ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬಸವರಾಜ್ ಬೊಮ್ಮಾಯಿ ಮಂಡಿಸಿರುವ ಆಯವ್ಯಯವು ಚುನಾವಣಾ ಆಕರ್ಷಣೆಯ ಬಜೆಟ್ ಆಗಿದೆ ಎಂದು ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರೂ ಆಗಿರುವ ಕುರುಬೂರು ಶಾಂತಕುಮಾರ್ ಅವರು ರಾಜ್ಯ ಬಜೆಟ್ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಗೃಹಿಣಿಯರಿಗೆ ಮಾಸಿಕ ರೂ 500/- ಸಹಾಯಧನ ನೀಡುತ್ತಿರುವುದು ಒಳ್ಳೆಯ ಯೋಜನೆ. 50 ಲಕ್ಷ ರೈತ ಕುಟುಂಬಗಳಿಗೆ ಜೀವ ಜ್ಯೋತಿ ವಿಮಾ ಯೋಜನೆ ಜಾರಿ ,ತೆಲಂಗಾಣ ಮಾದರಿಯಲ್ಲಿ ಜಾರಿಗೆ ತರುವುದು ಒಳ್ಳೆಯ ಬೆಳವಣಿಗೆ. ಕೃಷ್ಣ ಮೇಲ್ದಂಡೆ ಅಭಿವೃದ್ಧಿ ಯೋಜನೆಗೆ 5000 ಕೋಟಿ ಅನುದಾನ, 2000 ಕೆರೆಗಳ ಅಭಿವೃದ್ಧಿ ಯೋಜನೆ ಅನುಷ್ಠಾನ ಕಾರ್ಯಗತವಾದರೆ ಒಳ್ಳೆಯ ನಿರ್ಧಾರ. ಕೊರೋನಾ ಸಂಕಷ್ಟದಿಂದ ಸಮಸ್ಯೆ ಎದುರಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳಿಗೆ ಆರ್ಥಿಕ ನೆರವು 10 ಲಕ್ಷ ಸಹಾಯಧನ ಘೋಷಣೆ ಮಾಡಿರುವುದು ಸ್ವಾಗತ ಎಂದಿದ್ದಾರೆ.
ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಉನ್ನತೀಕರಣಗೊಳಿಸಿ ಯಥನಾಲ್ ಉತ್ಪಾದನಾ ಘಟಕವನ್ನು ಆರಂಭಿಸಲು ಬಜೆಟ್ ನಲ್ಲಿ ತೀರ್ಮಾನ ಕೈಗೊಂಡಿರುವುದು, ಕಬ್ಬು ಬೆಳೆಗಾರರಿಗೆ ಸ್ವಲ್ಪ ಮಟ್ಟಿಗೆ ಸಹಕಾರಿ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಸಹಕಾರ ಸಂಘಗಳಲ್ಲಿ ನೀಡುತ್ತಿರುವ ಬಡ್ಡಿ ರಹಿತ ಕೃಷಿ ಸಾಲ 5 ಲಕ್ಷಕ್ಕೆ ಏರಿಕೆ ಮಾಡಿರುವುದು ಸ್ವಾಗತಾರ್ಹ ಎಂದಿರುವ ಕುರುಬೂರು ಶಾಂತಕುಮಾರ್, ಈ ಯೋಜನೆಯನ್ನು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಿಗೂ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಕಳಸಾ ಬಂಡೂರಿ ಯೋಜನೆ ಆರಂಭಕ್ಕೆ 80 ಕೋಟಿ ನೀಡುವುದನ್ನು ಕನಿಷ್ಠ 300 ಕೋಟಿಗೆ ಏರಿಕೆ ಮಾಡಬೇಕು. 50 ಲಕ್ಷ ರೈತರಿಗೆ ಬಿತ್ತನೆ ಬೀಜ,ರಸ ಗೊಬ್ಬರ ಖರೀದಿಸಲು ಸಹಾಯಧನ ನೆರವು ನೀಡುವ ಯೋಜನೆ, ತೆಲಂಗಾಣ ರಾಜ್ಯ ಮಾದರಿಯಲ್ಲಿ ಜಾರಿ ಮಾಡಬೇಕು. ಪ್ರತಿ ವರ್ಷ ಪ್ರತಿ ತಿಂಗಳು ಎಕರೆಗೆ ರೂ- 10,000 ನೀಡುತ್ತಿರುವ ರೀತಿ ನಮ್ಮ ರಾಜ್ಯದಲ್ಲೂ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಡುಪ್ರಾಣಿಗಳ ದಾಳಿಯಿಂದ ಜೀವ ಹಾನಿ ಆದವರಿಗೆ ಪರಿಹಾರ 15 ಲಕ್ಷಕೆ ಏರಿಕೆ ಮಾಡಿರುವುದು ಸಾಲದು ಎಂದಿರುವ ಕುರುಬೂರು ಶಾಂತಕುಮಾರ್, ರಾಜ್ಯದ ಕಬ್ಬು ಬೆಳೆಗಾರಿಗೆ ಸಕ್ಕರೆ ಕಾರ್ಖಾನೆಗಳಿಂದ ತೂಕದಲ್ಲಿ ಮೋಸ, ಸಕ್ಕರೆ ಇಳುವರಿಯಲ್ಲಿ ಮೋಸ ತಪ್ಪಿಸಲು, ಯಾವುದೇ ಕಾರ್ಯಯೋಜನೆ ಪ್ರಕಟಿಸಿಲ್ಲ ಇದು ನಮಗೆ ಬೇಸರ ತಂದ್ದಿದೆ ಎಂದಿದ್ದಾರೆ.
ಎಲ್ಲ ಯೋಜನೆಗಳು ಚುನಾವಣೆ ದೃಷ್ಟಿಯಲ್ಲಿ ಬಜೆಟ್ ನಲ್ಲಿ ಮಾತ್ರ ಘೋಷಣೆ ಆಗಬಾರದು, ಕಾರ್ಯರೂಪಕ್ಕೆ ಬರಬೇಕು ಈ ದಿಕ್ಕಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುವುದು ಸೂಕ್ತ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯಾಧ್ಯಕ್ಷರೂ ಆದ ಕುರುಬೂರು ಶಾಂತಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