ಉಡುಪಿ: ಒಂದು ಗೃಹ ಪ್ರವೇಶ, ಕುಟುಂಬಕ್ಕಷ್ಟೇ ಸೀಮಿತವಿರಬಹುದಾದ ಈ ಸಮಾರಂಭ ಊರಿಗೆ ಊರೇ ಹಬ್ಬದಂತೆ ಆಚರಿಸಿದಾಗ ಎಲ್ಲರಿಗೂ ಅಚ್ಚರಿ. ಇದು ಡಾ.ಗೋವಿಂದ ಪೂಜಾರಿ ಅಚ್ಚರಿ.
ಸಾಮಾಜಿಕ ಕಾರ್ಯಕರ್ತ, ಬೆಂಗಳೂರಿನ ಖ್ಯಾತ ಉದ್ಯಮಿ ಡಾ.ಗೋವಿಂದ ಪೂಜಾರಿ ಅವರು ಇತ್ತೀಚೆಗೆ ಕರುನಾಡು ತುಂಬೆಲ್ಲಾ ಭಾರೀ ಸುದ್ದಿಯಾಗುತ್ತಿದ್ದಾರೆ. ಕೊಡುಗೈ ದಾನಿ ಎನ್ನಿಸಿಕೊಂಡಿರುವ ಡಾ.ಪೂಜಾರಿ, ಕಳೆದ ಕೆಲವು ತಿಂಗಳಲ್ಲಿ ಬಡವರಿಗಾಗಿ ಹಲವಾರು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಶುಕ್ರವಾರ ಐದನೇ ಮನೆಯ ‘ಗೃಹ ಪ್ರವೇಶ’ ಸಮಾರಂಭ ನವರಾತ್ರಿ ವೈಭವದ ಸಡಗರ ಮೀರಿದ ಸನ್ಬಿವೇಶಕ್ಕೆ ಸಾಕ್ಷಿಯಾಯಿತು.
ಏನಿದು ಹೊಸ ಮನೆ ಕಥೆ..?
ಉಡುಪಿ ಜಿಲ್ಲೆ ಕುಂದಾಪುರದ ಕಾಳವರದಲ್ಲಿ ಆಶ್ರಯದಾತರೆನಿಸಿರುವ ಡಾ.ಗೋವಿಂದ ಬಾಬು ಪೂಜಾರಿಯವರ ಕಾಣಿಕೆಯ ಮಗದೊಂದು ಸೂರು ನಿರ್ಮಾಣಗೊಂಡಿದೆ. ಈ ಮೂಲಕ ಆಟೋ ಚಾಲಕನ ಕನಸು ನನಸಾಗಿಸಿದ್ದಾರೆ ಕರಾವಳಿ ಮಾಣಿಕ್ಯ ಡಾ. ಗೋವಿಂದ ಬಾಬು ಪೂಜಾರಿ.
ಅದೆಷ್ಟೋ ವರ್ಷಗಳ ಕನಸಿನ ಗೂಡು. ಆಟೋ ಚಾಲಕ ಸರಿಕೊಡ್ಲು ಮನೆ ಸತೀಶ್ ಪೂಜಾರಿಯವರದ್ದಾಗಿತ್ತು. ಆದರೆ ವಿಧಿ ಆಟಕ್ಕೆ ಸಿಲುಕಿ ಸತೀಶ್ ವಿಧಿವಶರಾದರು. ಅವರ ಇಡೀ ಕುಟುಂಬ ಚಿಂತಾಜನಕ ಪರಿಸ್ತಿತಿಯಲ್ಲಿ ಕುಗ್ಗಿಹೋಯಿತು.
