ಬೆಂಗಳೂರು: ತಕ್ಷಣವೇ ಕೋಲಾರ ಜಿಲ್ಲೆಯಲ್ಲಿ 300 ಆಕ್ಸಿಜನ್ ಬೆಡ್ಗಳು, 150 ಐಸಿಯು ಬೆಡ್ಗಳು ಹಾಗೂ 40 ವೆಂಟಿಲೇಟರ್ಗಳ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಿಂದಲೇ ಮಂಗಳವಾರ ವರ್ಚುಯಲ್ ಸಭೆಯ ಮೂಲಕ ಕೋಲಾರ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು, ಎಲ್ಲ ತಾಲೂಕುಗಳ ಆರೋಗ್ಯ ಮತ್ತಿತರೆ ಇಲಾಖೆಗಳ ಅಧಿಕಾರಿಗಳ ಜತೆ ಕೋವಿಡ್ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಮಯ ಪೋಲು ಮಾಡದೇ ತಕ್ಷಣದಿಂದಲೇ ಎಲ್ಲ ಕೆಲಸಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಮಾಡಲಾಗುವುದು ಎಂದರು.
ಸದ್ಯಕ್ಕೆ ಕೋಲಾರ ಜಿಲ್ಲೆಯಲ್ಲಿ 700 ಕೋವಿಡ್ ಬೆಡ್ಗಳಿದ್ದು, ಈ ಪೈಕಿ 190 ಐಸಿಯು ಮತ್ತು ವೆಂಟಿಲೇಟರ್ ಬೆಡ್ಗಳಿವೆ. ಜಿಲ್ಲಾ ಕೇಂದ್ರದಲ್ಲಿರುವ ಎಸ್ಎನ್ನಾರ್ ಆಸ್ಪತ್ರೆಯಲ್ಲಿ ಇನ್ನು 10 ದಿನಗಳ ಒಳಗಾಗಿ ಪ್ರತಿ ನಿಮಿಷಕ್ಕೆ ಸಾವಿರ ಕೆಎಲ್ ಆಮ್ಲಜನಕ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. 6 ಕೆಎಲ್ ಆಕ್ಸಿಜನ್ ಸಂಗ್ರಹದ ವ್ಯವಸ್ಥೆಯ ಕೆಲಸ ಪ್ರಗತಿಯಲ್ಲಿದೆ. ಇನ್ನೆರಡು ದಿನದಲ್ಲಿ ಸಿವಿಲ್ ಕೆಲಸ ಮುಗಿಯಲಿದೆ ಎಂದು ಡಿಸಿಎಂ ತಿಳಿಸಿದರು.
ಜಿಲ್ಲಾ ಕೇಂದ್ರವೂ ಸೇರಿ ಯಾವುದೇ ತಾಲೂಕು ಕೇಂದ್ರದಲ್ಲೂ ಆಮ್ಲಜನಕದ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದೇ ರೀತಿ ರೆಮಿಡಿಸ್ವೀರ್ ಸಾಕಷ್ಟು ದಾಸ್ತಾನು ಇದ್ದು, ಅಗತ್ಯವಿರುವ ಯಾವ ಔಷಧವೂ ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.
ಎಲ್ಲ ಬೆಡ್ಗಳಿಗೂ ಆಕ್ಸಿಜನ್ ಸಂಪರ್ಕ
ಇದಕ್ಕೂ ಮೊದಲು ಪರಿಶೀಲನಾ ಸಭೆಯಲ್ಲಿ ಮಾತನಾಡಿ ಡಿಸಿಎಂ ಅಶ್ವತ್ಥನಾರಾಯಣ ಅವರು; “ಕೋಲಾರ ಜಿಲ್ಲೆಯಲ್ಲಿರುವ 750 ಆಕ್ಸಿಜನ್ ಬೆಡ್ಗಳು ಹಾಗೂ 190 ಐಸಿಯು ವೆಂಟಿಲೇಟರ್ಗಳ ನಿರ್ವಹಣೆಗೆ ನುರಿತ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು. ಆದಷ್ಟು ಬೇಗ ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲ ಬೆಡ್ಗಳನ್ನು ಆಕ್ಸಿಜನ್ ಬೆಡ್ಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಹತ್ತಿರದ ದೇವರಾಜ ಅರಸು ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲೂ ಆಕ್ಸಿಜನ್ ಬೆಡ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಾಕಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಡಿಸಿಎಂ ಸಭೆಗೆ ಮಾಹಿತಿ ನೀಡಿದರು.
ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ 622 ಸೋಂಕಿತರು ಪತ್ತೆಯಾಗಿದ್ದಾರೆ. ಈಗ ಜಿಲ್ಲೆಯಲ್ಲಿ 3,600 ಜನ ಸೋಂಕಿತರಿದ್ದಾರೆ. ಇವರಲ್ಲಿ ಶೇ.10ರಷ್ಟು ಅಂದರೆ, 360 ಜನರಿಗೆ ಮಾತ್ರ ಆಕ್ಷಿಜನ್ ಅವಶ್ಯಕತೆ ಇರುತ್ತದೆ. ಉಳಿದವರು ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಬಹುದು. ಜಿಲ್ಲಾಡಳಿತ ಎಲ್ಲ ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದು, ಇನ್ನು ವೇಗವಾಗಿ ಜನರಿಗೆ ಸ್ಪಂದಿಸುವಂತೆ ಡಿಸಿಗೆ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್ ನಿರ್ದೇಶನ ನೀಡಿದರು.