ವರದಿ: ಮಂಜುನಾಥ ಗಾಣಿಗ
ಉಡುಪಿ: ನವರಾತ್ರಿಗೆ ದಿನಗಣನೆ ಆರಂಭಗೊಂಡಿದೆ. ಇದೇ ತಿಂಗಳ ಏಳರಿಂದ ಹದಿನೈದರ ತನಕ ನವರಾತ್ರಿ ಉತ್ಸವ ನಡೆಯಲಿದೆ. ದಕ್ಷಿಣ ಭಾರತದ ಪ್ರಸಿದ್ಧ ದೇವಿಯ ಕ್ಷೇತ್ರಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ಈ ಬಾರಿ ಸರಳವಾಗಿ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ.
ಅಕ್ಟೋಬರ್ 7ರಿಂದ 15ರವರೆಗೆ ದೇಗುಲದಲ್ಲಿ ನವರಾತ್ರಿ ಉತ್ಸವವನ್ನು ಸರ್ಕಾರದ ಮಾರ್ಗಸೂಚಿಯಂತೆ ನಡೆಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಕ್ಷೇತ್ರದ ಒಳಗಷ್ಟೇ ಸರಳವಾಗಿ ಈ ಬಾರಿ ಉತ್ಸವ ಆಚರಣೆಗಳು ನಡೆಯಲಿವೆ.
ವಿದ್ಯಾರಂಭ, ಅನ್ನಪ್ರಾಶನ ಕಾರ್ಯಕ್ರಮಗಳು ಕೂಡ ಸಂಪ್ರದಾಯಕ್ಕೆ ಸೀಮಿತವಾಗಿ ನಡೆಯಲಿವೆ. ಅಕ್ಟೋಬರ್ 14ರಂದು ನಡೆಯುವ ನವಮಿ ರಥೋತ್ಸವದಂದು ಕೂಡ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ಬಂದನಂತರ ಕಳೆದ ಎರಡು ವರ್ಷಗಳಿಂದ ಇದೇ ಮಾದರಿಯಲ್ಲಿ ಅತ್ಯಂತ ಸರಳವಾಗಿ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.