ಲಕ್ನೋ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಗರಿಗೆದರಿದೆ. ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಬಿರುಸುಗೊಂಡಿದ್ದು, ಯೋಗಿಯ ಮಾಡಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಮಾಲ್ ಪ್ರದರ್ಶಿಸುತ್ತಿದ್ದಾರೆ. ಬಿಜೆಪಿ ಹುರಿಯಾಳುಗಳ ಪರವಾಗಿ ಭರ್ಜರಿ ಮತಬೇಟೆಯಲ್ಲಿ ತೊಡಗಿರುವ ಅವರು ಮನೆ ಮನೆ ಪ್ರಚಾರ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ.
ಲಕ್ನೋ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗು ಉತ್ತರ ಪ್ರದೇಶ ಚುನಾವಣಾ ಸಹ-ಪ್ರಭಾರಿಯಾಗಿರುವ ಶೋಭಾ ಕರಂದ್ಲಾಜೆಯವರು ಮನೆ-ಮನೆಗೆ ತೆರಳಿ ಚುನಾವಣ ಪ್ರಚಾರದಲ್ಲಿ ಭಾಗವಹಿಸಿದರು.
ಉತ್ತರ ಪ್ರದೇಶದಲ್ಲಿ ಮೋದಿ ಜಿ ಮತ್ತು ಯೋಗಿ ಜಿ ನೇತೃತ್ವದ ಡಬಲ್ ಎಂಜಿನ್ ಸರಕಾರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳಿಗೆ ವೇಗ ತುಂಬಲು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಮತ್ತೊಮ್ಮೆ ಹೆಚ್ಚಿನ ಬಹುಮತಗಳೊಂದಿಗೆ ಗೆಲ್ಲಿಸಬೇಕು ಎಂದು ಶೋಭಾ ಕರಂದ್ಲಾಜೆ ಮನವಿ ಮಾಡಿದರು.
ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯತೆಯ ಪ್ರಬಲ ಅಲೆಯು ಬೀಸುತ್ತಿದೆ, ಇದು ಬಿಜೆಪಿಯ ಗೆಲುವಿಗೆ ಸಹಾಯವಾಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.