ಬಂದರು ನಗರಿಯ ಕಾರ್ಸ್ಟ್ರೀಟ್ ಇಂದು ಮತ್ತೊಂದು ಐತಿಹಾಸಿಕ ದೃಶ್ಯ ಸೊಬಗಿಗೆ ಸಾಕ್ಷಿಯಾಯಿತು. ಕೆಲವು ದಿನಗಳ ಹಿಂದೆ ನಡೆದ ಮಂಗಳೂರು ದಸರಾ ಹಾಗೂ ಶಾರದೋತ್ಸವ ಸಡಗರ ಮತ್ತೊಮ್ಮೆ ಪ್ರತಿಬಿಂಬಿಸಿದಂತಿತ್ತು.
ಮಂಗಳೂರು: ಕರಾವಳಿಯ ಶ್ರದ್ಧಾ ಕೇಂದ್ರಗಳಲ್ಲೊಂದಾದ ಮಂಗಳೂರಿನ ಕಾರ್ಸ್ಟ್ರೀಟ್ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಚಾತುರ್ಮಾಸ ವೃತದಲ್ಲಿರುವ ಕಾಶೀಮಠ ಸಂಸ್ಥಾನದ ಮಠಾಧೀಶರಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯಿತು.
ಚಿತ್ರಗಳು: ಮಂಜು ನೀರೇಶ್ವಾಲ್ಯ
ಈ ಅಪೂರ್ವ ಕ್ಷಣಕ್ಕೆ ದೇಶದ ನಾನಾ ಕಡೆಯಿಂದ ಆಗಮಿಸಿದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾದಿಗಳು ಸಾಕ್ಷಿಯಾದರು. ರಥಬೀದಿ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಚಾತುರ್ಮಾಸ್ಯ ಮೆರವಣಿಗೆ ಆರಂಭಗೊಂಡು ಮಹಾಮ್ಮಾಯ ದೇವಸ್ಥಾನ ರಸ್ತೆ, ಗದ್ದೆಕೇರಿ, ಮಂಜೇಶ್ವರ ಗೋವಿಂದ ಪೈವೃತ್ತ, ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರ ಜಂಕ್ಷನ್, ಬಸವನಗುಡಿ ರಸ್ತೆ, ಚಮ್ಮಾರಗಲ್ಲಿ, ಕೆಳರಥಬೀದಿ, ರಥಬೀದಿಯಾಗಿ ವೆಂಕಟ್ರಮಣ ದೇವಸ್ಥಾನದ ಬಳಿ ಸಮಾಪನಗೊಂಡಿತು.
ವೈಭವದ ಮೆರವಣಿಗೆಗೆ ಗಜಪಡೆ, ಅಶ್ವಪಡೆ, ಸ್ಯಾಕ್ಸೋಪೋನ್ ತಂಡ, ಪಂಚ ವಾದ್ಯ, ಚೆಂಡೆವಾದನ, ಆಕರ್ಷಕ ನ್ಯಾಸಿಕ್ ಬ್ಯಾಂಡ್ ತಂಡ, ತಾಲೀಮು, ಹುಲಿವೇಷ, ತಂಡಗಳು, ಸ್ತಬ್ಧಚಿತ್ರಗಳು ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ಶೋಭೆ ನೀಡಿದವು.
ದೀಪಾಲಂಕಾರದ ಸೊಬಗು:
ಮೆರವಣಿಗೆ ಸಾಗುವ ಹಾದಿಯಲ್ಲಿ ಅಕ್ಕಪಕ್ಕದ ಮನೆಯವರು ದೀಪ, ತೋರಣಗಳಿಂದ ಬೀದಿಯನ್ನು ಅಲಂಕರಿಸಲಾಗಿತ್ತು. ಮೆರವಣಿಗೆ ಸಾಗುವ ಹಾದಿಯಲ್ಲಿ ಸಮಾಜ ಬಂಧುಗಳು ಗುರುಗಳಿಂದ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್, ಚಾತುರ್ಮಾಸ ಸಮಿತಿಯ ಅಧ್ಯಕ್ಷ ಮುಂಡ್ಕುರ್ ರಾಮದಾಸ್ ಕಾಮತ್, ಪದ್ಮನಾಭ ಪೈ, ಸಿ. ಎಲ್ಜ ಶೆಣೈ, ಜಯರಾಜ್ ಪೈ, ಪ್ರಶಾಂತ್ ರಾವ್, ಡಾ.ಉಮಾನಂದ ಮಲ್ಯ, ನಾ ಮದೇವ್ ಮಲ್ಯ, ಸುರೇಶ್ ವಿ ಕಾಮತ್, ಗಣಪತಿ ಪೈ, ಗುರುದತ್ ಕಾಮತ್, ಬಿ ಆರ್ ಭಟ್, ಮಾರೂರ್ ಶಶಿಧರ್ ಪೈ , ಶಾಸಕ ಡಿ.ವೇದವ್ಯಾಸ್ ಕಾಮತ್, ಕೊಚ್ಚಿನ್ ತಿರುಮಲ ದೇವಳದ ಜಗನ್ನಾಥ್ ಶೆಣೈ, ಜಿ.ಎಸ್.ಬಿ ಸೇವಾಮಂಡಲದ ಆರ್.ಜಿ.ಭಟ್, ರಘುವೀರ್ ಭಂಡಾರ್ಕರ್, ದಿನೇಶ್ ಕಾಮತ್ ಕೋಟೇಶ್ವರ ಹಾಗೂ ಸಹಸ್ರಾರು ಭಜಕರು ಉಪಸ್ಥಿತರಿದ್ದರು .