ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೆಚ್ಚಿರುವ ಐದು ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಇಂದಿನಿಂದ ಶಾಲಾ-ಕಾಲೇಜು ಆರಂಭವಾಗಿದೆ.
ಮುಖ್ಯಮಂತ್ರಿ ಸೂಚನೆ ಹಿನ್ನೆಲೆ ಸಚಿವರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಪರಿಶೀಲಿಸಿದ್ದಾರೆ.
ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ಅವರು ತಮ್ಮ ಕೆ.ಅರ್. ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಮಮೂರ್ತಿ ನಗರದ ಅಂಬೇಡ್ಕರ್ ಪ್ರೌಢ ಶಾಲೆ, ಕಲ್ಕೆರೇ ಸರ್ಕಾರಿ ಪ್ರೌಢ ಶಾಲೆ, ಐಟಿಐ ವಿಧ್ಯಾ ಮಂದಿರ, ಕೆ.ಅರ್.ಪುರ ಸರ್ಕಾರಿ ಪ್ರೌಢ ಶಾಲೆಗಳಿಗೆ ಭೇಟಿ ನೀಡಿದರು.
ಈ ವೇಳೆ ಅವರು ಶಾಲೆಯಲ್ಲಿ ಹಾಜರಿ ಇದ್ದ ವಿಧ್ಯಾರ್ಥಿಗಳ ಅರೋಗ್ಯ, ಯೋಗಕ್ಷೇಮವನ್ನು ವಿಚಾರಿಸಿದರು. ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ವಿಧ್ಯಾರ್ಥಿಗಳಿಗೆ ಸೂಚಿಸಿದರು.
ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು, ಸ್ಯಾನಿಟೈಸರ್ ನಿಯಮಿತವಾಗಿ ಬಳಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡರೆ, ಕೊರೊನಾ ವನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದು ಸಚಿವರು ಕಿವಿ ಮಾತು ಹೇಳಿದರು.
ಸಚಿವರು ಭೇಟಿ ನೀಡಿದ ಎಲ್ಲಾ ಶಾಲೆಗಳಿಗೂ ಉಚಿತವಾಗಿ ನೀರಿನ ಬಾಟಲ್, ಸ್ಯಾನಿಟೈಸರ್, ಮಾಸ್ಕ್ ನೀಡಿದರು. ಕೆಲ ವಿಧ್ಯಾರ್ಥಿಗಳ ಸ್ಥಿತಿ ಗತಿ ವಿಚಾರಿಸಿದ ಸಚಿವರು ಹಲವು ವಿಧ್ಯಾರ್ಥಿಗಳ ಕುಟುಂಬದವರಿಗೆ ದಿನಸಿ ಪದಾರ್ಥಗಳ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದರು.