ದೆಹಲಿ: ರಾಹುಲ್ ಗಾಂಧಿಯನ್ನು ‘ಪಪ್ಪು’ ಎನ್ನುತ್ತಾ ಅವರ ಕಾರ್ಯವೈಖರಿ ಬಗ್ಗೆ ಟೀಕಿಸುತ್ತಿದ್ದ ಬಿಜೆಪಿಗೆ ಇದೀಗ ಕರ್ನಾಟಕದಿಂದ ಕೇಳಿ ಬಂದಿರುವ ಟೀಕೆಯೊಂದು ಮುಜುಗರದ ಸನ್ನಿವೇಶವನ್ನು ತಂದೊಡ್ಡಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಅವರ ಲೂಸ್ ಟಾಕ್ ಇದೀಗ ಕಾಂಗ್ರೆಸ್ ಬಗ್ಗೆ ಜನರಲ್ಲಿ ಅನುಕಂಪ ಮೂಡಿಸುವ ಹಂತಕ್ಕೆ ತಲುಪಿದೆ.
‘ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತಾ ವರದಿಗಳು ಹೇಳಿವೆ” ಎಂದು ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯೇ ಇದೀಗ ಕಾಂಗ್ರೆಸ್ಗೆ ವರದಾನವಾಗಿರುವುದು. ಇದನ್ನೇ ಮುಂದಿಟ್ಟು ದೇಶವ್ಯಾಪಿ ಅಭಿಯಾನ ನಡೆಸಲು ಎಐಸಿಸಿ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ವರಿಷ್ಠರನ್ನು ಟೀಕಿಸುವ ಅಬ್ಬರದಲ್ಲಿ ‘ರಾಹುಲ್ ಅವರನ್ನು ಡ್ರಗ್ ಎಡಿಕ್ಟ್ ಅಂದಿದ್ದರು. ಅಷ್ಟೇ ಅಲ್ಲ ಪೆಡ್ಲರ್ ಎಂಬ ಪದವನ್ನೂ ಬಳಸಿದ್ದಾರೆ. ಇದು ಸಮಾಜ ಘಾತುಕದ ಗಂಭೀರ ಆರೋಪವಾಗಿದೆ. ಒಂದು ವೇಳೆ ಈ ಆರೋಪ ನಿಜವಾಗಿದ್ದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದು ಕಾನೂನು ಕ್ರಮ ಕೈಗೊಳ್ಳಬಹುದಿತ್ತಲ್ಲವೇ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನೆ ಮಾಡಿದ್ದಾರೆ.
ಹಿಂದೆ, ನರೇಂದ್ರ ಮೋದಿ ಅವರನ್ನು ಬಿಜೆಪಿಯು ಪ್ರಧಾನಿ ಅಭ್ಯರ್ಥಿ ಎಂದು ಪ್ರಕಟಿಸಿದ ಸಂದರ್ಭದಲ್ಲಿ ಕಾಂಗ್ರೆಸ್ನ ಗುಲಾಂ ನಭಿ ಆಜಾದ್ ಅವರು ಮಾಡಿದ ‘ಚಾಯ್ ವಾಲಾ’ ಎಂಬ ಟೀಕೆ ರಾಷ್ಟ್ರವ್ಯಾಪಿ ಸಂಚಲನ ಸೃಷ್ಟಿಸಿತ್ತು. ಸಾರ್ವಜನಿಕ ವಲಯದಲ್ಲೂ ‘ಮೋದಿ ಚಾಯ್’ ಅಭಿಯಾನ ಆರಂಭವಾಗಿತ್ತು. ಕಾಂಗ್ರೆಸ್ ನಾಯಕರ ಬಾಲಿಷ ಟೀಕೆ ಮೋದಿ ಪರ ಅಲೆ ಎಬ್ಬಿಸಲು ಕಾರಣವಾಗಿತ್ತು ಎಂಬುದು ದೇಶದಲ್ಲಿನ ರಾಜಕೀಯ ಸತ್ಯ. ಇದೀಗ ಅಂತಹುದೇ ರೀತಿಯ ಬೆಳವಣಿಗೆ ಕರ್ನಾಟಕದಲ್ಲಿ ನಡೆದಿದ್ದು, ‘ಮೋದಿ ಚಾಯ್’ ಹೇಳಿಕೆಯನ್ನು ಬಿಜೆಪಿ ಯಾವ ರೀತಿಯಲ್ಲಿ ಅಸ್ತ್ರವನ್ನಾಗಿಸಿತ್ತೋ ಅದೇ ಮಾದರಿಯಲ್ಲಿ ನಳಿನ್ ಅವರ ‘ಲೂಸ್ ಟಾಕ್’ನ್ನು ಬಳಸಿ ದೇಶವ್ಯಾಪಿ ಅನುಕಂಪ ಗಿಟ್ಟಿಸಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ.
ದೇಶದೆಲ್ಲೆಡೆ ಅಲ್ಲಲ್ಲಿ ನಳಿನ್ ಕುಮಾರ್ ವಿರುದ್ದ ದೂರು ನೀಡುವ, ಅಭಿಯಾನ ಮಾಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ನಳಿನ್ ಕುಮಾರ್ ಕಟೀಲ್ ಹೇಳಿಕೆ ಬಗ್ಗೆ ಜೆಡಿಎಸ್ ಸಹಿತ ವಿವಿಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನೇ ಕಾಂಗ್ರೆಸ್ ಬಂಡವಾಳವನ್ನಾಗಿಸಿದೆ. ಹಾಗಾಗಿ ಕರ್ನಾಟಕದಲ್ಲೂ ದೂರು ನೀಡುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಅಭಿಯಾನ ಮಾಡುವ ಪ್ರಕ್ರಿಯೆಯನ್ನು ಕಾಂಗ್ರೆಸ್ ಟೀಂ ಮಾಡಲಾರಂಭಿಸಿದೆ.
ಕೈ ಟ್ವೀಟಾಸ್ತ್ರ..!
“ಆಚಾರವಿಲ್ಲದ ನಾಲಿಗೆ,ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಶಿಸುವುದಕ್ಕೆ ಚಾಚಿ ಕೊಂಡಿರುವಂತ ನಾಲಿಗೆ” ಪುರಂದರದಾಸರು ಇದನ್ನು ಕಟೀಲ್ರಂತವರಿಗೇ ಹೇಳಿದಂತಿದೆ. ನಮ್ಮ ಕಠಿಣ ಪದಬಳಕೆಗೆ ಡಿ.ಕೆ.ಶಿವಕುಮಾರ್ ಅವರು ವಿಷಾದ ವ್ಯಕ್ತಪಡಿಸುವ ವೈಶಾಲ್ಯತೆ ತೋರಿದ್ದರು. ಈ ಮಾತುಗಳಿಗೆ ಬಿಜೆಪಿ ಕ್ಷಮೆ ಕೇಳುವ ನೈತಿಕತೆ ತೋರುವುದೇ? ಎಂದು ಕಾಂಗ್ರೆಸ್ ಮಾಡಿರುವ ಟೀಕೆ ಗಮನಸೆಳೆದಿದೆ.
https://mobile.twitter.com/INCKarnataka/status/1450425269508923395





































































