ದಾವಣಗೆರೆ: ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿಸುತ್ತಿರುವ ಬಾಂಬ್ ಪಕ್ಷದ ನಾಯಕರನ್ನು ಮುಜುಗರ ನೀಡುತ್ತಿರುವುದಂತೂ ಸತ್ಯ. ಒಂದೆಡೆ ಯತ್ನಾಳ್ ವಿರುದ್ದ ಶಿಸ್ತಿನ ಅಸ್ತ್ರ ಪ್ರಯೋಗಿಸುವ ಎಚ್ಚರಿಕೆ ನೀಡಿ ಅವರ ಬಾಯಿಗೆ ಬೀಗ ಜಡಿಯುವ ಪ್ರಯತ್ನ ವರಿಷ್ಠರಿಂದ ನಡೆದರೆ, ಇನ್ನೊಂದೆಡೆ ಆ ಪಕ್ಷದ ನಾಯಕರೇ ಅವರನ್ನು ಕೆಣಕುತ್ತಿದ್ದಾರೆ.
ಇದೇ ವೇಳೆ, ಯತ್ನಾಳ್ ವಿರುದ್ಧ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಡಿರುವ ಟೀಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ಅವರ ಮಾತು ತೋಳ ಬಂತು ತೋಳ ಮತ್ತು ನಾಳೆ ಬಾ ಅಂತಾರಲ್ಲ ಹಾಗೆ ಆಗಿದೆ ಎಂದು ಸಚಿವ ಬಿ.ಸಿ. ಪಾಟೀಲ್ ಲೇವಡಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಯತ್ನಾಳ್ ಅವರು ಸುಮ್ಮನೆ ಬುರುಡೆ ಬಿಡುತ್ತಾರೆ ಎಂದರು. ಯಡಿಯೂರಪ್ಪ ಅವರು ಎರಡೂವರೆ ವರ್ಷ ಸಿಎಂ ಆಗಿರುತ್ತಾರೆಂದು ಅಮಿತ್ ಶಾ ಹೇಳಿದ್ದಾರೆ. ಹಾಗಾಗಿ ಸಿಎಂ ಬದಲಾವಣೆ ವಿಚಾರಕ್ಕೆ ಮಹತ್ವ ಇಲ್ಲ ಎಂದಿದ್ದಾರೆ.


























































