ಶ್ರೀಪೆರಂಬುದೂರು/ನವದೆಹಲಿ: ರಾಷ್ಟ್ರೀಯ ಏಕತೆ, ಕೋಮು ಸಾಮರಸ್ಯ, ಜಾತ್ಯತೀತತೆ ಹಾಗೂ ಶಾಂತಿಯ ಸಂದೇಶವನ್ನು ಸಾರುವ ಶ್ರೀ ರಾಜೀವ್ ಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆಯ 35ನೇ ಆವೃತ್ತಿಗೆ ಆಗಸ್ಟ್ 9ರಂದು ಶ್ರೀಪೆರಂಬುದೂರಿನಿಂದ ಚಾಲನೆ ದೊರೆಯಲಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೀಡಾದ ಶ್ರೀಪೆರಂಬುದೂರಿನಲ್ಲಿ ಶಾಶ್ವತ ಜ್ಯೋತಿ ಬೆಳಗಿಸಿದ ಬಳಿಕ ಯಾತ್ರೆ ಆರಂಭವಾಗಲಿದೆ.
ಸುಮಾರು 2,982 ಕಿಲೋಮೀಟರ್ಗಳ 12 ದಿನಗಳ ಯಾತ್ರೆ ಎಂಟು ರಾಜ್ಯಗಳ ಮೂಲಕ ಸಾಗಲಿದ್ದು, ಆಗಸ್ಟ್ 19ರಂದು ರಾಷ್ಟ್ರ ರಾಜಧಾನಿ ನವದೆಹಲಿಯನ್ನು ತಲುಪಲಿದೆ. ತಮಿಳುನಾಡಿನಿಂದ ಆರಂಭವಾಗುವ ಯಾತ್ರೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ನಗರಗಳು ಹಾಗೂ ಪಟ್ಟಣಗಳ ಮೂಲಕ ಸಾಗಲಿದೆ.

ಕರ್ನಾಟಕದಲ್ಲಿ ಬೆಂಗಳೂರು, ಚಿತ್ರದುರ್ಗ, ರಾಯಚೂರು ಹಾಗೂ ಕಲಬುರಗಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಯಾತ್ರೆ ಸಾಗಲಿದೆ. ನಂತರ ಹೈದರಾಬಾದ್, ಆದಿಲಾಬಾದ್, ಬೇತುಲ್, ಗುಣ, ಗ್ವಾಲಿಯರ್ ಮತ್ತು ಗುರುಗ್ರಾಮ್ ಮೂಲಕ ನವದೆಹಲಿಗೆ ಪ್ರವೇಶಿಸಲಿದೆ.
ಪ್ರತಿ ವರ್ಷ ನಡೆಯುವ ಈ ಯಾತ್ರೆಯು ಆಗಸ್ಟ್ 20ರಂದು ವೀರ ಭೂಮಿಯಲ್ಲಿ ಅಂತ್ಯಗೊಳ್ಳಲಿದೆ. ಈ ದಿನವನ್ನು ಸದ್ಭಾವನಾ ದಿವಸ್ ಆಗಿ ಆಚರಿಸಲಾಗುತ್ತಿದ್ದು, ರಾಜೀವ್ ಗಾಂಧಿಯವರ ಜನ್ಮದಿನವನ್ನು ಸ್ಮರಿಸಲಾಗುತ್ತದೆ.
ಯಾತ್ರೆಯ ಹಿನ್ನೆಲೆ 1990ರ ಅಕ್ಟೋಬರ್ 19ರಂದು ರಾಜೀವ್ ಗಾಂಧಿಯವರು ಹೈದರಾಬಾದ್ನ ಚಾರ್ಮಿನಾರ್ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ, ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೋಮು ಸಾಮರಸ್ಯಕ್ಕಾಗಿ ಕರೆ ನೀಡಿದ ಘಟನೆಗೆ ಸಂಬಂಧಿಸಿದೆ. 1991ರ ಮೇ 21ರಂದು ಶ್ರೀಪೆರಂಬುದೂರಿನಲ್ಲಿ ಅವರ ಹತ್ಯೆಯಾದ ಬಳಿಕ ಈ ಜ್ಯೋತಿ ಯಾತ್ರೆಯ ಪರಂಪರೆ ಮುಂದುವರಿದಿದೆ.
ಯಾತ್ರೆಯು ಭಾರತದ ಭಾಷಾ, ಧಾರ್ಮಿಕ ಹಾಗೂ ಪ್ರಾದೇಶಿಕ ವೈವಿಧ್ಯತೆಯ ನಡುವೆಯೂ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಯಾತ್ರೆ ಸಮಿತಿಯ ಉಪಾಧ್ಯಕ್ಷ ಹಾಗೂ ವಕ್ತಾರ ಸೈಯದ್ ಮೊಹ್ಸಿನ್ ಮಾತನಾಡಿ, ವಿಭಜನೆಯ ಬದಲು ಏಕತೆಯನ್ನು ಆಯ್ಕೆ ಮಾಡುವ ಸಂದೇಶವು ಇಂದಿನ ಯುವಜನತೆಗೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಆರ್. ದೊರೈವೇಲು ಮಾತನಾಡಿ, 35 ವರ್ಷಗಳಿಂದ ಸದ್ಭಾವನೆಯ ಜ್ಯೋತಿಯನ್ನು ಜೀವಂತವಾಗಿಟ್ಟುಕೊಂಡು ಬಂದಿರುವ ಯಾತ್ರೆ, ಭಾರತೀಯರು ಒಗ್ಗಟ್ಟಾಗಿ ನಿಂತಾಗ ಇನ್ನಷ್ಟು ಬಲಿಷ್ಠರಾಗುತ್ತಾರೆ ಎಂಬ ಸಂದೇಶವನ್ನು ಸಾರುತ್ತಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 19ರಂದು ಯಾತ್ರೆ 24 ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿ ಹಾಗೂ ಇಂದಿರಾ ಭವನಕ್ಕೆ ತೆರಳಲಿದೆ. ಆಗಸ್ಟ್ 20ರಂದು ವೀರ ಭೂಮಿಯಲ್ಲಿ ರಾಷ್ಟ್ರೀಯ ಏಕತೆ, ಕೋಮು ಸಾಮರಸ್ಯ ಮತ್ತು ವಿಶ್ವಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಯಾತ್ರೆ ಸಮಾಪ್ತಿಯಾಗಲಿದೆ.







































































