ಬೆಂಗಳೂರು: ಅರ್ಚಕರ ಕಲ್ಯಾಣಕ್ಕೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಅರ್ಚಕರ ಸಮೂಹ, ಧಾರ್ಮಿಕ ‘ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ’ಕ್ಕೆ ಅಂಕಿತ ಹಾಕದ ರಾಜ್ಯಪಾಲರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದೆ. ಈ ಸಂಬಂಧ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ರಾಜಭವನ ಚಲೋಗೆ ನಿರ್ಧರಿಸಿದೆ.
ಧರ್ಮದ ವಿಷಯದಲ್ಲಿ ರಾಜಕೀಯ ಮಾಡಬಾರದು. ಆದರೆ ಬಿ.ಜೆ.ಪಿ ನಾಯಕರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಬಂದಿದ್ದರೂ ಸಹ, ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನಗಳ ಹಾಗೂ ಅರ್ಚಕರ ಕಲ್ಯಾಣ ಅಭಿವೃದ್ಧಿ ಮಾಡದೇ, ಕಾಂಗ್ರೆಸ್ ಸರ್ಕಾರ ಮಾಡಲು ಯೋಜಿಸಿರುವ ಕಾಯಿದೆಯನ್ನು ಸಹಿಸದೆ ರಾಜ್ಯಪಾಲರಿಗೆ ಒತ್ತಡ ಹೇರಿ ಸಹಿ ಹಾಕಿಸದೆ ಬಿಜೆಪಿಯು ಅರ್ಚಕ ಸಮೂಹಕ್ಕೆ ದ್ರೋಹ ಬಗೆಯುತ್ತಿದೆ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಮುಖರು ಆರೋಪಿಸಿದ್ದಾರೆ.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅರ್ಚಕರ ಸಮೂಹ, ಕಾಂಗ್ರೆಸ್ ಸರ್ಕಾರವು ಅರ್ಚಕರ ಕಲ್ಯಾಣಕ್ಕೆ ಯೋಜನೆ ರೂಪಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ವರ್ಷವಾದರೂ ಮಾನ್ಯ ರಾಜ್ಯಪಾಲರು ಸಹಿ ಹಾಕಿಲ್ಲ. ಅರ್ಚಕರ ಕಲ್ಯಾಣ ಯೋಜನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ವಿಳಂಬಕ್ಕೆ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅರ್ಚಕರಿಗೆ ಮನೆ ನಿರ್ಮಾಣ, ರೂ.10 ಲಕ್ಷ ಜೀವ ವಿಮೆ, ಅರ್ಚಕರ ಮಕ್ಕಳಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನ, ಪ್ರತಿ ವರ್ಷ ‘ಸಿ’ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ಇತ್ಯಾದಿ ಸೌಲಭ್ಯ ನೀಡಬೇಕೆಂಬ ಉದ್ದೇಶದಿಂದ ರೂಪಿಸಿರುವ ಕಾನೂನು ಇದಾಗಿದೆ ಎಂದು ಅರ್ಚಕರು ಗಮನಸೆಳೆದಿದಗದಾರೆ.
ಸರ್ಕಾರದ ಬಜೆಟ್ ನಲ್ಲಿ ತಸ್ತೀಕ್ ಮೊತ್ತವನ್ನು ರೂ.60,000 ದಿಂದ ರೂ.72,000 ಹೆಚ್ಚಳ ಮಾಡಿದೆ. ಈ ಮೊದಲು ಕೂಡ ಅಂದರೆ 2013, 2015 ಮತ್ತು 2017 ಹಾಗೂ ಪ್ರಸ್ತುತ 2025 ರಲ್ಲಿ ಒಟ್ಟು 4 ಬಾರಿ ರೂ.48,000 ತಸ್ತೀಕ್ ಮೊತ್ತವನ್ನು ಹೆಚ್ಚಿಸಿರುವುದು ಕಾಂಗ್ರೆಸ್ ಸರ್ಕಾರ. ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರುಗಳ ಕಷ್ಟ ಕಾರ್ಪಣ್ಯಗಳಿಗಾಗಿ ಅವರ ದುಃಖ, ದುಮ್ಮಾನಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಮುಜರಾಯಿ ಇಲಾಖೆಯಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿದೆ ಎಂದು ಅರ್ಚಕರ ಸಮೂಹ ಹೇಳಿದೆ.
ಅರ್ಚಕರ ಅನುಕೂಲಕ್ಕಾಗಿ ಕಾನೂನು ತಿದ್ದುಪಡಿ ಮಾಡಿರುವ ಕಡತ ಸಂಬಂಧ ಅರ್ಚಕರ ನಿಯೋಗದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಲಾಗುವುದು. ಯಾವ ಉದ್ದೇಶದಿಂದ ಕಡತಕ್ಕೆ ಸಹಿಹಾಕದೆ ವಿಳಂಬ ಮಾಡುತ್ತಿದ್ದೀರಿ ಎಂದು ಕೇಳಿ, ಅನುಮೋದನೆಗೆ ಮನವಿ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಗೌರವ ಪ್ರಧಾನ ಸಲಹೆಗಾರರಾದ ಪ್ರೊ. ರಾಧಾಕೃಷ್ಣ ಕೆ.ಇ., ಗೌರವ ಉಪಾಧ್ಯಕ್ಷ ಡಾ। ಎಸ್.ಆರ್. ಶೇಷಾದ್ರಿ, ಭಟ್ಟರ್, ಮುಖ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್.ಎನ್.ದೀಕ್ಷಿತ್ ತಿಳಿಸಿದ್ದಾರೆ.