ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಶುಕ್ರವಾರ ಆಯ್ಕೆಯಾಗಿದ್ದಾರೆ. ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಧ್ವನಿಮತದ ಮೂಲಕ ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಪರವಾಗಿ 38 ಸದಸ್ಯರು ಬೆಂಬಲ ವ್ಯಕ್ತಪಡಿಸಿದರೆ, ಎನ್ಡಿಎ ಅಭ್ಯರ್ಥಿ ಹಾಗೂ ಬಿಜೆಪಿ ಸದಸ್ಯ ಪಿ.ಎಚ್. ಪೂಜಾರ್ ಪರವಾಗಿ 30 ಸದಸ್ಯರು ಬೆಂಬಲಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿತ್ತು. ಕಾಂಗ್ರೆಸ್ ಸಲೀಂ ಅಹ್ಮದ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಪಿ.ಎಚ್. ಪೂಜಾರ್ ಸ್ಪರ್ಧಿಸಿದ್ದರು.

75 ಸದಸ್ಯ ಬಲದ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ 38, ಬಿಜೆಪಿ 25 ಹಾಗೂ ಜೆಡಿಎಸ್ ಆರು ಸದಸ್ಯರನ್ನು ಹೊಂದಿದೆ. ಒಬ್ಬರು ಸ್ವತಂತ್ರ ಸದಸ್ಯರಾಗಿದ್ದು, ಐದು ಸ್ಥಾನಗಳು ಸದ್ಯ ಖಾಲಿ ಇವೆ.
ಸಭಾಪತಿ ಚುನಾವಣೆಗೆ ಒಟ್ಟು ಏಳು ಪ್ರಸ್ತಾವನೆಗಳು ಮಂಡನೆಯಾಗಿದ್ದು, ಐದು ಪ್ರಸ್ತಾವನೆಗಳು ಸಲೀಂ ಅಹ್ಮದ್ ಅವರ ಪರವಾಗಿದ್ದವು. ಬಳಿಕ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಪ್ರಸ್ತಾವನೆಯನ್ನು ಧ್ವನಿಮತಕ್ಕೆ ಹಾಕಿದರು.
ಬಹುಮತದ ಸದಸ್ಯರ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಸಲೀಂ ಅಹ್ಮದ್ ಅವರನ್ನು ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಘೋಷಿಸಲಾಯಿತು.







































































