ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಚುರುಕಾಗಿದೆ. ಬುಧವಾರ ಬೆಂಗಳೂರಿನಲ್ಲಿ ಪಂಚಮಸಾಲಿ ರಾಜ್ಯ ಕಾರ್ಯ ಕಾರಣಿ ಸಭೆಯಲ್ಲಿ ಸಮುದಾಯದ ಶಾಸಕರು ಒಗ್ಗಟ್ಟು ಪ್ರದರ್ಶಿಸಿದರು.
ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಮೀಸಲಾತಿಗಾಗಿ ಹೋರಾಡಬೇಕು, ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತೆ ಸಿಎಂ ಅವರನ್ನು ಒತ್ತಾಯಿಸಬೇಕು ಎಂದು ಕೂಡಲಸಂಗಮ ಕ್ಷೇತ್ರದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾರ್ಗದರ್ಶನ ಮಾಡಿದರು.
ಈ ಅಂಶಗಳನ್ನು ಮುಂದಿಟ್ಟು ಕಾರ್ಯಕಾರಿಣಿಯಲ್ಲಿ ಪ್ರಮುಖ ಹಕ್ಕೊತ್ತಾಯ ಸಹಿತ ಹಲವು ನಿರ್ಣಯಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮೂಲಕ ಪಂಚಮಸಾಲಿ -ಗೌಡ -ಮಲೆಗೌಡ- ದೀಕ್ಷೆ ಲಿಂಗಾಯತರಿಗೆ ರಾಜ್ಯದಲ್ಲಿ 2A ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರದಲ್ಲಿ OBC ಮೀಸಲಾತಿಗೆ ಕೂಡಲೇ, ರಾಜ್ಯ ಸರ್ಕಾರವು ಶಿಫಾರಸ್ಸು ಮಾಡುವಂತೆ ಹಕ್ಕುತ್ತಾಯಿಸಿ ಆರಂಭವಾಗಿರುವ 6ನೇ ಹಂತದ ಚಳುವಳಿ ಹೊಸ ತಿರುವನ್ನು ಪಡೆಯಿತು.
ಪಂಚಮಸಾಲಿ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳು;
-
ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಕೊಟ್ಟ ಮಾತು ತಪ್ಪಿರುವುದರಿಂದ ಪಕ್ಷಾತೀತವಾಗಿ ನಮ್ಮ ಸಮಾಜದ ಶಾಸಕರುಗಳು ನಾಳೆ ಅಧಿವೇಶನದಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕು.
-
ಕಳೆದ ಏಳು ತಿಂಗಳಿಂದ ನಿರಂತರವಾಗಿ ಚಳುವಳಿ ಮಾಡುತ್ತಿದ್ದರು ಇದುವರೆಗೆ ಸರ್ಕಾರದ ಯಾವುದೇ ಸ್ಪಷ್ಟನೆ ಬಾರದಿರುವುದರಿಂದ*, ಶಾಸಕರ ನಿಯೋಗ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಬೇಕು.
-
ಲೋಕಸಭೆ ಚುನಾವಣೆ ಒಳಗಾಗಿ 2A ಹಾಗೂ OBC ಮೀಸಲಾತಿಗಾಗಿ ಅನುಷ್ಠಾನ ಮಾಡುವಂತೆ ಮೂರನೇ ಬಾರಿಗೆ ಮುಖ್ಯಮಂತ್ರಿಯವರಿಗೆ ಒತ್ತಾಯಿಸಲು ಶಾಸಕರುಗಳ ನಿಯೋಗ ಕೊಂಡೊಯ್ಯಬೇಕು.
-
ಮಾರ್ಚ್ 10ರಂದು ಕಲಬುರ್ಗಿಯಲ್ಲಿ ನಡೆಯಲಿರುವ ಪಂಚಮಸಾಲಿ ದೀಕ್ಷ ಲಿಂಗಾಯತ ಸಮಾವೇಶದಲ್ಲಿ ಮುಂದಿನ ಹೋರಾಟದ ನಿರ್ಧಾರಗಳನ್ನು ಕೈಗೊಳ್ಳುದು.