ವಿಜಯಪುರ: ಅನ್ನಭಾಗ್ಯದ ಅಕ್ಕಿಗೆ ಸರ್ಕಾರ ಕತ್ತರಿ ಹಾಕಿ ಈಗ ಐದು ಕೆ.ಜಿ ಗೆ ಇಳಿಸಿದೆ. ಬಡವರ ಹೊಟ್ಟೆ ಮೇಲೆ ಹೊಡಿಬೇಡಿ ಎಂದರೆ ಸರ್ಕಾರ ನನ್ನ ಮಾತಿಗೆ ಬೆಲೆ ಕೊಡಲಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕೈಗೊಂಡ ಸಿದ್ದರಾಮಯ್ಯ ಸಿಂಧಗಿಯಲ್ಲಿ ಕಳೆದ ಹಲವು ದಿನಗಳಿಂದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ, ಇಷ್ಟು ದಿನದ ಜನರ ಉತ್ಸಾಹ ಗಮನಿಸಿದರೆ ಅಶೋಕ್ ಮನಗೂಳಿ ಅವರು ಗೆಲುವು ಖಚಿತ ಎಂಬುದು ಕಂಡುಬರುತ್ತಿದೆ ಎಂದರು.
ನಮ್ಮ ಸರ್ಕಾರದ ಯೋಜನೆಗಳು ಮತ್ತು ಎಂ.ಸಿ ಮನಗೂಳಿ ಅವರ ಅಭಿವೃದ್ಧಿ ಕಾರ್ಯಗಳು ಅಶೋಕ್ ಮನಗೂಳಿ ಅವರಿಗೆ ಶ್ರೀರಕ್ಷೆಯಾಗಿವೆ ಎಂದ ಅವರು, ನಾನು ಬಸವಣ್ಣನವರ ಅನುಯಾಯಿ. ಬಸವ ಜಯಂತಿಯಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅವರ ಸಮಾನತೆಯ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಲು ಐದು ವರ್ಷಗಳ ಕಾಲ ಶ್ರಮಿಸಿದ್ದೆ. ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಬಸವಣ್ಣನವರ ದಾಸೋಹ ತತ್ವ ಪ್ರೇರಣೆ. ಈ ಅನ್ನಭಾಗ್ಯದ ಅಕ್ಕಿಗೆ ಸರ್ಕಾರ ಕತ್ತರಿ ಹಾಕಿ ಈಗ ಐದು ಕೆ.ಜಿ ಗೆ ಇಳಿಸಿದೆ. ಬಡವರ ಹೊಟ್ಟೆ ಮೇಲೆ ಹೊಡಿಬೇಡಿ ಎಂದರೆ ಸರ್ಕಾರ ನನ್ನ ಮಾತಿಗೆ ಬೆಲೆ ಕೊಡಲಿಲ್ಲ ಎಂದರು.
ನಮ್ಮ ಸರ್ಕಾರದ ಜನಪರ ಯೋಜನೆಗಳನ್ನು ನಿಲ್ಲಿಸುವ ಮೂಲಕ ತಮ್ಮಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಸಾಬೀತು ಮಾಡಿದೆ. ರಾಜ್ಯಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ. ಏನಾದರೂ ಅಭಿವೃದ್ಧಿ ಮಾಡಿದ್ದರೆ ಬಸವರಾಜ ಬೊಮ್ಮಾಯಿಯವರು ನನ್ನ ಸವಾಲು ಸ್ವೀಕರಿಸಿ ಒಂದೇ ವೇದಿಕೆ ಮೇಲೆ ಚರ್ಚೆಗೆ ಬರುತ್ತಿದ್ದರು. ಇವತ್ತಿನವರೆಗೂ ಅವರು ಸುಮ್ಮನಿದ್ದಾರೆ ಎಂದರೆ ಸೋಲು ಒಪ್ಪಿಕೊಂಡಿದ್ದಾರೆ ಎಂದರ್ಥ ಎಂದವರು ಹೇಳಿದರು.
ಬಡವರ ಮನೆಗಳಿಗೆ ಅನುದಾನ ನೀಡದೆ ಲಾಕ್ ಮಾಡಿರುವ ಸರ್ಕಾರವನ್ನು ಲಾಕ್ ಮಾಡಲು 30 ನೇ ತಾರೀಖು ಉಪಚುನಾವಣೆ ರೂಪದಲ್ಲಿ ಜನರಿಗೆ ಅವಕಾಶ ಬಂದಿದೆ. ಬಿಜೆಪಿಗೆ ಮತ ನೀಡದೆ ತಕ್ಕ ಶಾಸ್ತಿ ಮಾಡಬೇಕು. ರಾಜ್ಯದಲ್ಲಿ ರೈತರಿಗೆ ಗೊಬ್ಬರ ಸಿಗುತ್ತಿಲ್ಲ, ರೈತರು ಗೊಬ್ಬರದ ಅಂಗಡಿಗಳಿಗೆ ಹೋಗಿ ಖಾಲಿ ಚೀಲದ ಜೊತೆ ಮನೆಗೆ ಬರುತ್ತಿದ್ದಾರೆ, ಬಸವರಾಜ ಬೊಮ್ಮಾಯಿ, ಬಿ.ಸಿ ಪಾಟೀಲ್ ದುಡ್ಡಿನ ಚೀಲ ತಗೊಂಡು ಬಂದು ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರದಲ್ಲಿ ಕೂತಿದ್ದಾರೆ. ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದವರು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೇ ದಿನದ ಭ್ರಮೆಗೆ ಒಳಗಾಗಿ ಮತ ನೀಡಿದ ಜನರು ಇವತ್ತು ಪರಿತಪಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಬಡವರು ಕೊಳ್ಳದಷ್ಟು ದುಬಾರಿಯಾಗಿವೆ. ಅಭಿವೃದ್ಧಿ ಮಾಡುತ್ತೇವೆ ಎಂದು ಸುಳ್ಳು ಹೇಳಿ ಜನರ ಸುಲಿಗೆ ಮಾಡುತ್ತಿದ್ದಾರೆ. ಸದನದಲ್ಲಿ ಬೆಲೆಯೇರಿಕೆ ಬಗ್ಗೆ ಮಾತನಾಡುವಾಗ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಮಾಡಿ ಎಂದು ಬಸವರಾಜ ಬೊಮ್ಮಾಯಿಯವರಿಗೆ ಹೇಳಿದೆ. ಆದರೆ ಅವರು ಕಡಿಮೆ ಮಾಡಲ್ಲ ಎಂದರು.
ಜೆಡಿಎಸ್ ನವರಿಗೆ ಬಿಜೆಪಿ ಸೋಲೋದು ಇಷ್ಟವಿಲ್ಲ, ಕಾಂಗ್ರೆಸ್ ಸೋಲಬೇಕು. ಹಾಗಾಗಿ ಜನ ಜೆಡಿಎಸ್ ಗೆ ಮತನೀಡಿದರೆ ಅದು ಪರೋಕ್ಷವಾಗಿ ಬಿಜೆಪಿಗೆ ಮತ ಹಾಕಿದಂತಾಗುತ್ತದೆ. ಬಿಜೆಪಿಗೂ ಜೆಡಿಎಸ್ ಗೂ ಯಾವ ವ್ಯತ್ಯಾಸವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.