ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ಕಲಬೆರಕೆ ತುಪ್ಪ ಪೂರೈಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕಂಪನಿ ಪ್ರಮೋಟರ್ ಕೈಲಾಶ್ ಚಂದ್ ಮಂಗಲಾ ಅವರನ್ನು ಬಂಧಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಸೆಕ್ಷನ್ 19ರ ಅಡಿಯಲ್ಲಿ ಮಂಗಲಾ ಅವರನ್ನು ಬಂಧಿಸಲಾಗಿದೆ. ಬಳಿಕ ವಿಶಾಖಪಟ್ಟಣದ ಪಿಎಂಎಲ್ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಆಧರಿಸಿ ಇಡಿ ತನಿಖೆ ಕೈಗೊಂಡಿತ್ತು. ಟಿಟಿಡಿಗೆ ಕಲಬೆರಕೆ ತುಪ್ಪ ಪೂರೈಸಲು ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪಗಳು ಎಫ್ಐಆರ್ನಲ್ಲಿ ದಾಖಲಾಗಿದ್ದವು.

₹230 ಕೋಟಿ ಮೌಲ್ಯದ ಕಲಬೆರಕೆ ತುಪ್ಪ ಪೂರೈಕೆ?
ಇಡಿ ತನಿಖೆಯ ಪ್ರಕಾರ, 2019ರಿಂದ 2024ರ ಅವಧಿಯಲ್ಲಿ ಸುಮಾರು ₹230 ಕೋಟಿ ಮೌಲ್ಯದ ಕಲಬೆರಕೆ ತುಪ್ಪವನ್ನು ಟಿಟಿಡಿಗೆ ಪೂರೈಸಲಾಗಿದೆ. ರಿಫೈನ್ಡ್ ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್, ಪಾಮೋಲಿನ್ ಸೇರಿದಂತೆ ವಿವಿಧ ಪದಾರ್ಥಗಳು ಹಾಗೂ ರಾಸಾಯನಿಕಗಳನ್ನು ಬಳಸಿ ಕಲಬೆರಕೆ ತುಪ್ಪ ತಯಾರಿಸಲಾಗುತ್ತಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ.
MG-90, ಮೊನೊಗ್ಲಿಸರೈಡ್ಗಳು, ಮಿವಾಸೆಟ್ 400 ಮತ್ತು ಅಸಿಟಿಕ್ ಆಸಿಡ್ ಎಸ್ಟರ್ ಸೇರಿದಂತೆ ಹಲವು ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂದು ಇಡಿ ಆರೋಪಿಸಿದೆ. ಬಳಿಕ ಈ ಉತ್ಪನ್ನವನ್ನು ‘ಅಗ್ಮಾರ್ಕ್ ಸ್ಪೆಷಲ್ ತುಪ್ಪ’ ಎಂದು ಹೆಸರಿಸಿ ಟಿಟಿಡಿಗೆ ಪೂರೈಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
₹96 ಕೋಟಿ ಮೌಲ್ಯದ ತುಪ್ಪ ತಯಾರಿಕೆ ಆರೋಪ
ಎಂ/ಎಸ್ ಸುಕೃತಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ನ ಪ್ರಮೋಟರ್ ಆಗಿರುವ ಕೈಲಾಶ್ ಚಂದ್ ಮಂಗಲಾ ಪ್ರಕರಣದಲ್ಲಿ ಸಹ ಸಂಚುಕೋರನಾಗಿದ್ದಾನೆ ಎಂದು ಇಡಿ ಆರೋಪಿಸಿದೆ. ಕಲಬೆರಕೆ ಪದಾರ್ಥಗಳ ಖರೀದಿಗೆ ಮಂಗಲಾ ನೆರವು ನೀಡಿದ್ದಲ್ಲದೆ, ತಮ್ಮ ಕಾರ್ಖಾನೆಯಲ್ಲೇ ಕಲಬೆರಕೆ ತುಪ್ಪ ತಯಾರಿಸಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.
ಒಟ್ಟು ಪೂರೈಕೆಯ ಪೈಕಿ ಸುಮಾರು ₹96 ಕೋಟಿ ಮೌಲ್ಯದ ಕಲಬೆರಕೆ ತುಪ್ಪವನ್ನು ಮಂಗಲಾ ಅವರೇ ನೇರವಾಗಿ ಉತ್ಪಾದಿಸಿದ್ದರು ಎಂದು ಇಡಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.







































