ಕುಂದಾಪುರ ಬಿಲ್ಲವ ಸಮಾಜದ ಪ್ರಮುಖರು ನೀಡಿದ ಮಾಹಿತಿ ಮೇರೆಗೆ ಡಾ.ಗೋವಿಂದ ಬಾಬು ಪೂಜಾರಿ ಈ ಬಡಪಾಯಿ ಮನೆಗೆ ಬೇಟಿ ನೀಡಿದ್ದರು. ಅಲ್ಲಿ ಮೃತ ಸತೀಶ್’ರವರ ಕನಸಿನ ಮನೆ ನೋಡುತ್ತಾ, ನೊಂದ ಕುಟುಂಬದವರ ಪರಿಸ್ತಿತಿ ಅರಿತು, ಅರ್ದದಲ್ಲೇ ನಿಂತಿದ್ದ ಮನೆಯನ್ನು ಪರಿಪೂರ್ಣ ಮಾಡುವ ಭರವಸೆ ನೀಡಿದ್ದರು. ಮನೆಯನ್ನು ತಾವೇ ನಿರ್ಮಿಸಿಕೊಡುತ್ತೇನೆಂದೂ, ಸತೀಶ್’ರವರು ಸ್ವರ್ಗದಲ್ಲಿದ್ದರೂ ಅವರ ಕನಸಿಗಿಂತ ಹೆಚ್ಚು ತೃಪ್ತಿ ಸಿಗುವಂತೆ ಮನೆ ಪೂರ್ಣಗೊಳಿಸಿ ಕೊಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದರು.
ನುಡಿದಂತೆ ನಡೆದ ಡಾ.ಗೋವಿಂದ ಬಾಬು ಪೂಜಾರಿ, ತಾವು ಆಶ್ವಾಸನೆ ಕೊಟ್ಟ ಎರಡೇ ತಿಂಗಳಲ್ಲಿ ಆಟೋ ಚಾಲಕ ಸತೀಶ್ ಪೂಜಾರಿಯವರ ಕನಸಿನ ಮನೆ ಎದ್ದು ನಿಲ್ಲುವಂತೆ ಮಾಡಿದ್ದಾರೆ.
ಈ ಕನಸಿನ ಮನೆಯನ್ನು ನಾಡು ನವರಾತ್ರಿಯ ಸಂಭ್ರಮದಲ್ಲಿರುವಾಗ ‘ಗೃಹ ಪ್ರವೇಶ’ ಮಾಡಿಸಿ ಇಡೀ ಊರು ಸಂಭ್ರಮಿಸಿದ್ದು ವಿಶೇಷ.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನಿಂದ ಕಾಳಾವರದಲ್ಲಿ ನಿರ್ಮಿಸಲಾದ ಈ ‘ಶ್ರೀ ವರಲಕ್ಷೀ ನಿಲಯ’ವನ್ನು ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಹಾಗೂ ಮಾಲತಿ ದಂಪತಿ ಉಪಸ್ಥಿತಿಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಗೊವಿಂದ ಬಾಬು ಪೂಜಾರಿ ಅವರ ಪೋಷಕರು ಉದ್ಘಾಟಿಸಿದರು. ಕುಂದಾಪುರ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ, ಕಾಳಾವಾರ ಪಂಚಾಯತ್ ಅಧ್ಯಕ್ಷರಾದ ಆಶಾಲತಾ ಶೆಟ್ಟಿ ಹಾಗೂ ವಿವಿಧ ಸಮುದಾಯ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ಯಾರಿವರು ಡಾ.ಗೋವಿಂದ ಪೂಜಾರಿ..?
