ಮಂಗಳೂರು: ಕರಾವಳಿಯ ಗಂಡುಕಲೆ ಯಕ್ಷಗಾನದ ಮತ್ತೊಂದು ಮಾಣಿಕ್ಯ ಇಂದು ಮರೆಯಾಗಿದೆ. ಶ್ರೇಷ್ಠ ಯಕ್ಷಪಟು, ಕರುನಾಡಿನ ಯಕ್ಷಗಾನದ ಲೋಕದ ಶ್ರೇಷ್ಠ ರತ್ನ ಎಂದೇ ಗುರುತಾಗಿರುವ ಡಾ. ಶ್ರೀಧರ್ ಭಂಡಾರಿ (73 ವ) ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ.
ಹಲವಾರು ದಾಖಲೆಗಳಿಗೆ ಹೆಸರಾಗಿರುವ ಇವರು ಯಕ್ಷಗಾನದಲ್ಲಿ ತನ್ನದೇ ಆದ ಆಕರ್ಷಣೆಯನ್ನು ಹೊಂದಿದ್ದರು. ಧರ್ಮಸ್ಥಳ ಮೇಳದ ಹಿರಿಯ ಕಲಾವಿದರಾಗಿರುವ ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರಲ್ಲೊಬ್ಬರು. 73 ವರ್ಷ ವಯಸ್ಸಿನ ಡಾ.ಶ್ರೀಧರ್ ಭಂಡಾರಿ, ಯಕ್ಷಗಾನದ ‘ಅಭಿಮನ್ಯು’ ಎಂಬ ಖ್ಯತಿಗೊಳಗಾದವರು. ರಂಗಸ್ಥಳದ ಸಿಡಿಲಮರಿ ಎಂಬ ಬಿರುದು ಪಡೆದಿದ್ದ ಅವರು, ವಿವಿಧ ಪೌರಾಣಿಕ ಪಾತ್ರಗಳನ್ನು ಮಾಡಿದ ಸಂದರ್ಭದಲ್ಲಿ ರಂಗಸ್ಥಳದಲ್ಲಿ ಒಮ್ಮೆಗೆ 200ರಿಂದ 250ರಷ್ಟು ಧೀಂಗಿಣ ಹಾಕಿ ಪ್ರೇಕ್ಷಕರನ್ನು ರೊಚ್ಚಿಗೆಬ್ಬಿಸುತ್ತಿದ್ದರು. ಈ ಶ್ರೇಷ್ಠ ಕಲಾವಿದ ಇನ್ನು ನೆನಪು ಮಾತ್ರ.