ಮಂಗಳೂರು: ‘ಸಮಾಜ ಸೇವೆಯೇ ನಮ್ಮ ಉಸಿರು’ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ‘ಸೇವೆಗಾಗಿ ಸಂಭಾಷಣೆ’ ಎಂಬ ಪರಿಕಲ್ಪನೆಯ ಮೂಲಕ ಆರಂಭಗೊಂಡ ‘ವೀರಕೇಸರಿ ಬೆಳ್ತಂಗಡಿ’ ಸಂಘಟನೆ ಕಳೆದ 5 ವರ್ಷ 6 ತಿಂಗಳುಗಳಲ್ಲಿ 141 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 6ನೇ ವರ್ಷದ ಪಯಣದಲ್ಲಿ 4 ಕುಟುಂಬಗಳಿಗೆ ನೆರವಾಗಿ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ.
ಉತ್ಸಾಹವಿದ್ದರೆ, ಏನನ್ನಾದರೂ ಸಮಾಜಕ್ಕೆ ಮಾಡಬೇಕು ಎಂಬುವ ಹಂಬಲವಿದ್ದರೆ ಒಂದು ವೇದಿಕೆ ಬೇಕು. ಹಾಗೆ ಅದು ಹಲವಾರು ತರುಣರ ಮನಸೆಳೆಯಬೇಕು. ವೇದಿಕೆ ಬಳಿಸೇರಿದ ತರುಣರ ಹೃದಯ ಪರಿಪೂರ್ಣವಾಗಿರಬೇಕು. ಆಗಮಾತ್ರ ಗೊಂದಲ, ಅಡೆತಡೆಗಳಿಲ್ಲದೆ ಅದರ ಯಶಸ್ಸು ಸಾದ್ಯ. ಎಂಬುದನ್ನು ವೀರಕೇಸರಿ ಸೇನಾನಿಗಳು ತೋರಿಸಿಕೊಟ್ಟಿದ್ದಾರೆ.
ಇತ್ತೀಚಿನ ಯೋಜನೆಗಳ ಮಾಹಿತಿ ಇಲ್ಲಿದೆ:
- 138ನೇ ಸೇವಾಯೋಜನೆಯಾಗಿ ಕಾಪು ತಾಲೂಕಿನ ಪಡುಬೆಳ್ಳೆ ಧರ್ಮಶ್ರೀ ಕಾಲೋನಿ ಶ್ರೀಮತಿ ಸರಸ್ವತಿ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ 15,000 ರೂ.ಗಳನ್ನು ಹಸ್ತಾಂತರಿಸಲಾಗಿದೆ.
- 139ನೇ ಸೇವಾಯೋಜನೆ*ಯಾಗಿ ಕಾರ್ಕಳ ತಾಲೂಕಿನ ಪಡುಕುಡೂರಿನ ಸುಜಾತ ಇವರ ಮಗ ಅಂಗವಿಕಲನಾಗಿದ್ದು ಹಾಗೂ ಇವರ ಆರ್ಥಿಕ ಸಂಕಷ್ಟವನ್ನು ಕಂಡು ಇವರ ಕುಟುಂಬಕ್ಕೆ 15,000 ರೂ.ಗಳನ್ನು ಹಸ್ತಾಂತರಿಸಲಾಗಿದೆ.
- 140ನೇ ಸೇವಾಯೋಜನೆ*ಯಾಗಿ ಉಡುಪಿ ಜಿಲ್ಲೆಯ ಕುಕ್ಕಿಕಟ್ಟೆ , ಆಶಾ ಭಂಡಾರಿ ಇವರ ಗಂಡ ತೀರಿಕೊಂಡಿದ್ದು ಹಾಗೂ ಇವರ ಮನೆಯಲ್ಲಿ ತೀರಾ ಆರ್ಥಿಕ ಸಂಕಷ್ಟದಲ್ಲಿದ್ದು ಮತ್ತು ಇವರ ಮಗಳು ಸ್ಪಂದನಾಳ ವಿಧ್ಯಾಭ್ಯಾಸಕ್ಕಾಗಿ 15,000 ರೂ.ಗಳನ್ನು ಇವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
- 141ನೇ ಸೇವಾಯೋಜನೆ*ಯಾಗಿ ಉಡುಪಿ ಜಿಲ್ಲೆಯ ಪಕ೯ಳ ಭೂಮಿಕ ಇವರ ತಂದೆ ತೀರಿಕೊಂಡಿದ್ದು ಹಾಗೂ ಇವರ ಅಜ್ಜ ಅನಾರೋಗ್ಯದಿಂದ ಇದ್ದು .ಮನೆಯಲ್ಲಿ ತೀರಾ ಕಷ್ಟದ ಪರಿಸ್ಥಿತಿಯಲ್ಲಿದ್ದು.ಇವರ ಸಹೋದರಿಯ ವಿಧ್ಯಾಭ್ಯಾಸಕಾಗಿ 15,000 ರೂ.ಗಳನ್ನು ಇವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಈ ನಾಲ್ಕು ಸೇವಾ ಯೋಜನೆಗಳಿಗೆ ಮತ್ತು ತುರ್ತು ಸೇವೆಗಾಗಿ 60,000ರೂ ಗಳನ್ನು ವೀರಕೇಸರಿ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು. ಈ ಯೋಜನೆಯ ಯಶಸ್ಸಿನೊಂದಿಗೆ ಸಂಘಟನೆಯು 141 ಸೇವಾಯೋಜನೆಗಳನ್ನು ಕ್ರಮಿಸಿದ್ದು, ತಂಡದ ಸದಸ್ಯರ ಸಮ್ಮುಖದಲ್ಲಿ ಚೆಕ್ ಹಸ್ತಾಂತರಿಸಿದ ಸನ್ನಿವೇಶವೂ ಗಮನಸೆಳೆಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಬೆಳ್ಳೆ ದೊಡ್ಡ ಮನೆ ಅಜಿತ್ ಪಿ ಶೆಟ್ಟಿ ಪಡುಬೆಳ್ಳೆ, ವಿಶ್ವನಾಥ ಶೆಟ್ಟಿ ಪಡುಬೆಳ್ಳೆ, ಭಜರಂಗದಳದ ಪ್ರಮುಖ್ ಸುಧೀರ್ ಸೋನು, ಲೆಕ್ಕಪರಿಶೋಧಕರಾದ ಕೃಷ್ಣ ಮೂತಿ೯, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಪರಶುರಾಮ ಭಟ್, ಹರೀಶ್ ಶೆಟ್ಟಿ, ಶಶಿಧರ್ ವಾಗ್ಲೆ, ವೀರ ಕೇಸರಿ ಬೆಳ್ತಂಗಡಿ ಸಂಚಾಲಕ ಸತೀಶ್ ಶೆಟ್ಟಿ ಹಾಗೂ ತಂಡದ ತರುಣರು ಉಪಸ್ಥಿತರಿದ್ದರು.