ಕಲಬುರಗಿ: ಆರೆಸ್ಸೆಸ್ ಬಗ್ಗೆ ತಮ್ಮ ಹೇಳಿಕೆ ಕುರಿತಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ, ತಮ್ಮ ಹೇಳಿಕೆಯನ್ನು ಯತ್ನಾಳ್ ಅವರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ತಾವು ಓದಿದ ಪುಸ್ತಕದಲ್ಲಿ ಸಂತೋಷ್ ತನೇಜಾ ಎಂಬ ಪ್ರಚಾರಕ ಹೇಳಿರುವಂತೆ, ನಾಲ್ಕು ಸಾವಿರಕ್ಕೂ ಹೆಚ್ಚು ನಾಗರಿಕ ಸೇವಾ ಅಧಿಕಾರಿಗಳನ್ನು ವಿವಿಧ ಹಂತಗಳಲ್ಲಿ ನಾವು ತರಬೇತಿ ಕೊಟ್ಟು ತುಂಬಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತದ ಅಧಿಕಾರಗಳನ್ನು ಜನರಿಂದ ಆಯ್ಕೆಯಾದ ಮಂತ್ರಿಗಳಿಗೆ ನೀಡದೇ ಅಧಿಕಾರಿಗಳಿಗೆ ನೀಡಿದ್ದಾರೆ. ಅವರ ಹೇಳಿಕೆಯನ್ನೇ ಲೇಖಕರು ಪುಸ್ತಕದಲ್ಲಿ ಬರೆದಿದ್ದಾರೆ. ಅದನ್ನೇ ಓದಿ ಹೇಳಿದ್ದೇನೆ. ಎರಡು ದಿನಗಳಿಂದ ನನ್ನ ಮೇಲೆ ಮುಗಿಬಿದ್ದಿರುವ ನಾಯಕರು ಇದನ್ನು ಅರಿತುಕೊಳ್ಳಬೇಕು ಎಂದು ಎಂದರು.
ಮಂತ್ರಿಗಳಿಗೆ ಅಧಿಕಾರ ಇಲ್ಲ ಎಂದಾದ ಮೇಲೆ ಪ್ರಜಾಪ್ರಭುತ್ವ ಏಕೆ ಬೇಕು? ಚುನಾವಣೆ ಯಾಕೆ ಬೇಕು ಎಂದು ಅವರು, ಅಧಿಕಾರಿಗಳ ಮೂಲಕವೇ ಸರಕಾರ ನಡೆಸಬಹುದಲ್ಲ. ಇದು ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ನಡೆ. ಅದರ ವಿರುದ್ಧವೇ ನಾನು ದನಿಯೆತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ದೇವೇಗೌಡರ ಕುಟುಂಬ ರಾಜಕಾರಣವನ್ನು ಫ್ಯಾಮಿಲಿ ಬಿಸಿನೆಸ್ ಮಾಡಿಕೊಂಡಿದೆ ಎಂದು ಹೇಳಿರುವುದಕ್ಕೆ ಕಿಡಿ ಕಿಡಿಯಾದ ಹೆಚ್ಡಿಕೆ ಅವರು ನಾವು ದುಡ್ಡು ಹೊಡೆಯೋಕೆ ರಾಜಕಾರಣ ಮಾಡುತ್ತಿಲ್ಲ. ಜನರ ಸೇವೆ ಮಾಡಲು ಮಾಡುತ್ತಿದ್ದೇವೆ. ಇದೇ ಯತ್ನಾಳ್ ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲ ಹೇಳಿದ್ದರು ಅನ್ನುವುದು ಗೊತ್ತಲ್ಲವೆ ನಿಮಗೆ ಎಂದರು.
ನಾವು ಹಿಂಬಾಗಿಲಿನಿಂದ ನಾವು ರಾಜಕೀಯ ಪ್ರವೇಶ ಮಾಡಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ, ಗೆದ್ದಿದ್ದೇವೆ, ಸೋತಿದ್ದೇವೆ ಎಂದು ಅವರು ಹೇಳಿದರು.





















































