀಡಿದ್ದರು. ಈ ಇಬ್ಬರೂ ಹಿಂದೂ ಸಂಘಟನೆಗಾಗಿ ಕೆಲಸ ಮಾಡಿರುವುದರಿಂದ ಇವರಿಗೆ ಟಿಕೆಟ್ ನೀಡಬೇಕೆಂದು ಆರೆಸ್ಸೆಸ್ ಕಾರ್ಯಕರ್ತರು ಪ್ರತಿಪಾದಿಸಿದ್ದಾರೆ.
ಬಿಲ್ಲವರ ಆಯ್ಕೆಯತ್ತ..!
ಬಿಲ್ಲವರೇ ಪ್ರಾಬಲ್ಯವಿರುವ ಕರಾವಳಿ ಜಿಲ್ಲೆಗಳಲ್ಲಿ ಈ ಕ್ಷೇತ್ರವನ್ನು ಈ ವರೆಗೂ ಬಿಲ್ಲವರಾದ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿನಿಧಿಸುತ್ತಿದ್ದರು. ಹಾಗಾಗಿ ಈ ಬಾರಿಯೂ ಬಿಲ್ಲವರಿಗೆ ಟಿಕೆಟ್ ನೀಡಬೇಕು, ಅದರಲ್ಲೂ ಹಿಂದೂ ಸಂಘಟನೆಗಳಿಗೆ ಬದುಕನ್ನು ಶ್ರಮಿಸಿದವರಿಗೆ ನೀಡಬೇಕು ಎಂದು ಹಲವರು ಅಭಿಪ್ರಾಯ ಮುಂದಿಟ್ಟಿದ್ದಾರೆ.
ಈ ನಡುವೆ, ದಕ್ಷಿಣ ಕನ್ನಡದಲ್ಲಿ ಹಲವರು ಘಟಾನುಘಟಿ ನಾಯಕರಿದ್ದರೂ ‘ಸಿಡಿ’ ಆತಂಕದಿಂದಾಗಿ ಕೋರ್ಟ್ ಮೆಟ್ಟಿಲೇರಿರುವ ಮಂದಿಗೆ ಟಿಕೆಟ್ ಬೇಡವೇ ಬೇಡ ಎಂಬ ಮಾತುಗಳೂ ಪ್ರತಿಧ್ವನಿಸಿವೆ.
ಇನ್ನೊಂದೆಡೆ, ಸತೀಶ್ ಕುಂಪಲ ಅವರ ಹೆಸರು ಕೇಳಿ ಬಂದಿವೆಯಾದರೂ, ಅವರು ಮಂಗಳೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಮುಂದಿನ ಚುನಾವಣೆಯಲ್ಲೂ ಅವರು ಆ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು, ಹಾಗಾಗಿ ಅವರ ಕ್ಷೇತ್ರ ಬದಲಿಸಬೇಡಿ ಎಂಬ ಒತ್ತಡ ಆ ಕ್ಷೇತ್ರದ ಜನರದ್ದು.
ಪರಿಷತ್ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ತೀವ್ರ ಚರ್ಚೆ ನಡೆದಿದೆ. ಹಲವರ ಹೆಸರುಗಳ ಪೈಕಿ ಸಂಸದ ಬ್ರಿಜೇಶ್ ಚೌಟರ ಅಭಿಪ್ರಾಯಕ್ಕೂ ಮಹತ್ವ ಸಿಗಲಿದೆ. ಈ ವಿಚಾರದಲ್ಲಿ ಚೌಟರ ಅಭಿಪ್ರಾಯಕ್ಕೆ ಪಕ್ಷ ಅಂತಿಮ ಮುದ್ರೆ ಒತ್ತಿವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.
ಕಟೀಲ್ ಬಗ್ಗೆ ಕಾದು ನೋಡುವ ತಂತ್ರ:
ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೂಡಾ ವಿಧಾನ ಪರಿಷತ್ ಟಿಕೆಟ್ಗೆ ತೆರೆಮರೆಯಲ್ಲಿ ಲಾಭಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ಕಾರ್ಯಾಲಯದ ಮೊಗಸಾಲೆಯಲ್ಲಿ ಕೇಳಿಬರುತ್ತಿದೆ. ಬಿಜೆಪಿ ಹಿರಿಯ ನಾಯಕರ ಪೈಕಿ ಹಲವರಿಗೆ ನಳಿನ್ ಬಗ್ಗೆ ಅನುಕಂಪ ಇದೆ. ಹಾಗಾಗಿ ಅವರ ಆಯ್ಕೆ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.
ಈ ಹಿಂದೆ, ಇಡೀ ಜಿಲ್ಲೆಯ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಲೋಕಸಭಾ ಚುನಾವಣೆಯಿಂದ ದೂರ ಇಡಲಾಗಿತ್ತು. ಇದೀಗ ಮತ್ತೆ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವ ಮುನ್ನ ನಾಯಕರ ಅಭಿಪ್ರಾಯಕ್ಕಿಂತ ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯ ಆಲಿಸಲೇಬೇಕೆಂಬ ಒತ್ತಾಯ ಕೇಳಿಬಂದಿದೆ. ಹಾಗಾಗಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕಾದು ನೋಡುವ ತಂತ್ರಕ್ಕೆ ನಾಯಕರು ಮುಂದಾಗಿದ್ದಾರೆ.