ಬೆಂಗಳೂರು: ಒಂದೆಡೆ ಬಿಜೆಪಿ ನಾಯಕರು ಹಿಂದೂತ್ವ ಬಗ್ಗೆ ಪ್ರತಿಪಾದಿಸುತ್ತಾ ಬಂದಿದ್ದರೂ, ಮತ್ತೊಂದೆಡೆ ರಾಜ್ಯ ಸರ್ಕಾರ ಹಿಂದೂಗಳ ದೇವಾಲಯ ಸೊತ್ತುಗಳ ರಕ್ಷಣೆಗೆ ಸದ್ದಿಲ್ಲದೇ ಕೆಲಸ ಮಾಡುತ್ತಿದೆ. ಯಾವುದೇ ಸದ್ದುಗದ್ದಲವಿಲ್ಲದೆ ಹಲವಾರು ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೂಲಕ ಸಚಿವ ರಾಮಲಿಂಗಾ ರೆಡ್ಡಿ ಮಾರ್ಗದರ್ಶನದಲ್ಲಿ ಮುಜರಾಯಿ ಇಲಾಖೆಯು ಆಸ್ತಿಕ ಸಮೂಹದ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನದಲ್ಲಿದೆ.
ಹಿಂದೂ ಧರ್ಮ ಮತ್ತು ದೇವಾಲಯಗಳ ರಕ್ಷಣೆಗೆ ಪಣ ತೊಟ್ಟಿರುವ ರಾಮಲಿಂಗಾರೆಡ್ಡಿಯವರ ಕಾರ್ಯ ಆಸ್ತಿಕ ಸಮುದಾಯದಲ್ಲಿ ಸಂತೋಷದ ಹೊನಲನ್ನು ಹರಿಸಿದೆ ಎಂದು ಅರ್ಚಕ ಸಮುದಾಯ ಹೇಳಿಕೊಳ್ಳುತ್ತಿದೆ.
ರಾಜ್ಯದ ಮುಜರಾಯಿ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಎಕರೆ ಜಮೀನು ಅನ್ಯರ ಪಾಲಾಗಿತ್ತು. ಕೆಲ ಸಂಸ್ಥೆಗಳು, ಟ್ರಸ್ಟ್ ಗಳು ಹಾಗೂ ಖಾಸಗಿ ವ್ಯಕ್ತಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ಹಿಂದಿನ ಬಿಜೆಪಿ ಸರಕಾರ ತೆರವು ಮಾಡುವ ಕಡೆ ಯಾವುದೇ ಒಲವು ತೋರಲಿಲ್ಲ ಎಂಬ ಅಸಮಾಧಾನ ಅರ್ಚಕರದ್ದಾಗಿತ್ತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಜರಾಯಿ ಇಲಾಖೆ ಖಾತೆಯನ್ನು ವಹಿಸಿಕೊಂಡ ರಾಮಲಿಂಗಾ ರೆಡ್ಡಿ, ಈವರೆಗೆ ರಾಜ್ಯದ ವಿವಿಧ ದೇವಸ್ಥಾನಗಳ 10,700 ಎಕರೆ ಜಮೀನನ್ನು ರಕ್ಷಣೆ ಮಾಡಲು ಕ್ರಮ ಕಿಗೊಂಡಿದ್ದಾರೆ. ಸುಮಾರು 5022 ಆಸ್ತಿಗಳಿಗೆ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಸೃಷ್ಟಿಸಿ, ಅವುಗಳನ್ನು ದೇವಸ್ಥಾನಗಳ ಅಧೀನಕ್ಕೆ ನೀಡಲಾಗಿದೆ.
ಒತ್ತುವರಿ ತೆರವು:
ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ 34,564 ದೇವಸ್ಥಾನಗಳ ಪೈಕಿ ಬಹುತೇಕ ದೇವಸ್ಥಾನಗಳಿಗೆ ಸರಕಾರ ಮತ್ತು ದಾನಿಗಳು ನೀಡಿದ ಆಸ್ತಿಯಿದೆ. ಆದರೆ, ಬಹುತೇಕ ದೇವಸ್ಥಾನಗಳ ಆಸ್ತಿ ಖಾಸಗಿ ಪಾಲಾಗಿತ್ತು. ಇದೀಗ ಸರ್ವೆ ನಡೆಸಿ, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಆಸ್ತಿಗಳನ್ನು ಮರು ವಶಪಡಿಸಿಕೊಳ್ಳಲಾಗಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ.
