ಬೆಂಗಳೂರು: ರಾಜ್ಯದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರವನ್ನು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಗುರುವಾರ ವಾಪಸ್ ಪಡೆದಿದೆ. ಮೊದಲನೇ ದಿನ ಸುಮಾರು ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿದ್ದ ಮುಷ್ಕರಕ್ಕೆ ಚೆನ್ನಾರೆಡ್ಡಿ ನೇತೃತ್ವದ ಲಾರಿ ಮಾಲೀಕರ ಮತ್ತೊಂದು ಬಣ ಮುಷ್ಕರಕ್ಕೆ ಬೆಂಬಲ ನೀಡಲಿಲ್ಲ. ಹಾಗಾಗಿ ಎರಡನೇ ದಿನಕ್ಕೆ ಮುಷ್ಕರವು ತನ್ನ ವೇಗವನ್ನು ಕಳೆದುಕೊಂಡಿತು.
ಈ ನಡುವೆ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಖಪ್ಪರವರು ಸಾರಿಗೆ ಸಚಿವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಹೇಗಿದ್ದರೂ ಮಾರನೆ ದಿನ ಮತ್ತಷ್ಟು ಸಹಜ ಸ್ಥಿತಿಗೆ ಬರುತ್ತಿದ್ದ ಮುಷ್ಕರವು ತಮ್ಮ ಕೈತಪ್ಪಲಿದೆ ಎಂಬುದನ್ನು ಅರಿತ ಬಹುತೇಕ ಸಂಘಟಕರು ಮಾತುಕತೆಗೆ ಮುಂದಾದರು.
ಸಂಘದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅದಾಗಲೇ ಎರಡು ಬಾರಿ ಮುಖಂಡರೊಂದಿಗೆ ಚರ್ಚಿಸಿದ್ದರು. ಮುಖ್ಯಮಂತ್ರಿಗಳು ಸಹ ಒಂದು ಬಾರಿ ಸಂಧಾನ ಸಭೆ ನಡೆಸಿದ್ದರು. ಮೊದಲೆರಡು ಸಂಧಾನದಲ್ಲಿಯೇ ಅವರ ಪ್ರಮುಖ ಬೇಡಿಕೆಗಳಾದ ಡೀಸೆಲ್ ಬೆಲೆ ಇಳಿಸುವ, ಟೋಲ್ ರದ್ದು ಮಾಡುವ ಬೇಡಿಕೆಗಳನ್ನು ಹೊರತುಪಡಿಸಿ, ಉಳಿದ ಬೇಡಿಕೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಈಡೇರಿಸುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದ್ದರು.
ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್ನೆಸ್ ಸರ್ಟಿಫಿಕೆಟ್) ನವೀಕರಣ ಶುಲ್ಕ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ನಿರಾಕರಿಸುವುದು ಮತ್ತು ನವೀಕರಣಕ್ಕೆ ₹13 ಸಾವಿರ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಒಪ್ಪಿಕೊಳ್ಳದೇ ಕಡಿಮೆ ಮಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಹಾಗೂ ಡೀಸೆಲ್ ದರವನ್ನು ಹಿಂದಿನ ಬಿ.ಜೆ.ಪಿ ಸರ್ಕಾರ 2023ಕ್ಕಿಂತ ಮೊದಲು ಯದ್ವಾತದ್ವಾ ಏರಿಕೆ ಮಾಡಿರುವ ಕ್ರಮವನ್ನು ಲಾರಿ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವರು, ಈ ಬಗ್ಗೆ ತಾವುಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಲಹೆ ನೀಡಿದರಲ್ಲದೆ, ತಾವೂ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ, ಆನ್ಲೈನ್ನಲ್ಲಿ ದಂಡ ಪಾವತಿ ವ್ಯವಸ್ಥೆ ಜಾರಿ, ಹಲವು ವರ್ಷಗಳಿಂದ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡವರಿಗೆ ಒಂದು ಬಾರಿಯ ತೀರುವಳಿಗೆ (ಒನ್ ಟೈಮ್ ಸೆಟ್ಸ್ಮೆಂಟ್) ಅವಕಾಶ ಈ ಬಗ್ಗೆ ಸಕಾರಾತ್ಮಕವಾಗಿ ಸಾರಿಗೆ ಸಚಿವರು ಸ್ಪಂದಿಸಿದ್ದಾರೆ. ನಗರಗಳಿಗೆ ಸರಕು ವಾಹನಗಳ ಪ್ರವೇಶಕ್ಕೆ ಕೇವಲ 5 ಗಂಟೆ ಅವಕಾಶ ನೀಡಿರುವ ಬಗ್ಗೆ, ನಗರಗಳಿಗೆ ಸರಕು ಸಾಗಾಣಿಕೆ ವಾಹನಗಳ ಪ್ರವೇಶ ನಿರ್ಬಂಧ ಸಡಿಲಿಕೆ, ಗಡಿ ತನಿಖಾ ಠಾಣೆ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಹಾಗೂ ಪೊಲೀಸರ ಕಿರುಕುಳ ತಪ್ಪಿಸಲು ಗೃಹ ಸಚಿವರೊಡನೆ ಮಾತುಕತೆ ನಡೆಸುವುದಾಗಿ ರಿಗೆ ಸಚಿವರು ಭರವಸೆ ನೀಡಿದ್ದಾರೆ.
ಇದರಿಂದ ಸಂತುಷ್ಟರಾದ ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪರವರು ಮುಷ್ಕರ ವಾಪಸ್ಸು ಪಡೆದಿದ್ದಾರೆ.