ನವದೆಹಲಿ: ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಭಾಗವಾಗಿರುವುದು ತಮ್ಮ ವೃತ್ತಿಜೀವನದ ವಿಶೇಷ ಅನುಭವವಾಗಿದ್ದು, ಈ ಚಿತ್ರದಿಂದ ಹಿಂದಿ ಭಾಷೆ ಕಲಿಯುವ ಅವಕಾಶವೂ ದೊರೆಯಿತು ಎಂದು ನಟ ಯಶ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಚಿತ್ರದ ಭವ್ಯ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಕೃತಜ್ಞತೆ ಸಲ್ಲಿಸಿ, ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದರು. ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ ಮಾತನಾಡಲು ಪ್ರಯತ್ನಿಸಿದ ಯಶ್, “ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ. ನಾನು ಕೂಡ ಪ್ರಯತ್ನಿಸುತ್ತೇನೆ. ಈ ಪಾತ್ರದ ಮೂಲಕ ನನಗೆ ಹಿಂದಿ ಕಲಿಯುವ ಅವಕಾಶವೂ ಸಿಕ್ಕಿತು” ಎಂದು ಹೇಳಿದರು.

‘ರಾಮಾಯಣ’ ಕೇವಲ ಒಂದು ಸಿನಿಮಾ ಅಲ್ಲ, ಇದು ಭಾರತದ ಕನಸಿನ ಯೋಜನೆ ಎಂದು ಬಣ್ಣಿಸಿದ ಯಶ್, “ಪ್ರಭು ಶ್ರೀರಾಮನ ಕಥೆಯನ್ನು ಜಾಗತಿಕ ಮಟ್ಟದಲ್ಲಿ ತಲುಪಿಸುವ ಒಂದೇ ಉದ್ದೇಶದಿಂದ ನಾವೆಲ್ಲರೂ ಒಂದಾಗಿದ್ದೇವೆ. ಈ ಕನಸಿಗೆ ರೂಪ ನೀಡಿದ ನಮಿತ್ ಮಲ್ಹೋತ್ರಾ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಅವರಿಗೆ ಧನ್ಯವಾದಗಳು” ಎಂದರು.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ನಿತೇಶ್ ತಿವಾರಿ, ನಮಿತ್ ಮಲ್ಹೋತ್ರಾ, ವಿವೇಕ್ ಒಬೆರಾಯ್, ಕರಣ್ ಜೋಹರ್, ಶೋಭನಾ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕವಿ ಕುಮಾರ್ ವಿಶ್ವಾಸ್ ಆಯೋಜಿಸಿದ್ದರು.







































