ರಾಜ್ಯದಲ್ಲಿ 34,166 ಸಿ ದರ್ಜೆಯ ದೇವಸ್ಥಾನಗಳು, 193 ಬಿ ದರ್ಜೆಯ ದೇವಸ್ಥಾನ ಹಾಗೂ 205 ‘ಎ’ ದರ್ಜೆಯ ದೇವಸ್ಥಾನಗಳಿವೆ. ಈ ದೇವಸ್ಥಾನಗಳಿಗೆ ಸರ್ಕಾರದಿಂದ ಹಾಗೂ ದಾನಿಗಳಿಂದ ದಾನದ ರೂಪದಲ್ಲಿ ಬಂದ ಸಾವಿರಾರು ಎಕರೆ ಆಸ್ತಿಯಿದೆ. ಆದರೆ, ಈವರೆಗೆ ಆ ಆಸ್ತಿಗಳಿಗೆ ಸೂಕ್ತ ದಾಖಲೆಗಳಿರಲಿಲ್ಲ. ಇದೀಗ ಕಂದಾಯ ಇಲಾಖೆ ಎಲ್ಲ ಆಸ್ತಿಗಳಿಗೆ ದಾಖಲೆ ಒದಗಿಸುವ ಕೆಲಸ ಮಾಡಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ನಮ್ಮ ಸರ್ಕಾರವು ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ದೇವಸ್ಥಾನಗಳಿಗೆ ಮರಳಿ ಕೊಡಿಸಲಾಗಿದೆ. ದಾಖಲೆಗಳು ಇಲ್ಲದೇ ಇದ್ದ ಜಮೀನುಗಳಿಗೆ ಸೂಕ್ತ ದಾಖಲೆ ಸೃಷ್ಟಿಸಿಕೊಡುವಲ್ಲಿ ಕಂದಾಯ ಇಲಾಖೆ ಯಶಸ್ವಿಯಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಂಡ ಪರಿಣಾಮ ವರ್ಷದಲ್ಲಿ 5022 ಆಸ್ತಿಗಳನ್ನು ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಸೂಕ್ತ ದಾಖಲೆ ಒದಗಿಸಿದ ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಇಲಾಖೆ ಅಧಿಕಾರಿಗಳಿಗೆ ಮುಜರಾಯಿ ಇಲಾಖೆ ವತಿಯಿಂದ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಆ ಪಕ್ಷದಿಂದ ಮಾಡಲು ಆಗದ ಕೆಲಸವನ್ನು ನಾವು ಮಾಡಿದ್ದೇವೆ. ಧರ್ಮ ಬೇರೆ ರಾಜಕೀಯ ಬೇರೆ, ಧರ್ಮ ಭಾವನೆಗೆ ಸಂಬಂಧಿಸಿದ್ದು ಅದರೊಡನೆ ರಾಜಕೀಯ ಬೆರೆಸಿ, ಕಿಚ್ಚು ಹಚ್ಚಿಸುವ ಕೆಲಸವನ್ನು ಇನ್ನಾದರೂ ಬಿ.ಜೆ.ಪಿ ಅವರು ಬಿಡಬೇಕು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಹಿಂದೂ ದೇವಾಲಯಗಳನ್ನು ರಕ್ಷಿಸಲು ಇವರ ಅಧಿಕಾರವಧಿಯಲ್ಲಿ ಸಾಧ್ಯವಾಗಲಿಲ್ಲವೇಕೆ? ಕಾಂಗ್ರೆಸ್ ಸರ್ಕಾರವೇ ಬಂದು ಈ ಕ್ರಾಂತಿಕಾರಿ ಬದಲಾವಣೆ ಮಾಡಲೆಂದು ಕಾಯುತ್ತಿದ್ದರೇ ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.