ಬೆಂಗಳೂರು: ಕಬ್ಬಿಗೆ ಸೂಕ್ತ ದರ ನಿಗದಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟವು ಸರ್ಕಾರಕ್ಕೆ ಸವಾಲು ಎಂಬಂತಾಗಿದೆ. ಅಹೋ ರಾತ್ರಿ ಧರಣಿಯ 21ನೇ ದಿನವಾದ ಇಂದು ಕಬ್ಬು ಬೆಳೆಗಾರರು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ರಾಜ್ಯದ 50ರಷ್ಟು ಕಬ್ಬು ಬೆಳೆಯುವ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳ ಕಬ್ಬು ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲದ ಸರ್ಕಾರಕ್ಕೆ ಬೆಳಗಾವಿ ಅಧಿವೇಶನ ನಡೆಸುವ ನೈತಿಕತೆ ಇಲ್ಲ ಎಂದು ರೈತರು ಆಕ್ರೋಶ ಹೊರಹಾಕಿದರು.
ಕಬ್ಬು ಬೆಳೆಗಾರರ ನಿರಂತರ ಧರಣಿಯ 21ನೇ ದಿನದ ಪ್ರತಿಭಟನೆಯಲ್ಲಿ ಮಾತನಾಡಿದ ರೈತ ನಾಯಕ ಕುರುಬೂರ್ ಶಾಂತಕುಮಾರ್, ರಾಜ್ಯದ 50ರಷ್ಟು ಕಬ್ಬು ಬೆಳೆಯುವ ಜಿಲ್ಲೆಗಳಾದ ಬೆಳಗಾವಿ ಬಾಗಲಕೋಟೆ ರೈತರ ಕಬ್ಬುದರ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲದ ರಾಜ್ಯ ಸರ್ಕಾರಕ್ಕೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ನಾಟಕ ಏಕೆ ಎಂದರು.
ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚ ಲಗಾಣಿ, ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿವೆ. ಇದನ್ನು ಪ್ರಶ್ನಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲವೇ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಸರ್ಕಾರದ ತೆರಿಗೆ ಹಣದಿಂದ ಹೆಚ್ಚುವರಿ ಮಾಡಲಿ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರೂ ಆದ ಕುರುಬರು ಶಾಂತಕುಮಾರ್ ಹೇಳಿದರು.
ಸಣ್ಣಪುಟ್ಟ ತಪ್ಪುಗಳಿಗೆ ಜನರನ್ನ ಜೈಲಿಗೆ ಕಳಿಸುವ ಸರ್ಕಾರಕ್ಕೆ ರೈತರಿಗೆ ಹಣ ಪಾವತಿ ಮೋಸ, ತೂಕದಲ್ಲಿ ಮೋಸ, ಇಳುವರಿಯಲ್ಲಿ ಮೋಸ ಮಾಡುವ ಸಕ್ಕರೆ ಕಾರ್ಖಾನೆಗಳ ಮಾಲಿಕರ ವಿರುದ್ಧ ಯಾಕೆ ಮೂಕದಮ್ಮೆ ದಾಖಲಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ದಾವಣಗೆರೆ ಜಿಲ್ಲೆಯ ರೈತ ಮುಖಂಡ ಅಂಜನಪ್ಪ ಪೂಜಾರ, ಮುರುಗೇಂದ್ರಯ್ಯ, ಹಳಿಯಾಳದ ಕುಮಾರ್ ಬುಬಾಟಿ,ಬರಡನಪುರ ನಾಗರಾಜ್, ಬೆಳಗಾವಿ ಗುರುಸಿದ್ದಪ್ಪ ಕೋಟಗಿ, ಲಕ್ಷ್ಮಿ, ಮಹಾಂತೇಶ್ ಜಮಖಂಡಿ ಸಹಿತ ರೈತ ನಾಯಕರನೇಕರು ಹೋರಾಟದಲ್ಲಿ ಭಾಗಿಯಾದರು.






















































