ಮಂಗಳೂರು ಏರ್ ಪೋರ್ಟ್ ಗೆ ತೆರಳುವ ಕಾವೂರು ಬಳಿಯ ಮುಖ್ಯ ಸೇತುವೆ ಬಿರುಕು ಬಿಟ್ಟಿದೆ. ಮರವೂರಿನ ಫಲ್ಗುಣಿ ನದಿಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದನ್ನು ತಿಳಿದ ಕಾವೂರು ಪೊಲೀಸರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಿದ್ದು ಹೆಚ್ಚಿನ ಅಪಾಯವಾಗುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗಿದೆ.
ರಾತ್ರೋ ರಾತ್ರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬ್ಯಾರಿಕೇಡ್ ಹಾಕಿ, ರಸ್ತೆಯನ್ನು ಬಂದ್ ಮಾಡಲು ಸೂಚಿಸಿದ್ದು ಮಂಗಳೂರು ನಗರದಿಂದ ಬಜ್ಪೆ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಬಜ್ಪೆ ಏರ್ಪೋರ್ಟ್ಗೆ ತೆರಳುವ ವಾಹನಗಳನ್ನು ಕಾವೂರು ಮೂಲಕ ತೆರಳುವಂತೆ ಸೂಚಿಸಲಾಗಿದೆ.
ಕಾವೂರು ಕಡೆಯಿಂದ ಕಟೀಲು, ಬಜ್ಜೆಗೆ ತೆರಳುವ ವಾಹನಗಳಿಗೂ ಸಂಚಾರಕ್ಕೆ ಅವಕಾಶ ಇಲ್ಲ. ಮಂಗಳೂರು ನಗರ ಭಾಗದಿಂದ ಬಜ್ಜೆಗೆ ತೆರಳಬೇಕಿದ್ದರೆ ಇನ್ನು ಗುರುಪುರ ಸೇತುವೆಯ ಮೂಲಕ ಸುತ್ತು ಬಳಸಿ ತೆರಳಬೇಕಾಗಿದೆ.
ಮಂಗಳೂರು ಗ್ರಾಮೀಣ ಭಾಗದಿಂದ ನಗರಕ್ಕೆ ಪ್ರಮುಖ ಕೊಂಡಿಯಾಗಿದ್ದ ಸೇತುವೆ ಸಂಪೂರ್ಣ ಕುಸಿಯುವ ಆತಂಕ ಸೃಷ್ಟಿಯಾಗಿದೆ.
ಇಲ್ಲಿ ಹೊಸ ಸೇತುವೆ ಕಾಮಗಾರಿ ನಡೆಯುತಿದ್ದು ಹೀಗಾಗಿ ಒಂದೇ ಭಾಗದಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸೇತುವೆ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆ ಬಿರುಕು ಬಿಟ್ಟಿದೆ ಎನ್ನಲಾಗಿದೆ. ಸ್ಥಳಕ್ಕೆ ಮಂಗಳೂರು ನಗರದ ಪೊಲೀಸ್ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.