ಬೆಂಗಳೂರು: ಮಾರಣಾಂತಿಕ ಕೊರೋನಾ ವೈರಾಣು ಸೋಂಕು ನಿಯಂತ್ರಿಸುವ ಸಂಬಂಧ ಕಠಿಣ ಲಾಕ್ಡೌನ್ ನಿಯಮ ಜಾರಿಯಲ್ಲಿದ್ದರೂ ಕ್ಯಾರೇ ಅನ್ನದ ಜನರೆಷ್ಟೋ.. ಅಂಥವರಿಗೆ ಬೆಂಗಳೂರಿನ ಹೆಬ್ಬಾಳ ಠಾಣೆಯ ಪೊಲೀಸರು ಇಂದು ಬಿಸಿ ಮುಟ್ಟಿಸಿದ್ದಾರೆ.
ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಲಾಕ್ಡೌನ್ ನಿಯಮ ಜಾರಿಯಲ್ಲಿದ್ದರೂ ಅವಧಿ ಮೀರಿ ವರ್ತಕರು ವ್ಯಾಪಾರ ನಡೆಸುತ್ತಿದ್ದರು. ಹಲವಾರು ಮಂದಿ ಮಾಸ್ಕ್ ಧರಿಸದೆ ನಿಯಮಗಳನ್ನು ಗಾಳಿಗೆ ತೂರುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಬೀಟ್ ಪೊಲೀಸರು ಭೇಟಿ ನೀಡಿದಾಗ ನೆಪ ಮಾತ್ರಕ್ಕೆ ನಿಯಮ ಪಾಲಿಸುತ್ತಿದ್ದ ಕೆಲವರು, ನಂತರ ತಮ್ಮ ಚಾಲಿಯನ್ನು ಮುಂದುವರಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಹೆಬ್ಬಾಳ ಇನ್ಸ್ಪೆಕ್ಟರ್ ಚಿದಾನಂದ್ ಎಂ ಗರಗ್ ನೇತೃತ್ವದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗಿಳಿದರು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಿಯಮ ಮೀರಿದವರ ವಿರುದ್ದ ಕಾರ್ಯಾಚರಣೆ ಕೈಗೊಂಡರು. ಅದರಲ್ಲೂ ಸುಲ್ತಾನ್ ಪಾಳ್ಯದಲ್ಲಿ ಮಾಸ್ಕ್ ಧರಿಸದೆ ಜನರ ಸೇನೆಯನ್ನು ಪರೀಕ್ಷಿಸುತ್ತಿದ್ದ ಪ್ರಸಂಗ ನಡೆಯುತ್ತಿತ್ತು. ಈ ಸ್ಥಳಕ್ಕೆ ಪೊಲೀಸರು ದೌಡಾಯಿಸುತ್ತಿದ್ದಂತೆಯೇ ಹಲವರು ಜೇಬಿನಲ್ಲಿದ್ದ ಮಾಸ್ಕನ್ನು ಮುಖಕ್ಕೇರಿಸಿದರು. ಅನಗತ್ಯವಾಗಿ ಗುಂಪುಸೇರಿದ್ದವರು ಚಲ್ಲಾಪಿಲ್ಲಿಯಾಗಿ ದೂರ ಸರಿದರು.
ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ರಸ್ತೆ ಬದಿ ಬಿಡಾರ ಹೂಡಿದಂತಿದ್ದ ಬೀದಿ ವ್ಯಾಪಾರಿಗಳಿಗೂ ಬಿಸಿ ಮುಟ್ಟಿಸಿದ ಪೊಲೀಸರು ಜನರ ಸುರಕ್ಷತೆಗಾಗಿ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸಿದರು.
ಈ ನಡುವೆ, ಸುಲ್ತಾನ್ ಪಾಳ್ಯದ ಮಳಿಗೆಯೊಂದು ನಿತ್ಯವೂ ಅವಧಿ ಮೀರಿ ತೆರೆದಿರುತ್ತೆ ಎಂಬ ಸಾರ್ವಜನಿಕರ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆ ಮಳಿಗೆ ನಿಯಮ ಉಲ್ಲಂಘಿಸಿದ್ದನ್ನು ಖಚಿತಪಡಿಸಿದರು. ಮೇಲ್ವಿಚಾರಕರಿಗೆ ಎಚ್ಚರಿಕೆ ನೀಡಿ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು ಸಾರ್ವಜನಿಕರ ಶಹಬ್ಬಾಸ್ಗಿರಿ ಗಿಟ್ಟಿಸಿಕೊಂಡರು.