ಉಡುಪಿ: ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣ ಬೇಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. ಸ್ವತ ಆಕೆಯ ಪತಿಯೇ ಸುಪಾರಿ ಕೊಟ್ಟು ಕೊಲೆಮಾಡಿಸಿದ್ದ ಎಂಬ ಸಂಗತಿಯನ್ನೂ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಸಂಬಂಧ ಒಬ್ಬ ಸುಪಾರಿ ಕಿಲ್ಲರ್ ನನ್ನು ಪೋಲೀಸರು ಬಂಧಿಸಿದ್ದು ಕೊಲೆಯ ಹಿಂದಿನ ರಹಸ್ಯ ಬೇಧಿಸುವಲ್ಲೂ ಯಶಸ್ಸಾಗಿದ್ದಾರೆ.
ಜುಲೈ ೧೨ ರಂದು ಬ್ರಹ್ಮಾವರ ಸಮೀಪದ ಕುಮ್ರಗೋಡು ವಿನ ಮಿಲನ ರೆಸಿಡೆನ್ಸಿ ಎಂಬ ಪ್ಲಾಟ್ ನಲ್ಲಿ ವಿಶಾಲ ಗಾಣಿಗ ಕೊಲೆ ನಡೆದಿತ್ತು. ಪ್ರಕರಣ ತನಿಖೆ ನಡೆಸಿದ ಪೋಲೀಸರಿಗೆ ಯಾವುದೇ ಸಾಕ್ಷಿಗಳು ಸಿಕ್ಕಿರಲೇ ಇಲ್ಲ . ಆ ಕಟ್ಟಡದಲ್ಲಿ ಸಿಸಿಟಿವಿಯೂ ಇರಲಿಲ್ಲ. ಪೋಲೀಸರಿಗೆ ದೊಡ್ಡ ಸವಾಲಿನ ಕೇಸ್ ಇದಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಪಿ ವಿಷ್ಣುವರ್ಧನ್ ೬ ತಂಡಗಳನ್ನು ರಚನೆ ಮಾಡಿದ್ದರು. ವಿವಿಧ ಆಯಾಮಗಳಲ್ಲಿ ತನಿಖೆ ನಡೆದಾಗ ಕೊಲೆ ಮಾಡಿದವ ವ್ಯಕ್ತಿ ಉತ್ತರ ಪ್ರದೇಶದಲ್ಲಿರುವ ಬಗ್ಗೆ ಮಾಹಿತಿ ದೊರೆಯಿತು. ಅಲ್ಲಿಗೆ ತೆರಳಿದ ತನಿಖಾ ತಂಡ ನೇಪಾಳ ಗಡಿ ಭಾಗದಲ್ಲಿ ಸುಪಾರಿ ಕಿಲ್ಲರ್ ಸ್ವಾಮಿನಾಥ ನಿಶಾದ ಬಂಧಿಸಿ ಕರೆತಂದಿದ್ದಾರೆ. ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಈ ಕೊಲೆ ನಡೆಸಲು ಸ್ವತ ವಿಶಾಲ ಗಾಣಿಗ ಪತಿ ರಾಮಕೃಷ್ಣ ಗಾಣಿಗನೇ ಸುಪಾರಿ ಕೊಟ್ಟಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಈ ವಿಚಾರವನ್ನು ಎಸ್ಪಿ ವಿಷ್ಣುವರ್ಧನ್ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಸುಪಾರಿ ಕಿಲ್ಲರ್ ನೀಡಿದ ಮಾಹಿತಿ ಆಧಾರದಲ್ಲಿ ರಾಮಕೃಷ್ಣ ಗಾಣಿಗನನ್ನು ವಶಕ್ಕೆ ಪಡೆದ ಪೋಲೀಸರು ವಿಚಾರಣೆ ನಡೆಸಿದಾಗ ಆತ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ತನ್ನ ಮತ್ತು ಹೆಂಡತಿ ಮಧ್ಯೆ ಅನ್ಯೋನ್ಯತೆ ಇಲ್ಲದ ಕಾರಣ ಇಬ್ಬರಿಗೆ ಸುಪಾರಿ ಕೊಟ್ಟು ಈ ಕೃತ್ಯ ನಡೆಸಿರುವುದಾಗಿ ಒಪ್ಪಿದ್ದಾನೆ.
ಆರು ತಿಂಗಳ ಹಿಂದೆಯೇ ಸಂಚು..
ಪತ್ನಿಯ ಕೊಲೆಗಾಗಿ ರಾಮಕೃಷ್ಣ ೬ ತಿಂಗಳಿಂದ ಪ್ಲಾನ್ ಮಾಡಿದ್ದು ಮಾರ್ಚ್ ತಿಂಗಳಲ್ಲಿ ಊರಿಗೆ ಬಂದು ಸುಪಾರಿ ಕಿಲ್ಲರ್ ಗಳ ಜೊತೆ ಮಾತನಾಡಿ ವ್ಯವಸ್ಥೆ ಮಾಡಿದ್ದ. ಅವರಿಬ್ಬರನ್ನು ತನ್ನ ಗೆಳೆಯರು ಎಂದು ಪತ್ನಿಗೆ ಪರಿಚಯಿಸಿದ್ದ. ಅದರಂತೆ ಎರಡು ಲಕ್ಷ ರೂಪಾಯಿ ವಿದೇಶದಿಂದಲೇ ಕಿಲ್ಲರ್ ಗಳಿಗೆ ಜಮೆ ಮಾಡಿದ್ದ. ಜುಲೈ ತಿಂಗಳಲ್ಲಿ ಊರಿಗೆ ಬಂದ ಪತ್ನಿಗೆ ಪ್ಲಾಟ್ ಗೆ ಒಬ್ಬಳೇ ಹೋಗುವಂತೆ ಹೇಳಿದ್ದ. ಅಲ್ಲಿಗೆ ತನ್ನ ಗೆಳೆಯರು ಬರುವುದಾಗಿಯೂ ಅವರು ವ್ಯವಹಾರದ ಬಗ್ಗೆ ಚರ್ಚೆ ನಡೆಸುವುದಾಗಿಯೂ ಹೇಳಿದ್ದ. ಅದರಂತೆ ಪ್ಲಾಟ್ ಗೆ ಬಂದಾಗ ಕಿಲ್ಲರ್ ಗಳು ಆಕೆಯ ಮನೆಗೆ ಪರಿಚಯಸ್ಥರಂತೆ ಬಂದು ಆಕೆಯ ಕೊಲೆ ಮಾಡಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಪ್ರಕರಣದ ದಿಕ್ಕು ತಪ್ಪಿಸಲು ಆಕೆಯ ಚಿನ್ನವನ್ನು ಹೊತ್ತೊಯ್ದಿದ್ದರು. ಆದರೆ ಚಾಲಾಕಿ ಪೊಲೀಸರು ಈ ಪ್ರಕರಣದ ರಹಸ್ಯ ಬೇಧಿಸಿ ಕಿಲ್ಲರ್ ಗ್ಯಾಂಗನ್ನೇ ಜೈಲಿಗಟ್ಟಿದೆ. ಇದೇ ವೇಳೆ, ಪ್ರಕರಣ ಬೇಧಿಸಿದ ಪೋಲೀಸ್ ತಂಡಕ್ಕೆ ವರಿಷ್ಠಾಧಿಕಾರಿಗಳು ೫೦೦೦೦ ರೂಪಾಯಿ ಬಹುಮಾನ ಪ್ರಕಟಿಸಿದ್ದಾರೆ.