ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ಇದೀಗ ಪರಿಷತ್ ಫೈಟ್ಗೆ ಅಖಾಡ ಸಜ್ಜಾಗಿದೆ. ಈಗಾಗಾಲೇ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆ ನಡೆದಿರುವಾಗಲೇ ವಿಧಾನ ಸಭೆಯಿಂದ ಮೇಲ್ಮನೆಯ 11 ಸ್ಥಾನಗಳಿಗೂ ಆಯ್ಕೆ ಸಂಬಂಧ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.
ಪರಿಷತ್ ಶಾಸಕರಾದ ಅರವಿಂದ್ ಕುಮಾರ್ ಅರಳಿ, ಎನ್.ಎಸ್.ಬೋಸರಾಜು, ಕೆ, ಗೋವಿಂದರಾಜ್, ತೇಜಸ್ವಿನಿ ಗೌಡ, ಮುನಿರಾಜು ಗೌಡ, ಕೆ.ಪಿ.ನಂಜುಂಡಿ, ಬಿ.ಎಂ.ಫಾರುಖ್, ರಘುನಾಥ್ ರಾವ್ ಮಲ್ಕಾಪೂರೆ, ಎನ್.ರವಿ ಕುಮಾರ್, ಎಸ್.ರುದ್ರೇಗೌಡ, ಕೆ.ಹರೀಶ್ ಕುಮಾರ್.
11 ಸದಸ್ಯರ ಅಧಿಕಾರವಾಧಿ ಜೂನ್ 17ಕ್ಕೆ ಮುಕ್ತಾಯವಾಗಲಿದ್ದು, ತೆರವಾಗಲಿರುವ ಸ್ಥಾನಗಳಿಗೆ ಜೂನ್ 13ರಂದು ಮತದಾನ ನಡೆಯಲಿದೆ.
ಪ್ರಸಕ್ತ ವಿಧಾನಸಭೆಯಲ್ಲಿನ ಬಲಾಬಲ ಗಮನಿಸಿದರೆ, ಒಟ್ಟು 11 ಸ್ಥಾನಗಳ ಪೈಕಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ 7 ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಬಿಜೆಪಿ ಮೂರು ಮತ್ತು ಜೆಡಿಎಸ್ಗೆ ಒಂದು ಸ್ಥಾನ ಜಯಿಸುವ ಅವಕಾಶ ಇದೆ.
ಈ ನಡುವೆ, ಯಾರಿಗೆ ಮೇಲ್ಮನೆ ಪ್ರವೇಶ ಸಾಧ್ಯವಿದೆ ಎಂಬ ಚರ್ಚೆಗಳು ಸಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇನ್ನೊಂದೆಡೆ, ಬಿಜೆಪಿಯಲ್ಲಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪರಿಷತ್ ಸದಸ್ಯರನ್ನಾಗಿಸುವ ಸಾಧ್ಯತೆಗಳ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಲೋಕಸಭಾ ಚುನಾವಣೆಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ನಳಿಬ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದೇ ವೇಳೆ, ಕರಾವಳಿಯ ಹಿಂದೂ ಕಟ್ಟಾಳುಗಳಾದ ಅರುಣ್ ಪುತ್ತಿಲ ಅವರನ್ನು ಮೇಲ್ಮನೆಗೆ ಕಳುಹಿಸುವ ಬಗ್ಗೆ ಲೋಕಸಭಾ ಚುನಾವಣೆಗೆ ಮುನ್ನ ನಾಯಕರು ಮಾತನಾಡುತ್ತಿದ್ದರು. ಹಾಗಾಗಿ ನಾಯಕರು ನುಡಿದಂತೆ ನಡೆದರೆ ಪುತ್ತಿಲ ಅವರಿಗೆ ಅದೃಷ್ಟ ಖುಲಾಯಿಸಬಹುದು. ಮತ್ತೊಂದೆಡೆ, ಕಾರಾವಳಿಯಲ್ಲಿ ಪ್ರಾಬಲ್ಯ ಹೊಂದಿರುವ ಬಿಲ್ಲವ ಸಮುದಾಯಕ್ಕೆ ಬಿಜೆಪಿಯಲ್ಲಿ ಸಾಕಷ್ಟು ಪ್ರಾತಿನಿದ್ಯ ಸಿಕ್ಕಿಲ್ಲ ಎಂಬ ಮಾತುಗಳು ಪ್ರತಿಧ್ವನಿಸುತ್ತಲೇ ಇವಲದೆ. ಈ ಪರಿಸ್ಥಿತಿಯಲ್ಲಿ ಬಿಲ್ಲವ ಸಮುದಾಯಕ್ಕೆ ಸ್ಥಾನಮಾನ ನೀಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದಲ್ಲಿ ಸತ್ಯಜಿತ್ ಸುರತ್ಕಲ್ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.