ಉಡುಪಿ: ಕೊರೋನಾ ಸಂಕಟ ಕಾಲದಲ್ಲಿ ಬಡವರಿಗೆ ಫುಡ್ ಕಿಟ್ಗಳನ್ನು ನೀಡುವುದು ಸಾಮಾನ್ಯವೆನಿಸಿದೆ ನೂರೋ ಇನ್ನೂರೋ ಮಂದಿಗೆ ಕಿಟ್ ವಿರಿಸಿದರೆ ಅದನ್ನೇ ಭಾರೀ ಸುದ್ದಿಯಾಗಿಸಿ ಹರಿಯಬಿಡುವವರೇ ಹೆಚ್ಚು. ಆದರೆ ಉಡುಪಿ ಜಿಲ್ಲೆ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು 6,200ಕ್ಕೂ ಹೆಚ್ಚು ಕುಟುಂಬಗಳಿಗೆ ವಿವಿಧ ಕಿಟ್ಗಳನ್ನು ವಿತರಿಸಿದ್ದಾರೆ. ಯಾವ ಸದ್ದೂ ಇಲ್ಲದೆ ಮಾನವೀಯ ನೆಲೆಯಲ್ಲಿ ಅವರು ಮಾಡಿದ ಕೆಲಸ ಇದೀಗ ಸುದ್ದಿಯಾಗುತ್ತಿದ್ದು, ಆಪತ್ತಿನ ಕಾಲದಲ್ಲಿ ಆಪತ್ಬಾಂಧನರಂತೆ ಈ ಸಾಮಾಜಿಕ ಹರಿಕಾರ ಕಾರ್ಯೋನ್ಮುಖರಾಗಿದ್ದಾರೆ.
ಇವರು ಗೋವಿಂದ ಬಾಬು ಪೂಜಾರಿ. ಬೆಂಗಳೂರಿನ ಪ್ರತಿಷ್ಠಿತ ಆಹಾರೋದ್ದಿಮೆ ಸಂಸ್ಥೆ ChefTalkನ ಮಾಲೀಕರಾದ ಇವರು, ಬಡತನದ ಬೇಗೆಯಿಂದ ಪರಿಶ್ರಮದ ಮೂಲಕ ಹೊರಬಂದು ಸಿರಿವಂತರಾದ ಮಾದರಿ ವ್ಯಕ್ತಿ. ಬಡವರ ಬಗ್ಗೆ ಇವರಿಗೆ ಕಾಳಜಿ. ನಿರ್ಗತಿಕರ ಬಗ್ಗೆ ಮರುಕ. ನಿರುದ್ಯೋಗಿ ಯುವಜನರ ಬಗ್ಗೆ ಮಮತೆ. ಹಾಗಾಗಿ ಬಡವರಿಗೆ, ಸಂಕಟದಲ್ಲಿರುವವರಿಗೆ ತನ್ನ ಸಂಪಾದನೆಯ ಬಹುಪಾಲು ಹಣವನ್ನು ಸಮರ್ಪಿಸುತ್ತಿದ್ದಾರೆ. ಇದಕ್ಕಾಗಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಸಾಮಾಜಿಕ ಕೈಂಕರ್ಯ ನಡೆಸುತ್ತಿದ್ದಾರೆ.
ಈ ಬಾರಿ ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಾದ ಆರಂಭದ ದಿನದಿಂದಲೇ ಗೋವಿಂದ ಬಾಬು ಪೂಜಾರಿಯವರು ಬೆಂಗಳೂರು, ಉಡುಪಿ ಸಹಿತ ವಿವಿಧ ಜಿಲ್ಲೆಗಳ ಬಡ ಜನರಿಗೆ ಫುಡ್ ಕಿಟ್, ವೈದ್ಯಕೀಯ ಪರಿಕರಗಳನ್ನೂ ಕಿಟ್ ರೂಪದಲ್ಲಿ ನೀಡಿ ಬೆಳಕಾಗಿದ್ದಾರೆ.
