ಅಗರ್ತಲ: ತ್ರಿಪುರಾ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನುರಾಗ್ ಅವರ ನಿಗೂಢ ಸಾವಿನ ತನಿಖೆಯನ್ನು ರಾಜ್ಯ ಪೊಲೀಸರು ತೀವ್ರಗೊಳಿಸಿದ್ದು, ಪ್ರಕರಣದ ತನಿಖೆಗಾಗಿ ರಚಿಸಿದ್ದ ವಿಶೇಷ ತಂಡವನ್ನು ಮೂರು ಸದಸ್ಯರಿಂದ 10 ಸದಸ್ಯರಿಗೆ ವಿಸ್ತರಿಸಲಾಗಿದೆ.
1994ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ಅನುರಾಗ್ ಅವರ ಮೃತದೇಹ ಜುಲೈ 20ರಂದು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ಅವರ ಅಧಿಕೃತ ಕೊಠಡಿಗೆ ಹೊಂದಿಕೊಂಡ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 24ರಂದು ಪಶ್ಚಿಮ ತ್ರಿಪುರಾ ಎಸ್ಪಿ ನಮಿತ್ ಪಾಠಕ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿತ್ತು.

ಈಗ ಎಸ್ಐಟಿಯನ್ನು ಪುನರ್ರಚಿಸಿ, ಸೈಬರ್ ಅಪರಾಧ ಘಟಕ, ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಹಿರಿಯ ತನಿಖಾಧಿಕಾರಿಗಳನ್ನು ಒಳಗೊಂಡ 10 ಸದಸ್ಯರ ತಂಡವನ್ನಾಗಿ ವಿಸ್ತರಿಸಲಾಗಿದೆ. ತನಿಖೆಯ ಪ್ರಗತಿ ಪರಿಶೀಲನೆಗಾಗಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಭೆ ನಡೆಸಿ, ದೈನಂದಿನ ಪ್ರಗತಿ ವರದಿಯನ್ನು ಎಸ್ಪಿಗೆ ಸಲ್ಲಿಸುವಂತೆ ಆದೇಶಿಸಲಾಗಿದೆ.
ಇದೇ ವೇಳೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸುದೀಪ್ ರಾಯ್ ಬರ್ಮನ್, ಡಿಜಿಪಿ ಸಾವಿನ ಹಿಂದೆ ಇರುವ ಸತ್ಯ ಹೊರಬರಲು ತ್ರಿಪುರ ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಸಾವಿನ ಸಂದರ್ಭಗಳು ಅನುಮಾನಾಸ್ಪದವಾಗಿದ್ದು, ಇದು ಕೊಲೆ ಪ್ರಕರಣವಾಗಿರಬಹುದು ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.






































































