ರೋಮ್: ಪ್ರಧಾನಿ ನರೇಂದ್ರ ಮೋದಿ ಅವರ ಇಟಲಿ ಭೇಟಿಯ ವೇಳೆ ಭಾರತ ಮತ್ತು ಇಟಲಿ ತಮ್ಮ ದ್ವಿಪಕ್ಷೀಯ ಸಂಬಂಧವನ್ನು “ವಿಶೇಷ ಕಾರ್ಯತಂತ್ರದ ಪಾಲುದಾರಿಕೆ” ಮಟ್ಟಕ್ಕೆ ಏರಿಸುವ ಮಹತ್ವದ ಘೋಷಣೆ ಮಾಡಿವೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ನಡೆದ ಈ ಭೇಟಿ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಹೊಸ ದಿಕ್ಕು ನೀಡಿದೆ.
ರಾಜಕೀಯ, ವ್ಯಾಪಾರ, ರಕ್ಷಣೆ, ತಂತ್ರಜ್ಞಾನ, ಶಿಕ್ಷಣ, ವಲಸೆ ಮತ್ತು ಜಾಗತಿಕ ವಿಚಾರಗಳ ಕುರಿತು ಉಭಯ ನಾಯಕರು ವ್ಯಾಪಕ ಚರ್ಚೆ ನಡೆಸಿದರು. 2029ರೊಳಗೆ ದ್ವಿಪಕ್ಷೀಯ ವ್ಯಾಪಾರವನ್ನು 20 ಬಿಲಿಯನ್ ಯೂರೋ ಮಟ್ಟಕ್ಕೆ ಹೆಚ್ಚಿಸುವ ಗುರಿಯನ್ನು ಎರಡೂ ರಾಷ್ಟ್ರಗಳು ಹೊಂದಿವೆ.
ಅರೆವಾಹಕ, ಶುದ್ಧ ಇಂಧನ, ಡಿಜಿಟಲ್ ತಂತ್ರಜ್ಞಾನ, ಆಟೋಮೊಬೈಲ್, ಔಷಧ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಒಪ್ಪಂದವಾಗಿದೆ. ಜೊತೆಗೆ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಹಾಗೂ ಫಿನ್ಟೆಕ್ ಕ್ಷೇತ್ರಗಳಲ್ಲಿ ಸಹಭಾಗಿತ್ವ ಹೆಚ್ಚಿಸಲು “ಇನೋವಿಟ್ ಇಂಡಿಯಾ” ನಾವೀನ್ಯತೆ ಕೇಂದ್ರ ಆರಂಭಿಸುವುದಾಗಿ ಘೋಷಿಸಲಾಗಿದೆ.
ರಕ್ಷಣಾ ಕ್ಷೇತ್ರದಲ್ಲೂ ಸಹಕಾರ ಬಲಪಡಿಸಲು ಉಭಯ ರಾಷ್ಟ್ರಗಳು ತೀರ್ಮಾನಿಸಿವೆ. ಹೆಲಿಕಾಪ್ಟರ್, ನೌಕಾ ವ್ಯವಸ್ಥೆ, ಸಮುದ್ರ ಶಸ್ತ್ರಾಸ್ತ್ರ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನಗಳ ಸಹ-ಉತ್ಪಾದನೆಗೆ ಒತ್ತು ನೀಡಲಾಗಿದೆ. ಕಡಲ ಭದ್ರತೆ ಕುರಿತ ಪ್ರತ್ಯೇಕ ಸಂವಾದ ಆರಂಭಿಸುವ ನಿರ್ಧಾರವೂ ಕೈಗೊಳ್ಳಲಾಗಿದೆ.
ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ವ್ಯಕ್ತಪಡಿಸಿದ ಉಭಯ ನಾಯಕರು, ಗಡಿಯಾಚೆಗಿನ ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸಿದರು. ಪಹಲ್ಗಾಮ್ ದಾಳಿಯನ್ನೂ ಉಲ್ಲೇಖಿಸಿ ಭಯೋತ್ಪಾದಕ ಸುರಕ್ಷಿತ ತಾಣಗಳ ನಿರ್ಮೂಲನೆಗೆ ಜಾಗತಿಕ ಸಹಕಾರ ಅಗತ್ಯ ಎಂದು ಹೇಳಿದರು.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಯೋಜನೆಗೆ ಎರಡೂ ರಾಷ್ಟ್ರಗಳು ಬೆಂಬಲ ಸೂಚಿಸಿವೆ. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಕೌಶಲ್ಯಪೂರ್ಣ ವೃತ್ತಿಪರರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಸಹ ಒಪ್ಪಂದವಾಗಿದೆ.
2027ನೇ ವರ್ಷವನ್ನು “ಭಾರತ-ಇಟಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ವರ್ಷ”ವಾಗಿ ಆಚರಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ.























