ಬೆಂಗಳೂರಿನಲ್ಲಿ ಸಾವಿರಾರು ಮಂದಿ ಪೌರ ಕಾರ್ಮಿಕರು, ಚಿತ್ರೋದ್ಯಮದ ಕಾರ್ಮಿಕರು ಹಾಗೂ ಆಟೋ ಚಾಲಕರಿಗೆ ಈ ವಿವಿಧ ಕಿಟ್ಗಳನ್ನು ವಿತರಿಸಿರುವ ಗೋವಿಂದ ಬಾಬು ಪೂಜಾರಿಯವರು ಉಡುಪಿ, ಕುಂದಾಪುರ, ಬೈಂದೂರು ಸುತ್ತಮುತ್ತಲ ನೂರಾರು ಹಳ್ಳಿಗಳಲ್ಲಿ ಬಡವರಿಗಾಗಿ ಕಿಟ್ ವಿತರಿಸಿದ್ದಾರೆ. ಬೈಂದೂರು ತಾಲೂಕೊಂದರಲ್ಲೇ ಸುಮಾರು 5000 ಫುಡ್ ಕಿಟ್ಗಳನ್ನು ವಿತರಿಸಿದ್ದಾರೆ.
ಜನಪ್ರತಿನಿಧಿಯಲ್ಲ ಜನಸ್ನೇಹಿ..
ಇವರು ಜನಪ್ರತಿನಿಧಿಯಲ್ಲ, ರಾಜಕೀಯ ಪಕ್ಷಗಳ ಬಗ್ಗೆ ಒಲವೂ ಇವರಿಗಿಲ್ಲ. ಚುನಾವಣೆ ವೇಳೆ ಮತದಾನದ ಹಕ್ಕು ಚಲಾಯಿಸುವುದನ್ನು ಬಿಟ್ಟರೆ ತಾವು ಸ್ಪರ್ಧಿಸುವಿರಾ? ಎಂದರೆ ಮಾರು ದೂರ ಸಾಗುವ ರಾಜಕೀಯೇತರ ಸಾಮಾಜ ಸೇವಕ ಇವರು. ಆದರೆ ಎಂಪಿ-ಎಂಎಲ್ಎಗಳನ್ನು ಮೀರಿಸುವ ರೀತಿ ಕೆಲಸ ಮಾಡಿದ್ದಾರೆ. ತಮ್ನದೇ ಆದ ಯುವಕರ ಸೈನ್ಯ ಕಟ್ಟಿ ಊರೂರು ತಿರುಗಿ ಈ ದೀನಸಿ ಪ್ಯಾಕೆಟ್ಗಳನ್ನು ಹಂಚುತ್ತಿದ್ದಾರೆ.
ಪ್ರತೀ ಕುಟುಂಬಕ್ಕೆ ಹಲವಾರು ತಿಂಗಳಿಗೆ ಬೇಕಾದಷ್ಟು ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸಹಿತ ಅಗತ್ಯ ವಸ್ತುಗಳನ್ನು ಪಡೆದ ಫಲಾನುಭವಿಗಳಲ್ಲೂ ನಿರಾಳತೆಯ ಭಾವ ಕಾಣುತ್ತಿದೆ. ಬೈಂದೂರು ತಾಲೂಕಿನಲ್ಲೇ ನೂರಾರು ಹಳ್ಳಿಗಳಲ್ಲಿ 5000ಕ್ಕೂ ಹೆಚ್ಚು ಮನೆ ಮನೆಗಳಿಗೆ ಗೋವಿಂದ ಬಾಬು ಪೂಜಾರಿ ನೇತೃತ್ವದ ಯುವಕರ ತಂಡ ಈ ದೀನಸಿ ಕಿಟ್ ವಿತರಿಸಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶದಲ್ಲೂ ಸವಾರಿ..
ಸಿದ್ದಾಪುರ, ಶಂಕರನಾರಾಯಣ, ಹೊಸಂಗಡಿ, ಅಜ್ರಿ, ಕಮಲಶಿಲೆ, ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊತ್ತಿರುವ ಹಳ್ಳಿಹೊಳೆ, ದೇವರಬಾಳು ಮೊದಲಾದೆಡೆ ಈ ಕಿಟ್ಗಳನ್ನು ನೀಡಲಾಗಿದೆ.
ಕಟ್ಬೇಲ್ತೂರು, ಮುಳುಕುಂಟೆ, ಉಳ್ಳೂರು, ಮಾವಿನ ಕುಡ್ಳು, ಅಜ್ರಿ ಸಹಿತ ಹಲವು ಗ್ರಾಮಗಳಲ್ಲಿ ಇವರ ವಿವಿಧ ಅಭಿಮಾನಿ ಬಳಗಗಳು ಈ ಫುಡ್ ಕಿಟ್ ವಿತರಣೆಯಲ್ಲಿ ಸಕ್ರೀಯವಾಗಿದೆ.