ಕರಾವಳಿ ಮೂಲದ ಉದ್ಯಮಿ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್ ಸಹಿತ ಹಲವು ರಾಜ್ಯಗಳಲ್ಲಿ ಆಹಾರೋದ್ಯಮ ಕ್ಷೇತ್ರವನ್ನು ಮುನ್ಬಡೆಸುತ್ತಿರುವ ಡಾ.ಗೋವಿಂದ ಪೂಜಾರಿ ಬೆಂಗಳೂರನ್ನು ಕೇಂದ್ರಸ್ಥಾನವಾಗಿಸಿ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿದ್ದಾಗ ಗೋವಿಂದ ಬಾಬು ಪೂಜಾರಿ ಮುಂಬೈಗೆ ತೆರಳಿ ಹೊಟೇಲ್ ಉದ್ಯಮದ ಕಾರ್ಮಿಕನಾಗಿ ಕೆಲಸ ಮಾಡಿ, ನಂತರ ತಾನೇ ಉದ್ಯಮ ಸಂಸ್ಥೆ ಕಟ್ಟಿದವರು. ಯಾರೂ ನಿರುದ್ಯೋಗಿಗಳಾಗಿರಬಾರದು ಎಂಬ ಮನಸ್ಥಿತಿ ಹೊಂದಿರುವ ಡಾ.ಗೋವಿಂದ ಪೂಜಾರಿಯವರು, ತಮ್ಮ ಒಡೆತನದ ChefTalk ಕಂಪನಿಯ ಜೊತೆ ಹಲವಾರು ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಸ್ವ ಉದ್ಯೋಗಾಕಾಂಕ್ಷಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಶ್ರೀ ವರಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ. ರಾಜ್ಯವ್ಯಾಪಿ ಸಣ್ಣ ಉದ್ದಿಮೆ ಆರಂಭಿಸುವವರ ಆರ್ಥಿಕ ನೆರವಿಗಾಗಿ ಶ್ರೀ ನಾರಾಯಣ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ.
ಮತ್ಯೋದ್ಯಮಿಗಳಿಗೆ ಬೆಂಗಾವಲಾಗಿ ಹಾಗೂ ರಾಜ್ಯಾದ್ಯಂತ ಉದ್ಯೋಗ ಸೃಷ್ಟಿಗಾಗಿ ‘ಮತ್ಸ್ಯ ಬಂಧನ’ ಹಾಗೂ ಮೀನಿನ ಖಾದ್ಯಗಳ ತಯಾರಿಕಾ ಘಟಕ ಆರಂಭಿಸಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಸಬಹುದೆಂಬುದನ್ನು ಮನಗಂಡ ಡಾ.ಪೂಜಾರಿಯವರು ರೆಸಾರ್ಟ್ ಹಾಗೂ ಹಾಸ್ಪಿಟಾಲಿಟಿ ಉದ್ಯಮಕ್ಕೂ ಕೈ ಹಾಕಿದ್ದಾರೆ. ಸೈನಿಕರಾಗಲು ಬಯಸುವ ಯುವಕರಿಗೆ ಸೂಕ್ತ ತರಬೇತಿ ನೀಡಲು ಬೈಂದೂರಿನ ಯುವ ಸೈನಿಕ ಪ್ರಶಾಂತ್ ದೇವಾಡಿಗ ನೇತೃತ್ವದ ನೇಶನ್ ಲವರ್ಸ್ ಟೀಮ್ನ ಗೌರವಾಧ್ಯಕ್ಷರಾಗಿಯೂ ಇವರು ಕಾರ್ಯಕೇಂದ್ರೀಕರಿಸಿದ್ದಾರೆ.

ಅಷ್ಟೇ ಅಲ್ಲ, ವಿದ್ಯುನ್ಮಾನ ಹಾಗೂ ಶಿಕ್ಷಣ ಕ್ಷೇತ್ರಕ್ಕೂ ಸೇವೆಯನ್ನು ವಿಸ್ತರಿಸಿ 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡುವ ಪ್ರಯತ್ನ ಇವರದ್ದು. ಜೊತೆಗೆ ಸಾವಿರಾರು ಕುಟುಂಬಗಳಿಗೆ ಜೀವಜಲ, ಅನ್ನ, ಆಹಾರ, ವೈದ್ಯಕೀಯ ಶಿಕ್ಷಣ ನೀಡಿದ ಸಾಧನೆ ಇವರದ್ದು. ಈ ಅನನ್ಯ, ಅಪೂರ್ವ ಸೇವೆಗಾಗಿಯೇ ಏಷ್ಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಅತ್ಯುನ್ನತ ಪುರಸ್ಕಾರ ನೀಡಿ ಗೌರವಿಸಿದೆ.
