ವರದಿ: ಮಹಮದ್ ರಫೀಕ್
ಬೆಂಗಳೂರು: ಕೋವಿಡ್ ಸೋಂಕಿನಿಂದ ರಾಜ್ಯದ ಜನ ಕಂಗಾಲಾಗಿದ್ದಾರೆ. ಈ ಸೋಂಕು ಶರವೇಗದಲ್ಲಿ ಹರಡುತ್ತಿದ್ದು ಸೋಂಕಿನ ಸರಪಳಿಯನ್ನು ತುಂಡರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಲಾಕ್ಡೌನ್ ರೀತಿಯ ಕಠಿಣ ನಿಯಮವನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ವಾಹನಗಳ ಅನಗತ್ಯ ಸಂಚಾರಕ್ಕೆ ಈಗಲೇ ಬ್ರೇಕ್ ಹಾಕುವ ಸನ್ನಿವೇಶ ಕಂಡುಬರುತ್ತಿದೆ.
ಬೆಂಗಳೂರಿನ ಕೆ.ಆರ್.ಸರ್ಕಲ್, ಕಾರ್ಪೋರೇಷನ್ ವೃತ್ತ ಸಹಿತ ಪ್ರಮುಖ ಪ್ರದೇಶಗಳಲ್ಲಿ ಇಂದು ಕೂಡಾ ವಾಹನಗಳ ಓಡಾಟ ಹೆಚ್ಚಿತ್ತು. ಮಾರ್ಗಸೂಚಿ ಜಾರಿಯಲ್ಲಿದ್ದರೂ ಜನರ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು.
ಈ ಬಗ್ಗೆ ಮಾಹಿತಿ ಹಿನ್ನಲೆಯಲ್ಲಿ ಅಖಾಡಕ್ಕೆ ಧುಮುಕಿದ ಹಲಸೂರುಗೇಟ್ ಉಪವಿಭಾಗದ ಎಸಿಪಿ ನಜ್ಮಾ ಅವರು ವಾಹನಗಳ ತಪಾಸಣೆ ಆರಂಭಿಸಿದರು. ಅನಗತ್ಯವಾಗಿ ಓಡಾಡುತ್ತಿರುವವರನ್ನು ಪತ್ತೆಹಚ್ಚಿ ಸಂಚಲನ ಉಂಟುಮಾಡಿದರು.
ಪ್ರಸ್ತುತ ಮೇ 12ರವರೆಗೆ ಟಫ್ ರೂಲ್ಸ್ ಜಾರಿಯಲ್ಲಿದೆ. ಆದರೂ ರಾಜ್ಯ ಸರ್ಕಾರ ಶುಕ್ರವಾರ ತುರ್ತು ತೀರ್ಮಾನವನ್ನು ಕೈಗೊಂಡು ಮೇ 10ರಿಂದಲೇ ಇನ್ನಷ್ಟು ಕಠಿಣ ನಿಯಮ ಜಾರಿಗೆ ತರುವ ಸಂಬಂಧ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ನಡುವೆ ಇಂದು ಬೆಳಿಗ್ಗೆಯಿಂದಲೇ ವೆಂಗಳೂರಿನ ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಸಂಖ್ಯೆಯಲ್ಲಿ ವಾಹನಗಳ ಓಡಾಟ ಕಂಡುಬರುತ್ತಿತ್ತು. ಈ ವಾಹನಗಳನ್ನು ತಡೆಹಿಡಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಅನಗತ್ಯ ಸಂಚಾರ ಕೈಗೊಂಡವರನ್ನು ಪತ್ತೆಹಚ್ಚಿದ ಎಸಿಪಿ ನಜ್ಮಾ ನೇತೃತ್ವದ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಸುಳ್ಳು ನೆಪಗಳನ್ನು ಹೇಳುತ್ತಾ ಕಾನೂನು ಉಲ್ಲಂಘಿಸುವವರ ವಿರುದ್ದಾ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಅವರು ಸಾರ್ವಜನಿಕರಿಗೆ ರವಾನಿಸುತ್ತಿದ್ದರು.